ನಿರ್ಮಲಾ ಸೀತಾರಾಮನ್ 9ನೇ ಬಜೆಟ್: ಆತ್ಮನಿರ್ಭರ, ವಿಕಸಿತ ಭಾರತಕ್ಕೆ ದಾರಿ: ಬಿ.ವೈ. ವಿಜಯೇಂದ್ರ
ಶಿವಮೊಗ್ಗ: ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ತಮ್ಮ 9ನೇ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದು, ಆತ್ಮನಿರ್ಭರ, ವಿಕಸಿತ ಭಾರತ ಮತ್ತು ಸ್ವಾವಲಂಬನೆ ಎಂಬ ಗುರಿಗಳನ್ನು ಗಮನದಲ್ಲಿ ಇಟ್ಟುಕೊಂಡು ಅತ್ಯುತ್ತಮ ಬಜೆಟ್ ರೂಪಿಸಿದ್ದು ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಸ್ಪಷ್ಟತೆಯಿಂದ ಸ್ಪಷ್ಟತೆ ಕಡೆಗೆ, ಆಡಂಬರದಿಂದ ಸುಧಾರಣೆಯತ್ತ, ಜನಪ್ರಿಯತೆಗಿಂತ ಜನಹಿತ ಮುಖ್ಯ ಎಂಬುದನ್ನು ಬಜೆಟ್ ಮೂಲಕ ಸಲೀಸಾಗಿ ಋಜುವಾತು ಮಾಡಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.
ಜಾಗತಿಕ ಪರಿಸ್ಥಿತಿಯನ್ನೂ ಗಮನದಲ್ಲಿಟ್ಟುಕೊಂಡು, ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಭಾರತದ ವಿರುದ್ಧದ ಸುಂಕ–ವಾಣಿಜ್ಯ ಸಮರ ನಡುವಿನ ಪರಿಣಾಮಗಳ ನಡುವೆ, 2047ಕ್ಕೆ ವಿಕಸಿತ ಭಾರತ ಆಗಬೇಕೆಂಬ ಪ್ರಧಾನಮಂತ್ರಿಯ ಗುರಿಯನ್ನು ಸಾಧಿಸಲು ಅಗತ್ಯ ಸುಧಾರಣೆಗಳನ್ನು ಹಣಕಾಸು ಸಚಿವೆ ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಣಕಾಸು ಸಚಿವರು ಕೈಗಾರಿಕೆ, ಪ್ರವಾಸೋದ್ಯಮ, ಸೆಮಿ-ಕಂಡಕ್ಟರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕೃಷಿ ಕ್ಷೇತ್ರ ಸೇರಿದಂತೆ ಎಲ್ಲಾ ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದಾರೆ. ದೇಶದ ಆರ್ಥಿಕ ಶಿಸ್ತು ಕಾಪಾಡುವ ಮಹತ್ವದ ಜವಾಬ್ದಾರಿ ಇವರ ಮೇಲಿದ್ದರೂ, ಹಣಕಾಸು ಕೊರತೆಯನ್ನು ಶೇ. 4.4ಕ್ಕೆ ತಗ್ಗಿಸಿದ್ದದ್ದು ಇದರ ಸಾಕ್ಷಿ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.






