ಬೆಂಗಳೂರಿನಲ್ಲಿ ನಿಲ್ಲದ ರೋಡ್ರೇಜ್: ಬಿಎಂಟಿಸಿ ಚಾಲಕ-ಕಂಡಕ್ಟರ್ ಮೇಲೆ ಕ್ಯಾಬ್ ಚಾಲಕನ ಹಲ್ಲೆ
ಬೆಂಗಳೂರು: ಬೆಂಗಳೂರು ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಪೊಲೀಸರಿಗೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಮತ್ತೊಂದು ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಡೆ ನಗರದಲ್ಲಿ ಬೆಳಕಿಗೆ ಬಂದಿದೆ..
ಬೆಳಗ್ಗೆ ಸುಮಾರು 11.30ರ ವೇಳೆ ಬಿಎಂಟಿಸಿ ಬಸ್ನ ಚಾಲಕ ನಾಗೇಶ್ ಮತ್ತು ಕಂಡಕ್ಟರ್ ಕೆಂಚಪ್ಪ ಮೇಲೆ ಕ್ಯಾಬ್ ಚಾಲಕ ನರಸಿಂಹಯ್ಯ ಹಲ್ಲೆಗೆ ಮುಂದಾಗಿದ್ದಾನೆ.
ಶಿವಾಜಿನಗರದಿಂದ ಯಲಹಂಕ ಕಡೆಗೆ ತೆರಳುತ್ತಿದ್ದ ಬಸ್ಗೆ ಕ್ಯಾಬ್ ಚಾಲಕನ ವಾಹನ “ಟಚ್ ಆಯ್ತು” ಎಂಬ ಕಾರಣಕ್ಕೆ, ಕ್ಯಾಬ್ ಚಾಲಕ ಸುಮಾರು 1 ಕಿಲೋಮೀಟರ್ ಬಸ್ ಅನ್ನು ಹಿಂಬಾಲಿಸಿ, ಬಸ್ ನಿಲ್ಲಿಸಿ ಗಲಾಟೆ ಶುರುಮಾಡಿದ್ದಾನೆ. ಬಸ್ ಚಾಲಕ ನಾಗೇಶ್ ವಿವಾದ ತಪ್ಪಿಸಲು “ಹೋಗಿ” ಎಂದು ಹೇಳಿದರೂ, ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ.
ಘಟನೆ ವೇಳೆ ಪ್ರಯಾಣಿಕರು ಈ ಸಂಪೂರ್ಣ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದು, ನಂತರ ಚಾಲಕ ಹಾಗೂ ಕಂಡಕ್ಟರ್ ಬಸ್ ಅನ್ನು ನೇರ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತಿರುಗಿಸಿ ದೂರು ದಾಖಲಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ






