ಸರಿಯಾಗಿ ಕೆಲಸಕ್ಕೆ ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಸೂಪರ್ ವೈಸರ್ ಹತ್ಯೆ!
ಬೆಂಗಳೂರು: ಕೆಲಸಕ್ಕೆ ಸರಿಯಾಗಿ ಹಾಜರಾಗದ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದಕ್ಕೆ ಕೋಪಗೊಂಡ ಮಾಜಿ ಉದ್ಯೋಗಿಯೊಬ್ಬ ಫ್ಯಾಕ್ಟರಿ ಸೂಪರ್ವೈಸರ್ರನ್ನು ಚಾಕುವಿನಿಂದ ಹತ್ಯೆ ಮಾಡಿದ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ರಾಹುಲ್ (30) ಹತ್ಯೆಯಾಗಿರುವವರು. ಯಾದಗಿರಿ ಮೂಲದ ಹನುಮಂತಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಿಗಳರಪಾಳ್ಯ ಪ್ರದೇಶದಲ್ಲಿ ನಿನ್ನೆ ರಾತ್ರಿ ಈ ದುರ್ಘಟನೆ ನಡೆದಿದೆ. ಮೃತನ ಸಹೋದರ ರೋಹಿತ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಹುಲ್ ಅವರು ಪೀಣ್ಯ 2ನೇ ಹಂತದಲ್ಲಿರುವ ಪವರ್ ಪ್ಲಾಸ್ಟಿಕ್ ಕಂಪನಿಯಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಈ ಕಂಪನಿಯಲ್ಲಿ ಸುಮಾರು 30 ಮಂದಿ ಕೆಲಸ ಮಾಡುತ್ತಿದ್ದರು. ಆರೋಪಿಯಾಗಿರುವ ಹನುಮಂತಪ್ಪ ಕಳೆದ ಏಳು ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಆದರೆ ಇತ್ತೀಚೆಗೆ ಕೆಲಸಕ್ಕೆ ಗೈರಾಗುತ್ತಿದ್ದ ಹಿನ್ನೆಲೆಯಲ್ಲಿ 20 ದಿನಗಳ ಹಿಂದೆ ರಾಹುಲ್ ಅವರು ಕಾರಣ ಕೇಳಿದ್ದರು.
ಈ ವಿಚಾರಕ್ಕೆ ಮನಸ್ಸಿಗೆ ತೆಗೆದುಕೊಂಡ ಹನುಮಂತಪ್ಪ, ಬೇರೆ ಕೆಲಸ ನೋಡಿಕೊಳ್ಳುವುದಾಗಿ ಹೇಳಿ ಕಂಪನಿಯನ್ನು ಬಿಟ್ಟಿದ್ದ. ಆದರೆ ನಿನ್ನೆ ರಾತ್ರಿ ಫ್ಯಾಕ್ಟರಿಯ ಬಳಿ ಲಾರಿಯಿಂದ ಸಾಮಗ್ರಿ ಇಳಿಸುತ್ತಿದ್ದ ವೇಳೆ ರಾಹುಲ್ ಅವರನ್ನು ಬೆನ್ನಟ್ಟಿ, ಮೈ ಹಾಗೂ ಕೈ ಭಾಗಗಳಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ರಾಹುಲ್ ಅವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲನಗರ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.






