ವಿಷ್ಣು ದಾದ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದ ವಿಜಯ್ ರಂಗರಾಜ್ ಗೆ ಸುದೀಪ್ ಕ್ಲಾಸ್
‘ಸಾಹಸಸಿಂಹ’ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ತೆಲುಗು ನಟ ವಿಜಯ್ ರಂಗರಾಜು ಅವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಆಡಿದ ಮಾತನ್ನು ವಾಪಸ್ ತೆಗೆದುಕೊಳ್ಳಿ. ವಿಷ್ಣು ಸರ್ ಇಲ್ಲದೇ ಇರಬಹುದು. ಕೋಟಿ ಕೋಟಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ನಾವೆಲ್ಲ ಇದ್ದೇವೆ’ ಎಂದು ಖಡಕ್ ತಿರುಗೇಟು ನೀಡಿದ್ದಾರೆ ಕಿಚ್ಚ.
‘ವಿಷ್ಣು ಸರ್ ಬಗ್ಗೆ ವಿಜಯ್ ರಂಗರಾಜು ಬಹಳ ಕೇವಲವಾಗಿ ಮಾತನಾಡಿದ ವಿಡಿಯೋ ನೋಡಿದೆ. ಅದಕ್ಕಾಗಿಯೇ ಈ ವಿಡಿಯೋ ಮೂಲಕ ಮಾತನಾಡಬೇಕು ಎನಿಸಿತು. ಕಲಾವಿದನಾಗಿ, ಅಪ್ಪಟ ವಿಷ್ಣು ಸರ್ ಅಭಿಮಾನಿಯಾಗಿ ಅಥವಾ ಅವರ ಎಲ್ಲ ಅಭಿಮಾನಿಗಳ ಪರವಾಗಿ ನಾನು ಮಾತನಾಡುತ್ತಿದ್ದೇನೆ ಎಂದುಕೊಳ್ಳೋಣ. ವಿಜಯ್ ರಂಗರಾಜು ಅವರೇ, ಒಬ್ಬ ವ್ಯಕ್ತಿ ಬಗ್ಗೆ ಏನು ಮಾತನಾಡಬೇಕು ಎಂಬುದು ನಿಮಗೆ ಬಿಟ್ಟಿದ್ದು. ಆದರೆ ಆ ವ್ಯಕ್ತಿ ಬದುಕಿದ್ದಾಗ ಮಾತನಾಡುವುದರಲ್ಲಿ ಒಂಚೂರು ಗಂಡಸ್ಥನ ಇರುತ್ತೆ ಎಂಬುದು ನನ್ನ ನಂಬಿಕೆ. ಆಗ ಅವರು ನಿಮ್ಮ ಮಾತಿಗೆ ಉತ್ತರ ಕೊಡುತ್ತಿದ್ದರು’ ಎಂದಿದ್ದಾರೆ ಕಿಚ್ಚ ಸುದೀಪ್.
‘ಆದರೆ ಇಂದು ವಿಷ್ಣು ಸರ್ ನಮ್ಮ ಮಧ್ಯೆ ಇಲ್ಲ. ಎಷ್ಟೋ ಕೋಟಿ ಕೋಟಿ ಜನರಿಗೆ ಆರಾಧ್ಯ ದೈವ ಆಗಿರುವ ವಿಷ್ಣು ಸರ್ ಬಗ್ಗೆ, ಅವರು ಇಲ್ಲದೇ ಇರುವಾಗ ಹೇಳಿಕೆ ನೀಡುವುದು ಬಹಳ ದೊಡ್ಡ ತಪ್ಪು. ಎಲ್ಲ ಇಂಡಸ್ಟ್ರಿಯ ನಾವೆಲ್ಲ ಬಾಂಧವ್ಯದಿಂದ ನಡೆಯುತ್ತಿರುವಾಗ ನಿಮ್ಮಂಥ ಒಬ್ಬ ವ್ಯಕ್ತಿ ಈ ರೀತಿ ಹೇಳಿಕೆ ಕೊಡುವುದರಿಂದ ಎಲ್ಲವೂ ಚೂರುಚೂರಾಗಿ ಆಕಡೆ ಈಕಡೆ ಬಿದ್ದು ಹೋಗುತ್ತದೆ. ನಿಮ್ಮ ಇಂಡಸ್ಟ್ರಿಯನ್ನು ನಾವು ಬೇರೆ ಎಂದುಕೊಂಡಿಲ್ಲ. ಎಲ್ಲ ಹಿರಿಯರಿಗೂ ನಾವು ಗೌರವ ಕೊಡುತ್ತಿರುವ ಸಮಯದಲ್ಲಿ ನಮ್ಮ ಹಿರಿಯ ಕಲಾವಿದರಿಗೆ ಅವಮಾನವಾಗುವಂತೆ ನೀವು ಮಾತನಾಡುವುದನ್ನು ನನ್ನ ಪ್ರಕಾರ ನಿಮ್ಮ ಇಂಡಸ್ಟ್ರಿಯಲ್ಲೇ ಯಾರೂ ಒಪ್ಪುವುದಿಲ್ಲ’ ಎಂದು ಸುದೀಪ್ ಹೇಳಿದ್ದಾರೆ.
‘ವಿಷ್ಣುವರ್ಧನ್ ಅವರನ್ನು ಹಂಗೆ ಹಿಡ್ಕೊಂಡ್ವಿ, ಹಂಗೆ ಅಂದುಬಿಟ್ವಿ, ಬೆಂಗಳೂರು ಅಲ್ಲ ಅಂತ ವಾರ್ನಿಂಗ್ ಕೊಟ್ವಿ ಅಂತೆಲ್ಲ ಹೇಳುತ್ತಿದ್ದೀರಿ. ಆ ಲೆವೆಲ್ಗೆ ಹೋಗಬೇಡಿ ಸರ್. ಅವರು ಇಂದು ಇಲ್ಲದೇ ಇರಬಹುದು. ನಾವೆಲ್ಲಾ ಇದ್ದೇವೆ. ಆ ಲೆವೆಲ್ಗೆ ಹೋಗುವುದು ಬೇಡ. ಯಾಕೆಂದರೆ ಇಂಡಸ್ಟ್ರಿಯಲ್ಲಿ ಎಲ್ಲರೂ ಇವತ್ತು ಚೆನ್ನಾಗಿದ್ದೇವೆ. ನಿಮ್ಮೊಬ್ಬರಿಂದ ಮತ್ತೆ ಹಾಳಾಗುವುದು ಬೇಡ. ಇಲ್ಲಿ ಯಾರೂ ಕೈಲಾಗದವರು ಇಲ್ಲ. ವಿಷ್ಣು ಸರ್ ಇಲ್ಲದೇ ಇರಬಹುದು. ಕೋಟಿ ಕೋಟಿ ಮಕ್ಕಳನ್ನು ಬಿಟ್ಟುಹೋಗಿದ್ದಾರೆ. ವಾರ್ನಿಂಗ್ ಬೇಡ. ನೀವೇನು ಮಾತಾಡಿದ್ದೀರೋ ಅದನ್ನು ವಾಪಸ್ ತೆಗೆದುಕೊಳ್ಳಿ’ ಎಂದು ಕಿಚ್ಚ ಸುದೀಪ್ ಖಾರವಾಗಿ ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹುಷಾರ್, ವಿಡಿಯೋ ಕಾಲ್ ಮಾಡಿ , ‘ ಆ’ ವಿಡಿಯೋ ಕಳುಹಿಸಿ ಬ್ಲಾಕ್ಮೇಲ್ ಮಾಡ್ತಾರೆ..!
ಸಾರ್ವಜನಿಕರನ್ನು ಸುಲಿಗೆ ಮಾಡಲು ಸೈಬರ್ ಖದೀಮರು ಹೊಸದಾ ತಂತ್ರವೊಂದನ್ನು ಕಂಡುಕೊಂಡಿದ್ದಾರೆ. ವಾಟ್ಸ್ಆ್ಯಪ್ನಲ್ಲಿ ವಿಡಿಯೊ ಕಾಲ್ ಮಾಡಿ, ಅಶ್ಲೀಲ ವಿಡಿಯೊಗಳನ್ನು ಹಾಕಿ, ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಈ ರೀತಿಯ ಬ್ಲ್ಯಾಕ್ಮೇಲ್ ಕರೆಗಳು ಹಲವರಿಗೆ ಬಂದಿವೆ. ಬೆಂಗಳೂರು ನಗರದ ಇನ್ಸ್ಪೆಕ್ಟರ್ವೊಬ್ಬರು ಸೈಬರ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇನ್ಸ್ಪೆಕ್ಟರ್ ಸಿ.ದಯಾನಂದ ಎಂಬುವರಿಗೆ ಡಿ.8ರಂದು ರಾತ್ರಿ 8.30ರ ಸುಮಾರಿಗೆ ಅಪರಿಚಿತ ಫೋನ್ ನಂಬರ್ನಿಂದ ವಾಟ್ಸ್ಆ್ಯಪ್ಗೆ ವಿಡಿಯೊ ಕಾಲ್ ಬಂದಿದ್ದು, ಸ್ವೀಕರಿಸಿದ್ದಾರೆ. ಕೂಡಲೇ ಅದರಲ್ಲಿ ಮಹಿಳೆಯ ಅಶ್ಲೀಲ ವಿಡಿಯೊ ಬಂದಿದೆ. ಗಾಬರಿಗೊಂಡ ಇನ್ಸ್ಪೆಕ್ಟರ್ ಫೋನ್ ಕಟ್ ಮಾಡಿದ್ದಾರೆ. ಯಾರಿದು ಎಂದು ತಲೆಕೆಡಿಸಿಕೊಳ್ಳುವಷ್ಟರಲ್ಲಿ ಆ ವಿಡಿಯೊದ ಸ್ಕ್ರೀನ್ಶಾಟ್ ತೆಗೆದು ವಾಟ್ಸ್ಆ್ಯಪ್ ಮೂಲಕ ಕಳುಹಿಸಲಾಗಿದೆ.
11 ಸಾವಿರ ರೂ. ಹಣ ನೀಡದಿದ್ದರೆ ನಿನ್ನ ಫೇಸ್ಬುಕ್ ಸ್ನೇಹಿತರಿಗೆ ಕಳುಹಿಸುತ್ತೇನೆಂದು ಬೆದರಿಸಿದ್ದಾರೆ. ಆನ್ಲೈನ್ ಖದೀಮರ ಕೆಲಸ ಎಂದು ಅರಿತ ದಯಾನಂದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ವಾಟ್ಸ್ಆ್ಯಪ್ ವಿಡಿಯೊ ಕಾಲ್ನಲ್ಲಿ ಮೊಬೈಲ್ ಫೋನ್ ಸ್ಕ್ರೀನ್ ಮೇಲೆ ನಮ್ಮೊಂದಿಗೆ ಮಾತನಾಡುತ್ತಿರುವವರ ವಿಡಿಯೊ ಜೊತೆಗೆ ನಮ್ಮ ವಿಡಿಯೊ ಕೂಡ ನಮಗೆ ಕಾಣಿಸುತ್ತದೆ. ಖದೀಮರು, ಆ ಕಡೆಯಿಂದ ಅಶ್ಲೀಲ ವಿಡಿಯೊವನ್ನು ವಿಡಿಯೊ ಕಾಲ್ ವೇಳೆ ಪ್ಲೇ ಮಾಡುತ್ತಾರೆ. ಕರೆ ಸ್ವೀಕರಿಸಿದಾಗ ಸಹಜವಾಗಿ ಖದೀಮರ ಮೊಬೈಲ್ನಲ್ಲಿ ನಮ್ಮ ವಿಡಿಯೊ ಇರುತ್ತದೆ.
ಅಶ್ಲೀಲ ವಿಡಿಯೊ ಜತೆಗೆ ನಮ್ಮ ವಿಡಿಯೊ ಇರುವ ಕಾರಣ ಅದನ್ನೇ ಸ್ಕ್ರೀನ್ ಶಾಟ್ ತೆಗೆದುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಾರೆನ್ನಲಾಗಿದೆ. ಅಪರಿಚಿತರು ವಿಡಿಯೊ ಕಾಲ್ ಮಾಡಿದರೆ, ಕರೆ ಸ್ವೀಕರಿಸುವ ಮೊದಲು ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಪೊಲೀಸರು ಸಲಹೆ ನೀಡಿದ್ದಾರೆ.
ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಜ್ ಅವರ ಫೇಸ್ಬುಕ್ ಖಾತೆಯಿಂದ ಫೋಟೋ ಎತ್ತಿಕೊಂಡ ಖದೀಮರು, ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ವಂಚಿಸಲು ಯತ್ನಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿರುವ ಅಂಜುಂ ಪರ್ವೇಜ್ ಅವರು, ಅಪರಿಚತರು ನನ್ನ ಫೋಟೊ ಎತ್ತಿಕೊಂಡು ನಕಲಿ ಖಾತೆ ಸೃಷ್ಟಿಸಿ, ನನ್ನ ಫೇಸ್ಬುಕ್ ಫ್ರೆಂಡ್ಸ್ಗಳಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ಸ್ನೇಹಿತರಾದವರಿಗೆ ಮೆಸೆಂಜರ್ ಮೂಲಕ ತುರ್ತಾಗಿ ಹಣದ ಅಗತ್ಯವಿದೆ ಎಂದು ಸಂದೇಶ ಕಳುಹಿಸಿ ಮೋಸ ಮಾಡಲು ಯತ್ನಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
—