ಶಂಕರ್ ನಾಗ್ ಬಗ್ಗೆ ತಿಳಿದಿರದ ವಿಷಯಗಳು ..!
ಶಂಕರ್ ನಾಗ್.. ಈ ಹೆಸರು ಕೇಳಿದರೆ ಪ್ರತಿಯೊಬ್ಬ ಕನ್ನಡಿಗನ ಮೈಯಲ್ಲಿ ವಿದ್ಯುತ್ ಸಂಚಾರವಾಗುತ್ತದೆ. ಒಂದು ಕ್ಷಣ ಕಣ್ಣೀರು ಹೇಳದೇ ಕೇಳದೇ ಬಂದುಬಿಡುತ್ತದೆ. ಅದಕ್ಕೆ ಕಾರಣ 70, 80ರ ದಶಕದಲ್ಲಿ ಅವರು ಮಾಡಿದ ಚಿತ್ರಗಳು, ಪ್ರಯೋಗಗಳು. ಅವರು ಇಂದಿಗೂ ಆಟೋ ಚಾಲಕರಿಗೆ ಆಟೋ ರಾಜನಾಗಿದ್ದಾರೆ. ಆಟೋಗಳ ಮೇಲೆ ಸ್ಟಿಕ್ಕರ್ ಆಗಿ ರಾರಾಜಿಸುತ್ತಿದ್ದಾರೆ. ಆದರೆ 1990 ಸೆಪ್ಟೆಂಬರ್ 30ರಂದು ಅಂಥಾ ಮಹಾನ್ ನಟ ಹಾಗೂ ಅಭಿವೃದ್ಧಿಯ ಚಿಂತಕ ಮರೆಯಾಗಿದ್ದರು. ಇಡೀ ಕರ್ನಾಟಕಕ್ಕೆ ಶಾಕ್ ನೀಡಿದ್ದರು. ಎಷ್ಟೋ ಜನರ ಕಣ್ಣಲ್ಲಿ ನೀರಾಗಿದ್ದರು.
ಶಂಕರ್ ನಾಗ್ ರವರು ತಾವು ಬದುಕಿದ್ದ ಕೇವಲ 35 ವರ್ಷಗಳಲ್ಲಿ ಮಹಾನ್ ಸಾಧನೆ ಮಾಡಿದ್ದರು. ಹತ್ತಾರು ಚಿತ್ರಗಳ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೇ ಪ್ರತಿಯೊಬ್ಬರಿಗೂ ಅವರ ಬಗ್ಗೆ ತಿಳಿಯುವಂತೆ ಮಾಡಿದ್ದರು. ಆದರೆ ಅವರ ಬಗ್ಗೆ ತಿಳಿದಿರದ ಸಂಗತಿಗಳು ಇನ್ನೂ ಇವೆ.. ಅವು ಯಾವುವು ಗೊತ್ತಾ..?
30 ವರ್ಷದ ಹಿಂದೆಯೇ ಮೆಟ್ರೋ ತರಬೇಕು ಎಂದಿದ್ದರು..!
ಶಂಕರ್ ನಾಗ್ ರವರು ವಿಭಿನ್ನ ಐಡಿಯಾಗಳಿಗೆ ಹೆಸರುವಾಸಿಯಾಗಿದ್ದರು. 1985ರಲ್ಲೇ ಭಾರತಕ್ಕೆ ಮೆಟ್ರೋ ಬರಬೇಕು ಎಂದು ಶಂಕ್ರಣ್ಣ ಚಿಂತಿಸಿದ್ದರು. ಅಲ್ಲದೇ ಟೋಕಿಯೋ, ಟೊರಾಂಟೋ, ಮಲೇಷಿಯಾಗಳಲ್ಲಿ ಮೆಟ್ರೋ ರೈಲುಗಳ ಬಗ್ಗೆ ಸರ್ವೇಯನ್ನೂ ಮಾಡಿದ್ದರು. ಆದರೆ ಅವರ ಕಲ್ಪನೆ ಈಡೇರಲು 30 ವರ್ಷಗಳೇ ಬೇಕಾಯಿತು. ಎಂಥಾ ವಿಪರ್ಯಾಸ ಅಲ್ಲವೇ..?
ಎಂಟೇ ದಿನದಲ್ಲಿ ಮನೆ ಕಟ್ಟುವ ಐಡಿಯಾ ಅನ್ವೇಷಣೆ..!
ಆಗ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರ ಸರ್ಕಾರವಿತ್ತು. ಆ ವೇಳೆ ಶಂಕ್ರಣ್ಣ ಒಂದು ವಿಭಿನ್ನ ಕೆಲಸಕ್ಕೆ ಕೈ ಹಾಕಿದ್ದರು. ಅದೇನೆಂದರೆ ಬಡವರಿಗೆ ಕೇವಲ 8 ದಿನದಲ್ಲಿ ಮನೆ ನಿರ್ಮಿಸಿಕೊಡುವುದಾಗಿತ್ತು. ಅಲ್ಲದೇ ಅದಕ್ಕೆ ರಾಜ್ಯ ಸರ್ಕಾರವೂ ಒಪ್ಪಿಗೆ ಸೂಚಿಸಿತ್ತು. ಆದರೆ ಯೋಜನೆ ಅನುಷ್ಠಾನಕ್ಕೆ ಮುನ್ನವೇ ಶಂಕ್ರಣ್ಣ ನಮ್ಮನ್ನಗಲಿದ್ದರು.
ಅದ್ಭುತ ಮ್ಯೂಜಿಷಿಯನ್..!
ಶಂಕರ್ ನಾಗ್ ರವರು ಅದ್ಭುತವಾದ ಸಂಗೀತಗಾರರಾಗಿದ್ದರು. ತಬಲಾ, ಹಾರ್ಮೋನಿಯಂ, ಫ್ಲ್ಯೂಟ್ ಗಳನ್ನು ಅದ್ಭುತವಾಗಿ ನುಡಿಸುತ್ತಿದ್ದರು. ಅಲ್ಲದೇ ಕೆಲವೊಮ್ಮೆ ಹಾಡನ್ನೂ ಹಾಡುವ ಮೂಲಕ ಗಮನ ಸೆಳೆಯುತ್ತಿದ್ದರು.
ಕಾರುಗಳ ಪ್ರೇಮಿ
ಶಂಕರ್ ನಾಗ್ ರವರು ಕಾರುಗಳನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಅಲ್ಲದೇ ಕೆಲ ಕಾರುಗಳನ್ನು ಖರೀದಿಸಿದ್ದರೂ ಕೂಡಾ. ಅವರ ಕಾರಿನ ಪ್ರೀತಿಗೆ ಗೀತಾ ಮತ್ತು ಮಿಂಚಿನ ಓಟ ಚಿತ್ರಗಳೇ ಉದಾಹರಣೆ. ಆದರೆ ಅದೇ ಕಾರು ಅವರ ಜೀವವನ್ನು ಬಲಿಪಡೆದಿದ್ದು ಮಾತ್ರ ವಿಪರ್ಯಾಸ.
ಒಳ್ಳೆಯ ಅಡುಗೆಭಟ್ಟ..!
ಶಂಕರ್ ನಾಗ್ ರವರು ಉತ್ತಮವಾಗಿ ಅಡುಗೆ ಮಾಡುತ್ತಿದ್ದರು. ಕೆಲವೊಮ್ಮೆ ಅವರು ಕಾರಿನಲ್ಲೇ ಅಡುಗೆ ಮಾಡಲು ಶುರು ಮಾಡುತ್ತಿದ್ದರು. ಅದಕ್ಕೆ ಕಾರಣ ಅವರ ಬ್ಯುಸಿ ಸ್ಕೆಡ್ಯೂಲ್. ಇನ್ನು ಸದಾ ಪುಸ್ತಕಗಳನ್ನು ಓದುತ್ತಿದ್ದ ಅವರು ಕೆಲವೊಮ್ಮೆ ಲೈಬ್ರೆರಿಗಳಲ್ಲಿ ಗಂಟೆಗಟ್ಟಲೇ ಸಮಯ ಕಳೆಯುತ್ತಿದ್ದರು.
ಸಿನಿಮಾಕ್ಕಾಗಿ ಬ್ಯಾಂಕ್ ಉದ್ಯೋಗ ಬಿಟ್ಟಿದ್ದರು..!
ಶಂಕರ್ ನಾಗ್ ರವರಿಗೆ ಸಿನಿಮಾ ಮೇಲಿನ ಪ್ರೀತಿ ಎಷ್ಟಿತ್ತೆಂದರೆ ಅವರಿಗೆ ಒಲಿದುಬಂದಿದ್ದ ಬ್ಯಾಂಕ್ ನೌಕರಿಯನ್ನೂ ತಿರಸ್ಕರಿಸಿದ್ದರು. ಮುಂದೆ ಸಿನಿಮಾ ಇಂಡಸ್ರ್ಟಿಗೆ ಬಂದು ದೊಡ್ಡ ಹೆಸರು ಮಾಡಿದರು. ಒಂದು ವೇಳೆ ಅವರು ಬ್ಯಾಂಕ್ ಉದ್ಯೋಗದಲ್ಲೇ ಮುಂದುವರೆದಿದ್ದರೆ ಕನ್ನಡ ಸಿನಿಲೋಕ ಒಂದು ಅನಗ್ರ್ಯ ರತ್ನವನ್ನು ಕಳೆದುಕೊಂಡಂತಾಗುತ್ತಿತ್ತು.
ನಿರ್ದೇಶಕನಾಗಿ ಬಂದು ನಟರಾದರು..!
ಸಿನಿಮಾ ಲೋಕದಲ್ಲಿ ಶಂಕರ್ ನಾಗ್ ರವರ ಮೊದಲ ಆದ್ಯತೆ ಇದ್ದಿದ್ದು ನಿರ್ದೇಶನಕ್ಕೆ. ಅದರ ಫಲವಾಗಿ ಅಪೂರ್ವ ಸಂಗಮ, ನೋಡಿ ಸ್ವಾಮಿ ನಾವಿರೋದೆ ಹೀಗೆ, ಮುನಿಯನ ಮಾದರಿ, ಒಂದು ಮುತ್ತಿನ ಕಥೆ, ಆ್ಯಕ್ಸಿಡೆಂಟ್, ಜನ್ಮ ಜನ್ಮದ ಅನುಬಂಧ, ಗೀತಾ ಚಿತ್ರಗಳು ಹೊರಬಂದವು.