ಡಿ.ಕೆ.ಶಿವಕುಮಾರ್..ರಾಜ್ಯ ರಾಜಕೀಯದಲ್ಲಿ ಟ್ರಬಲ್ ಶೂಟರ್ ಎಂದೇ ಪ್ರಖ್ಯಾತಿ ಪಡೆದಿರುವ ಸಚಿವರು. ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಇವರಿಗೆ ಒಳ್ಳೆ ನಂಟಿದೆ. ಇದನ್ನು ಉಪಯೋಗಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಮಿಂಚಲು ಡಿಕೆಶಿ ಪ್ಲಾನ್ ಮಾಡಿದ್ದಾರಂತೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಘಟಾನುಘಟಿ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ ಸೋಲುಂಡಿದ್ದಾರೆ. ಇದನ್ನೇ ದಾಳವಾಗಿಸಿಕೊಂಡು ಡಿಕೆಶಿ ರಾಷ್ಟ್ರಮಟ್ಟದಲ್ಲಿ ಮುನ್ನೆಲೆಗೆ ಬರಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸಂಸದರಿಗೆ ಡಿಕೆಶಿ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರಂತೆ.
ರಾಜ್ಯದ ಅಭಿವೃದ್ಧಿ ಯೋಜನೆಗಳ ಚರ್ಚೆ ನೆಪದಲ್ಲಿ, ರಾಜ್ಯದ ಸಂಸದರಿಗೆ ಔತಣಕೂಟ ಆಯೋಜಿಸಿದ್ದಾರೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ರಾಜ್ಯಸಭಾ ಸದಸ್ಯರಿಗೆ ಡಿಕೆಶಿ ಈಗಾಗಲೇ ಅಹ್ವಾನ ನೀಡಿದ್ದಾರಂತೆ.ಇನ್ನು ಬಿಜೆಪಿ ಸಂಸದರಿಗೂ ಇಂದು ಆಹ್ವಾನ ನೀಡಲಿದ್ದಾರೆ ಎನ್ನಲಾಗ್ತಿದೆ. ವಿಶೇಷ ಅಂದ್ರೆ ಮಂಡ್ಯದ ಸಂಸದೆ ಸುಮಲತಾ ಅವರಿಗೂ ಡಿಕೆಶಿ ಔತಣ ಕೂಟಕ್ಕೆ ಕರೆಯಲಿದ್ದಾರೆ ಅಂತಾ ಹೇಳಲಾಗ್ತಿದೆ.