ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ತಿಂದವರೂ ಆ ಹಣ ಕಕ್ಕಬೇಕು: ಸಿ.ಟಿ.ರವಿ

tnit editors
1 Min Read

ದಾವಣಗೆರೆ: ಉಪ್ಪು ತಿಂದವರು ನೀರು ಕುಡಿಯಲೇಬೇಕೆಂದು ಸಿದ್ದರಾಮಯ್ಯನವರು ಹೇಳುತ್ತಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ತಿಂದವರೂ ಆ ಹಣ ಕಕ್ಕಬೇಕು. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಬೇಕು. ಅಹಿಂದ ರಾಜಕಾರಣ ಮಾಡಿದ ಸಿದ್ದರಾಮಯ್ಯನವರು ದಲಿತರ ಹಣ ತಿಂದು ನೀರು ಕುಡಿದವರನ್ನು ಹೇಗೆ ಸಹಿಸಿಕೊಳ್ಳುತ್ತಾರೆ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಯಾರ್ಯಾರು ಹಗರಣ ಮಾಡಿದ್ದಾರೆ, ತಪ್ಪು ಮಾಡಿದ್ದಾರೆ, ಅವರೆಲ್ಲರ ಬಗ್ಗೆಯೂ ತನಿಖೆಯಾಗಿ ಶಿಕ್ಷೆಯಾಗಲಿ. ಯಾವ ಇಲಾಖೆಯ ಹಗರಣಗಳು ಏನಾಗಿವೆ ಗೊತ್ತಿಲ್ಲ. ರಾಜ್ಯದ ಖಜಾನೆಗೆ ಕನ್ನ ಹಾಕುವ ಹೆಗ್ಗಣಗಳು ಎಲ್ಲ ಕಡೆ ತುಂಬಿವೆ. ಎಷ್ಟೇ ಬೆಲೆ ಏರಿಕೆ ಮಾಡಿ ಖಜಾನೆ ತುಂಬಿಸಿದರೂ ಕೂಡ ಹೆಗ್ಗಣಗಳು ಖಜಾನೆ ಖಾಲಿ ಮಾಡುತ್ತಿದ್ದರೆ, ಅದು ಹೇಗೆ ತುಂಬುತ್ತೆ?. ಅಂತಹ ಹೆಗ್ಗಣಗಳನ್ನು ನಿಯಂತ್ರಿಸದೆ ಇದ್ರೆ, ನಮ್ಮ ರಾಜ್ಯದ ಖಜಾನೆ ಉಳಿಯಲ್ಲ. ಜನರ ಮೇಲೆ ತೆರಿಗೆ ಭಾರ ಮಾತ್ರವಾಗುತ್ತದೆ ಎಂದು ತಿಳಿಸಿದರು.

Share This Article