ಬಡವರಿಗಾಗಿ ಮೊಬೈಲ್ ಆ್ಯಂಬುಲೆನ್ಸ್ ತಂದ ಆ್ಯಂಬುಲೆನ್ಸ್ ದಾದಾ..!
ಕರೀಮುಲ್ ಹಕ್. ಬಡ ರೋಗಿಗಳ ಪಾಲಿನ ಆಪತ್ಭಾಂದವ. ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ಧಲಾಬರಿ ಮತ್ತು ಸುತ್ತಮುತ್ತಲ ಗ್ರಾಮಗಳ ಜನರಿಗೆ 50 ವಯಸ್ಸಿನ ಕರೀಮುಲ್ ಹಕ್ ಬೈಕ್ ಆಂಬ್ಯಲೆನ್ಸ್ ದಾದಾ ಎಂದೇ ಖ್ಯಾತಿರಾಗಿದ್ದಾರೆ. ಟೀ ಎಸ್ಟೇಟ್ ಕಾರ್ಮಿಕರ ಮತ್ತು ಹಳ್ಳಿಗರಿಗೆ ಭರವಸೆಯ ಆಪತ್ಭಾಂದವ ಆಗಿದ್ದಾರೆ.
ಕರೀಮುಲ್ ಅವರು ತಮ್ಮ ಬೈಕ್ ಮೇಲೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಕರೀಮುಲ್ ಅವರು ಈ ಸೇವೆ ಮಾಡಲು ಕಾರಣವಾದರೂ ಏನೆಂದರೆ, ಈಗ್ಗೆ ಕೆಲ ವರ್ಷಗಳ ಹಿಂದೆ ಕರೀಮುಲ್ ತಾಯಿ ಅನಾರೋಗ್ಯದಿಂದ ಬಳುತ್ತಿದ್ದರು. ಆಸ್ಪತ್ರೆಗೆ ಹೋಗಲು ಆಂಬ್ಯುಲೆನ್ಸ್ ಸಿಗದೇ ಊರಿನ ಅನೇಕರ ಮನೆಗಳ ಬಾಗಿಲು ಬಡಿದು ಸಹಾಯ ಕೇಳಿದರು. ಆದರೂ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಕರೀಮುಲ್ ತಾಯಿ ಮರಣ ಹೊಂದಿದರು.
ನೋಡಿ, ಆಂಬ್ಯುಲೆನ್ಸ್ ಇಲ್ಲದೆ, ತಾಯಿಗೆ ಸೂಕ್ತ ವೈದ್ಯಕೀಯ ಸೇವೆ ಸಿಗದೆ ಮರಣವನ್ನಪ್ಪಿದ್ದರಿಂದ ವಿಚಲಿತಗೊಂಡ ಕರೀಮುಲ್, ತಮ್ಮ ತಾಯಿಗೆ ಬಂದ ಸ್ಥಿತಿ ಮತ್ಯಾರಿಗೂ ಬರಬಾರದು, ಆಂಬ್ಯುಲೆನ್ಸ್ ಸೌಕರ್ಯ ಇಲ್ಲದೆ ಯಾರು ಕೂಡ ಸಾಯಬಾರದು ಎಂದು ನಿರ್ಧರಿಸಿದ್ರು. ಅಂದುಕೊಂಡಂತೆ ಕರೀಮುಲ್ ಬಹಳ ಯೋಚನೆ ಮಾಡಿ ತಾನು ಕಷ್ಟಪಟ್ಟು ಕೂಡಿಟ್ಟ ಹಣದಿಂದ ಬೈಕ್ ವೊಂದನ್ನು ಖರೀದಿಸುತ್ತಾರೆ. ಆಮೇಲೆ, ಅದನ್ನು ಆಂಬುಲೆನ್ಸ್ ರೀತಿ ತನ್ನ ಬೈಕ್ ಮಾರ್ಪಾಡು ಮಾಡಿಸಿಕೊಳ್ಳುತ್ತಾರೆ.
ಕರೀಮುಲ್ ಅವರು, ಅದೇ ಆಂಬ್ಯುಲೆನ್ಸ್ ಬೈಕ್ ನಿಂದ ಹಲವಾರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ, ಜೀವ ಉಳಿಸಿದ್ದಾರೆ. ಕರೀಮುಲ್ ಅವರು ತಮ್ಮೂರು ಧಲಾಬರಿ ಹಾಗೂ ಸುತ್ತಮುತ್ತಲಿನ 20 ಹಳ್ಳಿಗಳ ಜನರ ಸಂರಕ್ಷಕರಾಗಿದ್ದಾರೆ. ಈ ಹಳ್ಳಿಗಳಲ್ಲಿ ಯಾವುದೇ ಕಾಂಕ್ರಿಟ್ ರಸ್ತೆಗಳು, ವಿದ್ಯುತ್, ಮೊಬೈಲ್ ಟವರ್ ಗಳ ಮತ್ತು ಇತರ ಮೂಲ ಸೌಕರ್ಯಗಳಿಲ್ಲ. ಈ ಬೆಲ್ಟ್ ಗಳಲ್ಲಿ ಹೆಚ್ಚಿನ ಗ್ರಾಮಸ್ಥರು ದಿನಗೂಲಿ ಕಾರ್ಮಿಕರು ಮತ್ತು ಅಥವಾ ಸಣ್ಣ ಸಣ್ಣ ರೈತರು ಇದ್ದಾರೆ.
ಕರೀಮುಲ್ ಇರುವ ಏರಿಯಾಗಳಲ್ಲಿ ಜನರು ಏನಾದರೂ ಕಾಯಿಲೆಯಾದರೆ ಸರಿಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗಳಿಗೆ ಹೋಗಬೇಕು. ಅಷ್ಟೊಂದು ವಾಹನದ ವ್ಯವಸ್ಥೆ ಇಂದಿಗೂ ಇಲ್ಲ. ಹಾಗಾಗಿ, ತನ್ನ ಬೈಕ್ ಅಂಬ್ಯುಲೆನ್ಸ್ ಸೇವೆ ಮಾತ್ರವಲ್ಲದೆ ಸ್ಥಳೀಯ ವೈದ್ಯರಿಂದ ಕಲಿತುಕೊಂಡ ನಂತರ ಕರೀಮುಲ್ ಹಳ್ಳಿಗರಿಗೆ ಮೂಲಭೂತ ಮತ್ತು ಚಿಕಿತ್ಸೆ ನೀಡುತ್ತಾರೆ. ಅವರು ನಿಯಮಿತ ಮಧ್ಯಂತರಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಾರೆ.
ಆಂಬ್ಯಲೆನ್ಸ್ ದಾದಾ ಕರೀಮುಲ್ ಅವರು, ತಾನು ನುರಿತ ವೈದ್ಯರಿಂದ ಕಲಿತ ವಿದ್ಯೆಯಿಂದ ತಮ್ಮ ಬಳಿ ಬಂದ ಜನರಿಗೆ ಅಲ್ಪಸ್ವಲ್ಪ ವೈದ್ಯಕೀಯ ಚಿಕಿತ್ಸೆ ನೀಡುತ್ತಾ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿ ಗಳಿಸುತ್ತಾರೆ. ಆ ಹಣದಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ಬೈಕ್ ರಿಪೇರಿ, ಪೆಟ್ರೋಲ್ ಮತ್ತು ಬಡವರ ಔಷಧಿಗಳಿಗಾಗಿ ಖರ್ಚು ಮಾಡುತ್ತಿದ್ದಾರೆ. ಈವರೆಗೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರ ಜೀವ ರಕ್ಷಣೆ ಮಾಡಿದ್ದಾರೆ. ಇವರ ಸಾರ್ವಜನಿಕರ ಸೇವೆ ಗೆ ಅತ್ಯುನ್ನತ್ತ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ.
ಅಷ್ಠೇ ಏಕೆ? ಪ್ರಧಾನಿ ನರೇಂದ್ರ ಮೋದಿಯವರು ಕರೀಮುಲ್ ಅವರ ಮೊಬೈಲ್ ನಲ್ಲೇ ಅವರೊಂದಿಗೆ ಸೆಲ್ಪಿ ಪೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ಮತ್ತೆ, ಕಾಂಕ್ರಿಟ್ ರಸ್ತೆ, ಸೇತುವೆ ನಿರ್ಮಾಣ, ಮೊಬೈಲ್ ಟವರ್, ವಿದ್ಯುತ್ ಸೌಕರ್ಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಾಗಿ ಕರೀಮುಲ್ ಅವರಿಗೆ ಹೇಳಿದ್ದರು. ಅದರಂತೆ ಪ್ರಧಾನಿ ನರೇಂದ್ರ ಅವರ ಕೂಡ ನಡೆದುಕೊಂಡಿದ್ದಾರಂತೆ. ಇನ್ನು ಕರೀಮುಲ್ ಸೇವೆಯನ್ನು ಶ್ಲಾಘಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ.
ಏನೇ ಹೇಳಿ ತನಗಾದ ನೋವು, ಯಾತನೆ ಮತ್ಯಾರಿಗೂ ಬರಬಾರದು ಎಂದು ಉಚಿತವಾಗಿ ಬೈಕ್ ಆಂಬ್ಯಲೆನ್ಸ್ ಸೇವೆ ನೀಡುತ್ತಿರುವ ಕರೀಮುಲ್ ಅವರಿಗೆ ನಮ್ಮೆಲ್ಲರ ಒಂದು ಸಲಾಂ.