ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ರಾತ್ರಿ ನಿಷೇಧಾಜ್ಞೆ, ವಾರಾಂತ್ಯದ ನಿಷೇಧಾಜ್ಞೆ ಹಲವು ರೀತಿಯ ನಿರ್ಬಂಧ ವಿಧಿಸಿದೆ.
ಮತ್ತೊಂದೆಡೆ ನಗರದಲ್ಲಿ ಜನಸಂಚಾರ ದಟ್ಟಣೆ ತಡೆಯಲು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರು ಸೆಕ್ಷನ್ 144 ಜಾರಿ ಮಾಡಿದ್ದಾರೆ.
ವಾರಾಂತ್ಯದಲ್ಲಿ ಸಾಮಾನ್ಯವಾಗಿರುವ ಜನಜಂಗುಳಿ ತಪ್ಪಿಸಲು ನಿಷೇಧಾಜ್ಞೆ ಜಾರಿಯಾಗಿದೆ. ಶುಕ್ರವಾರ ರಾತ್ರಿ 8 ಗಂಟೆಯಿಂದಲೇ ಆರಂಭವಾಗುವ ನಿಷೇಧಾಜ್ಞೆ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತವಾಗಲಿದೆ. ಅಲ್ಲದೇ, ಸದ್ಯ ಜಾರಿಯಲ್ಲಿರುವ ರಾತ್ರಿ ನಿಷೇಧಾಜ್ಞೆ ಕೂಡ ಜನವರಿ 19ರ ವರೆಗೆ ಮುಂದುವರೆಯಲಿದೆ. ಇದರಿಂದ ಉದ್ಯಮಗಳು, ಶಾಪಿಂಗ್ ಮಾಲ್, ಥಿಯೇಟರ್, ಶಾಪಿಂಗ್ ಸ್ಟ್ರೀಟ್ ಗಳಿಗೆ ನಷ್ಟವಾಗಲಿದೆ. ಅಲ್ಲದೇ, ಇಂದಿನಿಂದ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಸಾರ್ವಜನಿಕ ಅಂಗಡಿಗಳಲ್ಲಿ ಶೇ. 50ರಷ್ಟು ಮಿತಿ ಜಾರಿಗೆ ಬರಲಿದೆ.
144 ಸೆಕ್ಷನ್ ಜಾರಿ:
ಈ ನಡುವೆ ನಗರದಲ್ಲಿ ಜನಸಂಚಾರ ದಟ್ಟಣೆ ತಡೆಗೆ ನಗರ ಪೊಲೀಸ್ ಆಯುಕ್ತರು 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಇಂದಿನಿಂದ ಜನವರಿ 19ವರೆಗೂ ನಗರದಲ್ಲಿ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಪ್ರತಿಭಟನೆ, ರ್ಯಾಲಿ, ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ಕಾನೂನು ನಿಯಮ ಉಲ್ಲಂಘನೆ ಕಂಡು ಬಂದರೆ ಅಂತಹವರ ವಿರುದ್ಧ ಐಪಿಸಿ 188 ಸೆಕ್ಷನ್, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.