ಯುವತಿಯೊಬ್ಬಾಕೆಗೆ ಕಿರುಕುಳ ನೀಡಿರುವ ಆರೋಪ ಸಂಬಂಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ರಾಜ್ಯ ಮಹಿಳಾ ಆಯೋಗ ನೋಟಿಸ್ ನೀಡಿದ್ದರೂ, ಅವರು ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.
ಸೋಮವಾರ(ಎ.8) ಮಧ್ಯಾಹ್ನ 12 ಗಂಟೆಗೆ ತೇಜಸ್ವಿ ಸೂರ್ಯಗೆ ವಿಚಾರಣೆಗೆ ಹಾಜರಾಗಲು ಆಯೋಗ ಸೂಚಿಸಿತ್ತು. ಆದರೆ, ತೇಜಸ್ವಿ ಚುನಾವಣಾ ಪ್ರಚಾರ ಹಿನ್ನೆಲೆ ತಮ್ಮ ವಕೀಲರನ್ನ ಕಳುಹಿಸಿದ್ದರು ಎಂದು ಹೇಳಲಾಗುತ್ತಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ, ಈ ಹಿಂದೆ ನೋಟಿಸ್ ನೀಡಿದಾಗ ನನಗೆ ನೋಟಿಸ್ ಸಿಕ್ಕಿರಲಿಲ್ಲ ಎಂದಿದ್ದರು. ಹೀಗಾಗಿ, ಗಿರಿನಗರ ಠಾಣಾ ಪೊಲೀಸರ ಮೂಲಕ ನೋಟಿಸ್ ನೀಡಿದ್ದೆವು ಎಂದು ತಿಳಿಸಿದರು.
ತೇಜಸ್ವಿ ಸೂರ್ಯ ವಿಚಾರಣೆಗೆ ಹಾಜರಾಗಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಜರುಗಿಸಲು ಆಯೋಗ ಮುಂದಾಗುತ್ತದೆ. ತೇಜಸ್ವಿ ಸೂರ್ಯ ಬೆಂಗಳೂರಿನಲ್ಲೇ ಇದ್ದಾರೆ. ಬೇರೆ ಕಡೆ ಇಲ್ಲ, ಹಾಗಾಗಿ ಬಂದು ಹೋಗಬಹುದು. ಒಂದು ವೇಳೆ ಬಂದಿಲ್ಲವಾದಲ್ಲಿ ಗಿರಿನಗರ ಠಾಣಾ ಪೊಲೀಸರು ಕ್ರಮ ಜರುಗಿಸಬೇಕು ಎಂದರು.