ಮೂರು ವಾರಗಳ ವಿರಾಮದ ನಂತರ ನೈಋತ್ಯ ಮುಂಗಾರು ಮತ್ತೆ ಚುರುಕುಗೊಳ್ಳಲು ಅಣಿಯಾಗಿದ್ದು, ಜುಲೈ 8ರ ನಂತರ ಮುಂಗಾರು ಮಳೆ ಪುನರಾರಂಭವಾಗಲಿದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ ರಾಜೀವನ್ ಮಾಹಿತಿ ನೀಡಿದ್ದಾರೆ.
ಜುಲೈ 8ರಿಂದ ದಕ್ಷಿಣ, ಪಶ್ಚಿಮ ಕರಾವಳಿ ಮತ್ತು ಪೂರ್ವ ಮಧ್ಯ ಭಾರತದಲ್ಲಿ ಮುಂಗಾರು ಚುರುಕಾಗುತ್ತದೆ. ಈ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಜುಲೈ 12ರ ನಂತರ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ಬದಲಾವಣೆಗಳು ಕಾಣಿಸಿಕೊಳ್ಳಲಿವೆ ಎಂದು ತಿಳಿಸಿದ್ದಾರೆ. ಮುಂದೆ ಓದಿ…
ಜೂನ್ 19ರ ನಂತರ ಕ್ಷೀಣಿಸಿದ್ದ ಮುಂಗಾರು
ಜೂನ್ 4ರಂದು ಕೇರಳ ಪ್ರವೇಶಿಸುವ ಮೂಲಕ ಮುಂಗಾರು ಮಳೆ ಆರಂಭವಾಗಿತ್ತು. ಆದರೆ ಒಂದು ವಾರಗಳ ಕಾಲ ಆರ್ಭಟಿಸಿ ಮಳೆ ಕಡಿಮೆಯಾಗಿತ್ತು. ಜೂನ್ 19ರ ನಂತರ ಎಲ್ಲೆಡೆ ಮುಂಗಾರು ಕ್ಷೀಣಿಸಿದ್ದು, ಅಂದಿನಿಂದಲೂ ಮಳೆ ಕಡಿಮೆಯಾಗಿತ್ತು. ಹಿಮಾಲಯ ಪ್ರದೇಶದಲ್ಲಿ ಮಾತ್ರ ನಿರಂತರ ಮಳೆ ಸುರಿದಿತ್ತು.
ಜುಲೈ ಮೊದಲ ವಾರದ ನಂತರ ಮಳೆ ಆರಂಭವಾಗಿ ಈ ತಿಂಗಳಿನಲ್ಲಿ ಉತ್ತಮ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜುಲೈ 7ರವರೆಗೂ ಮುಂಗಾರಿಗೆ ಸಮಯ ಸೂಕ್ತವಾಗಿಲ್ಲ. ಆನಂತರವಷ್ಟೇ ಹೆಚ್ಚಿನ ಮಳೆಯಾಗುತ್ತದೆ ಎಂದು ತಿಳಿಸಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಮುಂಗಾರು ಚುರುಕಾಗುವುದಾಗಿ ತಿಳಿಸಿದೆ.
ಜುಲೈನಲ್ಲಿ 94 -106% (ದೀರ್ಘಾವಧಿ ಸರಾಸರಿ) ಮಳೆ:
ಜುಲೈ ತಿಂಗಳ ಎರಡನೇ ವಾರದಲ್ಲಿ ನೈಋತ್ಯ ಮುಂಗಾರು ಚುರುಕು ಪಡೆಯಲಿದೆ. ಆಗ ದೇಶಾದ್ಯಂತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದರು. ಜುಲೈ ತಿಂಗಳಿನಲ್ಲಿ ಮುಂಗಾರು ಮಳೆ ಸಹಜವಾಗಿರಲಿದೆ. ಜುಲೈನಲ್ಲಿ 94 ರಿಂದ 106% (ದೀರ್ಘಾವಧಿ ಸರಾಸರಿ) ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಈ ವರ್ಷ ಹೇಗಿರಲಿದೆ ಮುಂಗಾರು?
ಈ ವರ್ಷ ನೈಋತ್ಯ ಮುಂಗಾರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಸಾಮಾನ್ಯ ರೀತಿ ಇರಲಿದ್ದು ಕೇಂದ್ರ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಆದರೆ ಭಾರತ ಪೂರ್ವ ಭಾಗದಲ್ಲಿ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಮಟ್ಟದಲ್ಲಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನೈಋತ್ಯ ಮುಂಗಾರಿನ ಕಾಲಾವಧಿಯಲ್ಲಿ(ಜೂನ್ನಿಂದ-ಸೆಪ್ಟೆಂಬರ್) ದೇಶಾದ್ಯಂತ ಮಳೆಯ ಪ್ರಮಾಣ ಸಾಮಾನ್ಯವಾಗಿರಲಿದೆ ಎಂದು ಮುನ್ಸೂಚನೆ ನೀಡಿದೆ.