ವಿಶ್ವದ ಅತಿದೊಡ್ಡ ದೇಗುಲ ಅಂಗ್ಕೋರ್ ವಾಟ್ ವಿಶೇಷಗಳೇನು ಗೊತ್ತಾ..?

0
285

ಸಾವಿರಾರು ದೇವಾಲಯಗಳ ಹೊಂದಿರುವ ಪುಣ್ಯಭೂಮಿ ಭಾರತ.. ನಮ್ಮಲ್ಲಿ ಇರುವಷ್ಟು ದೇವಾಲಯಗಳು ಪ್ರಾಯಶಃ ಎಲ್ಲೂ ಇರಲಿಕ್ಕಿಲ್ಲ.. ಹೀಗಾಗಿ ಭಾರತವನ್ನು ದೇವಾಲಯಗಳ ನಗರಿ ಅಂತಾರೆ.. ಆದರೆ ವಿಶ್ವದ ಅತಿದೊಡ್ಡ ದೇವಾಲಯ ಇರೋದು ಭಾರತದಲ್ಲಿ ಅಲ್ಲ ಅನ್ನೋದು ನಿಮಗೆ ಗೊತ್ತಾ..?

ಹೌದು, ವಿಶ್ವದ ಅತಿ ದೊಡ್ಡ ದೇವಾಲಯ ಇರುವುದು ಕಾಂಬೋಡಿಯಾದಲ್ಲಿ. ಅದೇ ಅಂಗ್ಕೋರ್ ವಾಟ್ ಮಂದಿರ. ಈ ದೇಗುಲ ಹಿಂದೂ ಹಾಗೂ ಬೌದ್ಧ ಧರ್ಮೀಯರ ನೆಚ್ಚಿನ ಧಾರ್ಮಿಕ ಸ್ಥಳ ಎಂದೇ ಪರಿಗಣಿತವಾಗಿದೆ.

ಕಾಂಬೋಡಿಯಾದ ರಾಜಧಾನಿ ನೋಮ್ ಪೆನ್ಹಿ ನಿಂದ 206 ಕಿ.ಮೀ. ದೂರದಲ್ಲಿದೆ. ಮಿಕಾಂಗ್ ನದಿ‌ ದಂಡೆಯಲ್ಲಿ ನಿರ್ಮಾಣವಾಗಿರುವ ಈ ಭವ್ಯ ಮಂದಿರ ನೋಡಲು ಪ್ರತಿವರ್ಷ ಕನಿಷ್ಠ ಎಂದರೂ 20 ಲಕ್ಷ ಮಂದಿ ಭೇಟಿ ನೀಡುತ್ತಾರೆ.

ಈ ಭವ್ಯ ಆಲಯ ನಿರ್ಮಿತವಾದದ್ದು ಹನ್ನೆರಡನೆಯ ಶತಮಾನದ ಪೂರ್ವಾರ್ಧದಲ್ಲಿ..‌ ಎರಡನೆಯ ಸೂರ್ಯವರ್ಮ ತನ್ನ ರಾಜಧಾನಿಯಾಗಿದ್ದ ಯಶೋಧರಪುರದ ಪಕ್ಕದಲ್ಲೇ ಈ ಅಗಾಧ, ಅನುಪಮ ದೇವಾಲಯವನ್ನು ನಿರ್ಮಿಸಿದ ಎಂಬುದು ಇತಿಹಾಸ.

ಇನ್ನೂ, ಇದೇ ಕಾಲಾವಧಿಯಲ್ಲೇ ಪ್ಯಾರಿಸ್ಸಿನ ನೊತ್ರೆದಾಂ, ಷಾರ್‍ಟ್ರೆ ಮತ್ತು ಇಂಗ್ಲೆಂಡಿನ ಈಲೀ ಮತ್ತು ಲಿಂಕನ್ ಆರಾಧನಾ ಮಂದಿರ (ಕೆಥೆಡ್ರಲ್)ಗಳೂ ನಿರ್ಮಿತವಾದುವೆಂಬುದು ಕುತೂಹಲಕಾರಿ ವಿಷಯ. ಆದರೆ ವೈಶಾಲ್ಯದಲ್ಲಿ, ಭವ್ಯತೆಯಲ್ಲಿ, ಕಲಾಪ್ರೌಢಿಮೆಯಲ್ಲಿ ಇವಾವುವು ಅಂಗ್ಕೋರ್ ವಾಟ್‍ನ್ನು ಎಂದಿಗೂ ಸರಿಗಟ್ಟಲಾರವು‌ ಎಂದರೆ ಅತಿಶಯೋಕ್ತಿಯಲ್ಲ.

ಗೊಂಡಾರಣ್ಯದ ಮಧ್ಯದಲ್ಲಿ ಮರಗಳನ್ನು ಕಡಿದು ಕಟ್ಟಡಕ್ಕೆ ಅಣಿ ಮಾಡಿಕೊಂಡ ವಿಶಾಲ ಪ್ರದೇಶ. ಅದನ್ನು ಸುತ್ತುಗಟ್ಟಿರುವ ನೀರು ತುಂಬಿದ ಅಗಳು.. ಇದನ್ನು ದಾಟಿ ದ್ವಾರಮಂಟಪಕ್ಕೆ ಹೋಗುವಂತೆ ಎತ್ತರಿಸಿ ಕಲ್ಲಿನಿಂದ ಕಟ್ಟಿರುವ ಒಡ್ಡುದಾರಿ.. ನೀರಿನಿಂದಲೇ ಎದ್ದು ನಿಂತಿರುವಂತೆ ನಿರ್ಮಿತವಾಗಿ ಆ ಪ್ರದೇಶವನ್ನು ಸುತ್ತುವರಿದಿರುವ ಮೊಗಸಾಲೆ.. ಪಕ್ಕದಲ್ಲಿ ಸುತ್ತುವರಿದಿರುವ ಹೊರಾಂಗಣ, ಅದರ ಸುತ್ತ ಒಂದು ತಗ್ಗುಗೋಡೆ ಮತ್ತು ಒಳಾಂಗಣ; ಮಧ್ಯದಲ್ಲಿ ಇಡೀ ಪ್ರದೇಶವನ್ನಾಕ್ರಮಿಸಿರುವ, ಪರಸ್ಪರಾನುರೂಪತೆಯನ್ನು ಹೊಂದಿ ವಾಸ್ತುಶಿಲ್ಪಕಲಾವೈಭವವನ್ನು ಮೆರೆಸುತ್ತಲಿರುವ, ಕಟ್ಟಡಗಳ ನಡುವೆ ನಿಂತಿರುವ ದೇವಸ್ಥಾನ.

ಚಚ್ಚೌಕವಾದ ಈ ಪ್ರದೇಶದ ಸುತ್ತುಗೋಡೆಗಳು ಒಂದೊಂದೂ ಒಂದು ಮೈಲಿನಷ್ಟು ಉದ್ದವಿದೆ. ಒಳಗೆ ಸುತ್ತಲೂ ಬಂದಿರುವ ಹೊರಾಂಗಣ ಮತ್ತು ಒಳಾಂಗಣಗಳು, ಸಾವಿರಾರು ಜನರು ಸಭೆ ಸೇರಲು ಅನುಕೂಲವಾಗುವಷ್ಟು ವಿಶಾಲವಾದ ಪ್ರದೇಶಗಳಾಗಿವೆ.

ಒಳಾವರಣದ ಕಟ್ಟಡ ಪ್ರದೇಶದ ಸುತ್ತಳತೆಯೇ 1/2 ಮೈ.ಗಿಂತ ಹೆಚ್ಚಾಗಿದೆ ಎಂದರೆ ಈ ದೇಗುಲ ಎಷ್ಟು ದೊಡ್ಡದಿರಬಹುದೆಂಬ ಕಲ್ಪನೆ ಸಿಗುತ್ತದೆ.

ಗೋಪುರಾಕೃತಿಯಲ್ಲಿ ನಿರ್ಮಿತವಾಗಿರುವ ಈ ಕಟ್ಟಡ ಸಮುದಾಯದಲ್ಲಿ ಮೂರು ಹಂತಗಳಿದ್ದು, ಕೊನೆಯ ಹಂತದ ಮೇಲೆ ಐದು ಗೋಪುರಗಳನ್ನೊಳಗೊಂಡ ಮುಖ್ಯ ಪೂಜಾಗಾರವಿದೆ‌. ಇನ್ನೂ, ಗೋಪುರಗಳಲ್ಲಿ ನಡುವಿನದು ಸುತ್ತಣ ಅರಣ್ಯಪ್ರದೇಶಕ್ಕಿಂತ ಇನ್ನೂರ ಹದಿನೈದು ಅಡಿ ಎತ್ತರ. ಇಂಥ ಬೃಹದಾಕೃತಿಯ ಕಟ್ಟಡದಲ್ಲೂ ಅಲಂಕಾರ ಚೆಲುವಿದೆ. ಸೂಕ್ಷ್ಮತೆ ಇದೆ. ಅರೆಯುಬ್ಬು ಚಿತ್ರಗಳಲ್ಲಿ ಕಂಡುಬರುವ ಕಲಾಪ್ರೌಢಿಮೆ ಪ್ರೇಕ್ಷಕರನ್ನು ವಿಸ್ಮಯಗೊಳಿಸುತ್ತದೆ. ಆದರೆ ಅಲಂಕಾರ ಅತಿಯಾಗಿ ಎಲ್ಲೂ ಕಟ್ಟಡದ ಭವ್ಯತೆ ಘನತೆಗಳಿಗೆ ಕುಂದು ತಂದಿಲ್ಲ.

ರಾಮಾಯಣ ಮಹಾಭಾರತಗಳಿಂದ ಆಯ್ದ ಚಿತ್ರಗಳು ವಿಶೇಷವಾಗಿವೆ; ಕೆಲವೆಡೆ ಎಂಟು ಅಡಿಗಳ ಎತ್ತರ ಇರುವ ಈ ಚಿತ್ರಗಳು ಅರ್ಧ ಮೈಲಿಯಷ್ಟು ದೂರ ಹಬ್ಬಿವೆ. ಭಾರತದ ಸಂಸ್ಕೃತಿ ಆ ಜನರ ಮೇಲೆ ಎಂಥ ಪರಿಣಾಮವನ್ನುಂಟುಮಾಡಿತ್ತು ಎನ್ನುವುದಕ್ಕೆ ಈ ಚಿತ್ರಗಳೇ ನಿದರ್ಶನ. ಅಲ್ಲಲ್ಲೇ ಕಾಣಬಹುದಾದ ದೇವತೆಗಳ ಮತ್ತು ಅಪ್ಸರೆಯರ ಚಿತ್ರಣವಂತೂ ರಮ್ಯವಾಗಿದೆ.

ಔಷಧೀಯ ಗುಣಗಳ ಆಗರ ಬೇವು.. ಬೇವಿನ ಉಪಯೋಗ ಎಷ್ಟಿದೆ ಗೊತ್ತಾ..?

ಆಂಗ್ಕೋರ್‍ವಾಟ್‍ನ ವಾಸ್ತುಶಿಲ್ಪದ ಉತ್ಕಷ್ಟತೆಯನ್ನು ನೋಡಿದವರಿಗೆ, ಅದನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು ಅನೇಕ ಶತಮಾನಗಳ ಕಾಲ ವಂಶಪಾರಂಪರ್ಯವಾಗಿ ಆ ಕಲೆಯನ್ನು ರೂಢಿಸಿಕೊಂಡು ಬಂದು ಕೊನೆಗೆ ಪರಾಕಾಷ್ಠತೆ ಪಡೆದಿದ್ದ ಕಲಾವಿದರು ಎನ್ನಿಸುತ್ತದೆ. ಇಂದಿಗೂ ಆಂಗ್ಕೋರ್ ಥಾಮ್ ನಗರದ ಹಾಗೂ ಆಂಗ್ ಕೋರ್‌ ವಾಟ್ ಅವಶೇಷಗಳು ಆಕರ್ಷಿಸುತ್ತಿವೆ.

ಕರ್ನಾಟಕಕ್ಕೂ ಬಂದಿದ್ದ ರಾಮದೇವರು.. ಈಗಲೂ ಇವೆ ಅನೇಕ ಕುರುಹುಗಳು..

ಯಶಸ್ಸು ಬಯಸುತ್ತಿದ್ದೀರಾ? ಹಾಗಾದ್ರೆ ಅದಕ್ಕೆ ಇಲ್ಲಿದೆ ಸೂಪರ್ ಟಿಪ್ಸ್ ..!

LEAVE A REPLY

Please enter your comment!
Please enter your name here