ಇವರು ನಿಜವಾದ ಕೊಳಚೆ ಮಾಣಿಕ್ಯ (ಸ್ಲಂಡಾಗ್ ಮಿಲೇನಿಯರ್)..! ಬಡ ದಲಿತ ಕುಟುಂಬದಲ್ಲಿ ಸಾಮಾನ್ಯ ಪೊಲೀಸ್ ಪೇದೆಯ ಮಗಳಾಗಿ ಜನಸಿದ ಇವರು ಬಾಲ್ಯದಲ್ಲಿ ಪಡಬಾರದ ನೋವನ್ನೆಲ್ಲಾ ಅನುಭವಿಸಿದರು..! ಅಪ್ಪ-ಅಮ್ಮ ಇಬ್ಬರು ಸೋದರರು, ಮೂರು ಜನ ಸೋದರಿಯರೊಂದಿಗೆ ಪೊಲೀಸ್ ಕ್ವಾರ್ಟರ್ಸ್ ನಲ್ಲೇ ವಾಸ ಮಾಡ್ತಾ ಇದ್ರು. ಚಿಕ್ಕಂದಿನಿಂದಲೂ ತುಂಬಾ ಜಾಣೆ. ಓದುವುದರಲ್ಲಿ ತುಂಬಾ ಆಸಕ್ತಿ ಇತ್ತು. ಆಟ ಆಡೋ ವಯಸ್ಸು, ಕ್ವಾರ್ಟರ್ಸ್ ನಲ್ಲಿದ್ದ ಇತರ ಮಕ್ಕಳೊಂದಿಗೆ ಆಟ ಆಡ್ತಾ ಇದ್ರೆ ಅವರ ತಂದೆ-ತಾಯಿ ಬಂದು ಅವರನ್ನು ಎಳೆದುಕೊಂಡು ಹೋಗ್ತಾ ಇದ್ರು..! ಈಕೆಯ ಜೊತೆ ಆಟ ಆಡೋಕೆ ಯಾವ ಮಕ್ಕಳೂ ಬರ್ತಾ ಇರ್ಲಿಲ್ಲ..! ದಲಿತೆ ಎಂಬ ಒಂದೇ ಒಂದು ಕಾರಣಕ್ಕೆ ಶಿಕ್ಷಕರೂ ಇವರನ್ನು ದೂರ ಇಟ್ಟಿದ್ರು, ಅವಮಾನಿಸ್ತಾ ಇದ್ರು..! ಶಾಲೆಯಲ್ಲಿ ಶಿಕ್ಷಕರು ಬೇರೆ ಮಕ್ಕಳ ಜೊತೆ ಕೂತು ಪಾಠ ಕೇಳೋಕೂ ಬಿಡ್ತಾ ಇರ್ಲಿಲ್ಲ..! ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸೋಕೆ ಈಕೆಗೆ ಅವಕಾಶ ಇರ್ಲಿಲ್ಲ..! ಶಿಕ್ಷಕರೇ ಇವರ ಕನಸುಗಳನ್ನು ನುಚ್ಚು ನೂರು ಮಾಡಿ ಬಿಟ್ಟಿದ್ರು..! ಎಲ್ಲರಿಂದಲೂ ಅವಮಾನ, ನಿಂದನೆ, ಅಸ್ಪೃಶ್ಯತೆಯಿಂದಾಗಿ ಏಳನೇ ತರಗತಿಯಲ್ಲಿರುವಾಗಲೇ ಶಾಲೆಯನ್ನು ಬಿಟ್ಟು ಬಿಟ್ರು…! ಓದುವ ಕನಸು ನನಸಾಗಲೇ ಇಲ್ಲ..!
ತಂದೆ ವಿದ್ಯಾವಂತರಲ್ಲದೇ ಇದ್ದರೂ ದಲಿತರಾಗಿದ್ದ ಕಾರಣಕ್ಕೆ ಮೀಸಲಾತಿ ಅಡಿಯಲ್ಲಿ ಪೊಲೀಸ್ ಪೇದೆ ಕೆಲಸ ಸಿಕ್ಕಿತ್ತು. ತನ್ನಂತೆ ತನ್ನ ಮಗಳಾಗ ಬಾರದೆಂದು ಆಕೆಯನ್ನು ಓದಿಸ ಬೇಕೆಂಬ ದೊಡ್ಡ ಕನಸನ್ನು ಕಂಡಿದ್ರು..! ಅವರ ಆಸೆ ಈಡೇರಲೇ ಇಲ್ಲ..! ಆ ಟೈಮಲ್ಲಿ ದಲಿತರಲ್ಲಿ ಬಾಲ್ಯವಿವಾಹ ಜಾರಿಯಲ್ಲಿತ್ತು..! ಬಾಲ್ಯವಿವಾಹವನ್ನು ತಂದೆ ವಿರೋಧಿಸಿದರೂ ಪ್ರಯೋಜನ ಆಗಲೇ ಇಲ್ಲ..! ಕೆಟ್ಟ ಸಂಪ್ರದಾಯದಂತೆ ಇವರಿಗೆ ಬಾಲ್ಯ ವಿವಾಹವನ್ನೂ ಮಾಡಲಾಯ್ತು..! ಇವರ ವಿವಾಹದಿಂದಾಗಿ ಮಗಳನ್ನು ಓದಿಸಬೇಕೆಂಬ ತಂದೆಯ ಆಸೆಯೂ ಕಮರಿತು..! ಮಗಳು ಬಾಲ್ಯ ವಿವಾಹಕ್ಕೆ ಬಲಿಯಾಗಿಯೇ ಬಿಟ್ಟಳು..!
ಹೀಗೆ ಇವರಿಗೆ ಮದುವೆ ಆಗುವಾಗ ಕೇವಲ 12 ವರ್ಷ ವಯಸ್ಸು..! ಹತ್ತು ಜನರಿದ್ದ ಆ ಕುಟುಂಬದಲ್ಲಿ ನೆಲ ಹೊರೆಸುವುದು, ಅಡುಗೆ ಮಾಡೋದು, ಬಟ್ಟೆ ತೊಳೆಯೋದು ಹೀಗೆ ಎಲ್ಲಾ ಕೆಲಸವನ್ನೂ ಇವರೊಬ್ಬರೇ ಮಾಡ್ಬೇಕಿತ್ತು..! ಸ್ವಲ್ಪವೂ ಮನುಷ್ಯತ್ವ ಇಲ್ಲದ ಗಂಡನ ಮನೆಯವರು ಇವರನ್ನು ಹಿಂಸಿಸುತ್ತಿದ್ರು..! ಅಡುಗೆಗೆ ಉಪ್ಪು ಸರಿ ಇಲ್ಲ, ಅದಿಲ್ಲ, ಇದಿಲ್ಲ, ಕಾರ ಇಲ್ಲ, ರುಚಿ ಇಲ್ಲ ಅಂತೆಲ್ಲಾ ಸಣ್ಣ ಸಣ್ಣ ಕಾರಣಗಳನ್ನೇ ದೊಡ್ಡದು ಮಾಡಿ ಹಿಂಸಿಸ್ತಾ ಇದ್ರು..! ಊಟ ಕೊಡದೆ ಉಪವಾಸ ಹಾಕ್ತಾ ಇದ್ರು. ದೈಹಿಕವಾಗಿ, ಮಾನಸಿಕವಾಗಿ ಚಿತ್ರಹಿಂಸೆಯನ್ನು ಅನುಭವಿಸಿದರು..! ಆರು ತಿಂಗಳ ನಂತರ ಇವರ ತಂದೆ ಇವರನ್ನು ನೋಡಿಕೊಂಡು ಹೋಗಲೆಂದು ಬಂದರು..! ಆಗ ಅವರಿಗೆ ಕಂಡಿದ್ದು ಅವರ ಮಗಳಲ್ಲ ,ನಡೆದಾಡುವ ಶವ…! ಮಗಳ ಈ ಸ್ಥಿತಿಯನ್ನು ಕಂಡು ತಂದೆಗೆ ಸಹಿಸಿಕೊಳ್ಳೋಕೆ ಆಗ್ಲೇ ಇಲ್ಲ. ಸೀದಾ ಇವರನ್ನು ಮನೆಗೆ ಕರ್ಕೊಂಡು ಹೋದ್ರು..!
ತಂದೆಯೊಡನೆ ತವರಿಗೆ ಹೋದ ಇವರು ಮಹಿಳಾ ಪೋಲಿಸ್ ಪೇದೆ ಕೆಲಸಕ್ಕೆ, ನರ್ಸಿಂಗ್ ಶಾಲೆಗಳಿಗೆ ಮತ್ತು ಮಿಲಟರಿಗೆ ಅರ್ಜಿ ಹಾಕಿದ್ರು..! ಚಿಕ್ಕ ವಯಸ್ಸು ಮತ್ತು ವಿದ್ಯಾಭ್ಯಾಸ ಇಲ್ಲದೇ ಇದ್ದ ಕಾರಣಕ್ಕಾಗಿ ಇವರು ಹಾಕಿದ ಅರ್ಜಿಗಳೆಲ್ಲಾ ತಿರಸ್ಕೃತಗೊಂಡವು.
ನಂತರ ಬದುಕಿಗಾಗಿ ಟೇಲರಿಂಗ್ ಕಲಿತು ರವಿಕೆಗಳನ್ನು ಹೊಲಿಗೆ ಹಾಕಲಾರಂಭಿಸಿದ್ರು. ಆ ಕೆಲಸಕ್ಕಾಗಿ ಹತ್ತು ರೂಪಾಯಿ ಕೂಲಿ ತಗೋಳ್ತಾ ಇದ್ರು..! ಪಾಪ, ತಂದೆ ಮತ್ತೆ ಶಾಲೆಗೆ ಹೋಗಮ್ಮಾ ಅಂತ ಹೇಳಿದ್ರು. ಆದರೆ ಕೆಟ್ಟವರ ಕೆಟ್ಟ ಮಾತುಗಳನ್ನು, ನಿಂದನೆಗಳನ್ನು ಸಹಿಸಿಕೊಳ್ಳಲಾಗದೇ ಸಾವಿಗೆ ಶರಣಾಗಲು ಹೊರಟರು..!
ಬದುಕುವುದಕ್ಕಿಂತ ಸಾಯುವುದೇ ಸುಲಭ ಅಂತ ಡಿಸೈಡ್ ಮಾಡಿದ ಇವರು ವಿಷ ಕುಡಿದು ಬಿಟ್ಟರು..! ಅದೃಷ್ಟವಶಾತ್ ಇದನ್ನು ಗಮನಿಸಿದ ಇವರ ಚಿಕ್ಕಮ್ಮ ಇವರನ್ನು ಆಸ್ಪತ್ರೆಗೆ ಸೇರಿಸಿದರು..! ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದ ಇವರನ್ನು ನೋಡಿದ ಡಾಕ್ಟರ್ ಇನ್ನು 24 ಗಂಟೆಯೊಳಗೆ ಪ್ರಜ್ಞೆ ಬರದೇ ಇದ್ರೆ ಉಳಿಯುವುದು ಕಷ್ಟ ಅಂತ ಹೇಳಿಯೇ ಬಿಟ್ಟಿದ್ರು..! ಆದರೆ ಪವಾಡದಂತೆ ಇವರು ಬದುಕುಳಿದ್ರು..! ಅಷ್ಟೊಂದು ವಿಷ ಕುಡಿದು ಬದುಕ್ಕದ್ದೇ ಆಶ್ಚರ್ಯ ಅಂತ ಇವತ್ತಿಗೂ ಇವರು ಅಂದುಕೊಳ್ತಾರೆ..!
ಸಾವಿನ ದವಡೆಗೆ ಸಿಲುಕಿ ಬದುಕಿ ಬಂದ ಮೇಲೆ ಇವರ ಮೊದಲಿನಂತೆ ಇರ್ಲಿಲ್ಲ..! ದೈರ್ಯ ತಂದುಕೊಂಡ್ರು,..! ಕೆಟ್ಟ ಸಮಾಜಕ್ಕೆ ಎದೆಯೊಡ್ಡಿ ನಿಂತರು. ಗಟ್ಟಿ ಮನಸ್ಸಿನ ಹೆಣ್ಣಾಗಿ ಹೊಸ ಜೀವನ ಆರಂಭಿಸಿದ್ರು..!
ಅಪ್ಪ-ಅಮ್ಮನ ಮನವೊಲಿಸಿ ಮುಂಬೈಯತ್ತ ಹೊರಟೇ ಬಿಟ್ಟರು. ಚಿಕ್ಕಪ್ಪನ ಮನೆಯಲ್ಲೇ ಇದ್ದು ಟೇಲರಿಂಗ್ ಮಾಡೋಕೆ ಶುರುಮಾಡಿದ್ರು. ಕೆಲವು ಸಮಯದ ನಂತರ ತಂದೆ ಉದ್ಯೋಗವನ್ನೂ ಕಳೆದು ಕೊಂಡ್ರು..! ಈಗ ಇಡೀ ಮನೆಗೆ ಹಿರಿಯ ಮಗಳಾದ ಇವರ ಸಂಪಾದನೆಯೇ ಆಸರೆಯಾಯ್ತು..! ಸಂಪಾದನೆ ಮಾಡ್ತಾ ಇದ್ದ ಹಣವನ್ನೇ ಅಷ್ಟೋ ಇಷ್ಟೋ ಉಳಿಸಿ 40 ರೂಪಾಯಿ ಬಾಡಿಗೆಯ ಸಣ್ಣ ಕೋಣೆಯನ್ನು ತಗೊಂಡ್ರು..! ಅಲ್ಲಿಗೇ ಅಪ್ಪ ಅಮ್ಮ, ಸೋದರ, ಸೋದರಿಯರನ್ನೂ ಕರೆಸಿಕೊಂಡ್ರು..! ಇಡೀ ಸಂಸಾರವನ್ನು ಪುಟ್ಟ ಸಂಪಾದನೆಯ್ಲಲಿ ತೂಗುವುದು ತುಂಬಾನೇ ಕಷ್ಟವಾಯ್ತು..!
ಇಂಥಾ ಸ್ಥಿತಿಯಲ್ಲಿಯೇ ಎದುರಾದ ಒಂದು ದುರಂತ ಇವರ ಜೀವನವನ್ನೇ ಬದಲಾಯಿಸ್ತು..! ಮೊದಲೇ ಹಣಕಾಸಿನ ಸಮಸ್ಯೆ ಇತ್ತು. ಹೀಗಿರುವಾಗಲೇ ಇವರ ಕೊನೆಯ ತಂಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಚಿಕತ್ಸೆಗಾಗಿ ಕೈಯಲ್ಲಿ ಹಣವಿರಲಿಲ್ಲ. ಅಕ್ಕಾ ಏನಾದರೂ ಮಾಡಿ ನನ್ನನ್ನು ಬದುಕಿಸು, ಬದುಕಿಸು, ಸಾಯಲು ನನಗೆ ಇಷ್ಟ ಇಲ್ಲ ಅಂತ ಅಳುತ್ತಿದ್ದರು..! ಆಗ ಹಣವಿಲ್ಲದೇ ಏನೂ ಮಾಡಲು ಸಾಧ್ಯವಿಲ್ಲ ಅಂತ ಹೆಚ್ಚು ಹೆಚ್ಚು ಸಂಪಾದಿಸೋಕೆ ಮುಂದಾದ್ರು..! ದಿನಕ್ಕೆ 16ಗಂಟೆ ಕೆಲಸ ಮಾಡಲು ಪ್ರಾರಂಭಿಸಿದ್ರು.
ಸರ್ಕಾರಿ ಸಾಲಕ್ಕೆ ಅರ್ಜಿ ಹಾಕಿದ್ರು. ಸಣ್ಣ ಪೀಠೋಪಕರಣಗಳನ್ನು ಮಾರಾಟ ಮಾಡಲು ಆರಂಭಿಸಿದ್ರು. ಪೀರೋಪಕರಣಗಳ ಮಾರಾಟದೊಡನೆ ಟೇಲರಿಂಗ್ ಅನ್ನೂ ಮುಂದುವರೆಸಿದ್ರು..! ಆರ್ಥಿಕ ಪರಿಸ್ಥಿತಿ ಸುಧಾರಿಸ್ತಾ ಬಂತು..!
ಒಂದು ಎನ್.ಜಿ.ಓ ಆರಂಭಿಸಿದ್ರು. ಆ ಮೂಲಕ ಸರ್ಕಾರದಿಂದ ದೊರಕುವ ಯೋಜನೆಗಳ ಬಗ್ಗೆ ಉದ್ಯಮ ಮಾಡಬೇಕೆಂದು ಕೊಂಡಿರುವ ಇವರಂಥವರಿಗೆ ಸಾಲ ಮತ್ತು ಸೌಲಭ್ಯಗಳು ಸಿಗುವಂತೆ ಮಾಡಿದ್ರು..! ತನ್ನಂತೆ ಯಾರೂ ನೋವು ಅನುಭವಿಸಬಾರದೆಂದು ಹೆಣ್ಣು ಮಕ್ಕಳ ಸಹಾಯಕ್ಕೆ ನಿಂತರು.
ಎರಡೇ ಎರಡು ವರ್ಷದಲ್ಲಿ ಮೊದಲು ತೆಗೆದುಕೊಂಡ ಸಾಲ ತೀರಿತು. ನಂತರ ಇವರ ಬಳಿಯಲ್ಲಿದ್ದ ಸ್ವಲ್ಪ ಹಣ ಮತ್ತು ಬೇರೆ ಕಡೆ ಸಾಲ ಮಾಡಿ ಹಣದ ಅವಶ್ಯಕತೆ ಇದ್ದ ಒಬ್ಬ ವ್ಯಕ್ತಿಯಿಂದ ವಾಡಾದಲ್ಲಿ ಲಿಟಿಗೇಶನಲ್ಲಿದ್ದ ಭೂಮಿಯನ್ನು ಕೊಂಡುಕೊಂಡ್ರು..! ಭೂಮಿಯನ್ನು ಕೊಂಡು ಕೊಂಡ ನಂತ ಕಾನೂನು ಹೋರಾಟ ನಡೆಸ ಬೇಕಾಯ್ತು..! ಎರಡು ವರ್ಷ ಕಾನೂನು ಹೋರಾಟವನ್ನೂ ಮಾಡಿ ಭೂಮಿಯನ್ನು ಉಳಿಸಿಕೊಂಡ್ರು..! ಕೈಲ್ಲಿದ್ದ ಹಣವೆಲ್ಲಾ ಅಷ್ಟೊತ್ತಿಗೆ ಕಳ್ಕೊಂಡು ಬಿಟ್ಟಿದ್ರು..! ಕೊಂಡು ಕೊಂಡ ಭೂಮಿಯಲ್ಲಿ ಕಟ್ಟಡ ನಿರ್ಮಿಸಲು ಮತ್ತೊಬ್ಬ ಪಾಲುದಾರನನ್ನು ಹುಡುಕಿದ್ರು..! ಬಂದ ಲಾಭದಲ್ಲಿ 65% ಅವರಿಗೇ ಕೊಡುವಂತೆ ಒಪ್ಪಂದ ಮಾಡಿಕೊಂಡ್ರು..! ಈಗ ಇವರ ಪೀಠೋಪಕರಣ ವ್ಯಾಪಾರ, ರಿಯಲ್ ಎಸ್ಟೇಟ್ ವ್ಯವಹಾರ ಕೂಡ ಲಾಭದಲ್ಲಿ ನಡೆಯಲಾರಂಭಿಸಿದವು..! ಜೀವನ ತುಂಬಾ ಸುಧಾರಿಸ್ತಾ ಬಂತು..!
ಗಾಂಧೀಜಿ ಮತ್ತು ನೆಹರೂ ಅವರ ಶಿಷ್ಯರಾಗಿದ್ದ ರಾಂಜಿ ಭೈ ಕಮಾನಿ ಅವರು ಮುಂಬೈನ ಕಮಾನಿ ಟ್ಯೂಬ್ಸ್, ಕಮಾನಿ ಇಂಜಿನಿಯರಿಂಗ್, ಕಾಮನಿ ಮೆಟೆಲ್ಸ್ ಎಂಬ ಕಂಪನಿಯನ್ನು ಸ್ಥಾಪಸಿದ್ದರು. ಬಡಕಾರ್ಮಿಕರಿಗೆ ಕೆಲಸ ಕೊಡಬೇಕೆಂಬ, ದೇಶದ ಆರ್ಥಿಕ ಅಭಿವೃದ್ದಿ ಉದ್ದೇಶದಿಂದ ಅವರು ಕಂಪನಿ ಸ್ಥಾಪಿಸಿದ್ದರೇ ವಿನಃ ಹಣ ಮಾಡುವುದಕ್ಕಲ್ಲ..! ಅವರ ಕಂಪನಿ ಒಳ್ಳೇ ರೀತೀಲಿ ನಡೀತಾ ಇತ್ತು. ಆದರೆ 1987ರಲ್ಲಿ ಕಮಾನಿ ಮರಣದ ನಂತರ ಮಕ್ಕಳ ಜಗಳದಿಂದ ಕಂಪನಿ ಕಡೆ ಯಾರೂ ಸರಿಯಾಗಿ ಗಮನ ನೀಡದಂತಾಯ್ತು..! ಇದರಿಂದಾಗಿ ಕಂಪನಿಯ ಮಾಲಿಕತ್ವವನ್ನು ಕಾರ್ಮಿಕ ಸಂಘಕ್ಕೆ ವರ್ಗಾಯಿಸಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿತು. ಆ ಕಾಲಘಟ್ಟದಲ್ಲಿ ಕಂಪನಿಯ ಮಾಲಿಕತ್ವವನ್ನು ಕಾರ್ಮಿಕ ಸಂಘಕ್ಕೆ ವರ್ಗಾಯಿಸುವುದು ಫ್ರಾನ್ಸ್, ಜರ್ಮನಿ, ಜಪಾನ್ಗಳಲ್ಲಿ ಮಾತ್ರವೇ ಇತ್ತು. ಭಾರತದಲ್ಲಿ ಇರ್ಲಿಲ್ಲ..! ಕಾರ್ಮಿಕರ ಸಂಘಕ್ಕೆ ವರ್ಗಾಯಿಸಲ್ಪಟ್ಟ ದೇಶದ ಮೊದಲ ಕಂಪನಿ ಕಾಮಿನ್ ಟ್ಯೂಬ್. ಕಾರ್ಮಿಕ ಸಂಘದ ಕಲಹದಿಂದಾಗಿ ಕಂಪನಿ ನಷ್ಟದಲ್ಲಿ ನಡೆಯಲಾರಂಭಿಸ್ತು. ಸರ್ಕಾರದ ಯೋಜನೆಗಳ ಮೂಲಕ ಹಣ ಸಹಾಯ ಮಾಡಿತಾದರೂ ಬ್ಯಾಂಕಿನಲ್ಲಿ ಸಾಲದ ಹೊರೆ ಹೆಚ್ಚಿತೇ ಹೊರತು ಯಾವುದೇ ಪ್ರಯೋಜನ ಆಗ್ಲೇ ಇಲ್ಲ..! 1987-97ರವರೆಗೆ ನಷ್ಟದಲ್ಲೇ ಇದ್ದ ಕಂಪನಿಯನ್ನು ಅನಿವಾರ್ಯವಾಗಿ ಮುಚ್ಚವ ಸ್ಥಿತಿಗೆ ತಲುಪಿತು. ಎರಡು ಕಂಪನಿಗಳು ಮೊದಲೇ ಮುಚ್ಚಿದ್ದರಿಂದ ಈ ಕಂಪನಿಯೂ ಮುಚ್ಚಿದರೆ ಇದನ್ನೇ ನಂಬಿಕೊಂಡ 3000 ಕಾರ್ಮಿಕರ ಭವಿಷ್ಯದ ಪ್ರಶ್ನೆ ಕಾಡಿತು. ಆಗ ಕಾರ್ಮಿಕರು ಇವರ ಬಳಿ ಬಂದು (ಈ ಸ್ಟೋರಿಯ ಕಥಾನಾಯಕಿಯ ಬಳಿ) ಹೇಗಾದರೂ ಮಾಡಿ ಕಂಪನಿಯನ್ನು ಉಳಿಸಿ, ಮುನ್ನೆಡೆಸುವಂತೆ ಕೇಳಿಕೊಂಡ್ರು..! ಆದರೆ ಇವರಿಗೆ ಅದರ ಬಗ್ಗೆ ಜ್ಞಾನವೇ ಇರ್ಲಿಲ್ಲ. ಆದರೆ ಆ ಕಾರ್ಮಿಕರ ಕುಟುಂಬಗಳ ಉಳಿವಿಗಾಗಿ ಒಪ್ಪಿಕೊಂಡೇ ಬಿಟ್ಟರು.
ಇವರು 10 ಜನ ಪರಿಣಿತರ ತಂಡವನ್ನು ರಚಿಸಿ, ಕಂಪನಿಗಾದ ಹಾನಿಯನ್ನು ಸರಿಪಡಿಸುವುದರ ಬಗ್ಗೆ ಚರ್ಚಿಸಿ ಅದರ ಪ್ರಸ್ತಾವನೆಯನ್ನು ಐಡಿಬಿಐಯ ಮುಂದಿಟ್ಟರು. ಹಣಕಾಸಿನ ಜವಬ್ದಾರಿಯನ್ನು ತೆಗದುಕೊಳ್ಳುವಂತೆ ಐಡಿಬಿಐ ಸೂಚಿಸಿತು. ಅದಕ್ಕೆ ಒಪ್ಪಿದ ಇವರನ್ನು 2000ನೇ ಇಸವಿಯಲ್ಲಿ ಕಂಪನಿಯ ಪ್ರೆಸಿಡೆಂಟ್ ಆಗಿ ಮಾಡಿತು. 2000-2006ರ ವರೆಗೂ ಕೋರ್ಟ್ ಗೆ ಅಲೆದಾಡಿದರು. ಪೆನಾಲ್ಟಿ ತೆರಿಗೆ ಮತ್ತು ಬಡ್ಡಿಗಳೇ 166 ಕೋಟಿ ಸಾಲಕ್ಕೆ ಕಾರಣ ಅನ್ನೋದನ್ನೂ ಇವರು ಕಂಡುಕೊಂಡರು..! ಹಣಕಾಸಿನ ಮಂತ್ರಿಗಳನ್ನು ಭೇಟಿಯಾಗಿ ಕಂಪನಿ ಮುಚ್ಚಿದ್ರೆ ಯಾರಿಗೂ ಲಾಭವಿಲ್ಲ, ಪೆನಾಲ್ಟಿ ತೆರಿಗೆಯನ್ನು ಮನ್ನಾ ಮಾಡುವಂತೆ ಸೂಚಿಸಿದ್ರು..! ಬ್ಯಾಂಕ್ ಗಳ ಜೊತೆ ಮಾತುಕತೆಗೆ ಸಹಾಯ ಮಾಡಿದ ಹಣಕಾಸು ಸಚಿವರು ಪೆನಾಲ್ಟಿ ತೆರಿಗೆಯನ್ನು ರದ್ದು ಮಾಡಿದ್ದಲ್ಲದೇ ಸಾಲದಲ್ಲಿ 25% ರಿಯಾಯಿತಿಯನ್ನೂ ನೀಡಿದ್ರು..!
ನಂತರ ಕೋರ್ಟ್ ಕಂಪನಿಯ ಮಾಲಿಕತ್ವವನ್ನು ಇವರಿಗೆ ವರ್ಗಾವಣೆ ಮಾಡಿದ ಕೋರ್ಟ್ ಒಂದು ವರ್ಷದಲ್ಲಿ ಬ್ಯಾಂಕ್ ಸಾಲ ತೀರಿಸುವಂತೆಯೂ ಮೂರು ತಿಂಗಳಲ್ಲಿ ಕಾರ್ಮಿಕರಿಗೆ ಕೊಡ ಬೇಕಾಗಿದ್ದ ಅಷ್ಟೂ ಬಾಕಿ ವೇತನವನ್ನು ಮೂರು ವರ್ಷದಲ್ಲಿ ಕೊಡಬೇಕೆಂದೂ ಆದೇಶಿಸಿತು..! ಕೋರ್ಟ್ ಆದೇಶದಂತೆ ಸಾಲವನ್ನೂ ತೀರಿಸಿ, ಕಾರ್ಮಿಕರ ಬಾಕಿಯನ್ನೂ ಚುಕ್ತಾ ಮಾಡಿ ಕಂಪನಿಯ ಅಭಿವೃದ್ದಿಗೆ ಶ್ರಮಿಸಿದರು..! ಕಂಪನಿ ಇವತ್ತು ಲಾಭದಲ್ಲಿದೆ. ಈಗ `ಕಾಮಿನ್ ಟ್ಯೂಬ್’ ಕಂಪನಿಯ ಮಾಲಿಕರು ಇವರೇ..! ಕುರ್ಲಾದಲ್ಲಿದ್ದ ಕಂಪನಿಯ ಭೂಮಿಯನ್ನು ಮಾರಿ ಅವರು ವಾಡಾದಲ್ಲಿ ಕೊಂಡು ಕೊಂಡಿದ್ದ 7 ಎಕರೆ ಜಾಗಕ್ಕೆ ಕಂಪನಿಯನ್ನು ವರ್ಗಾಯಿಸಲು ನಿರ್ಧರಿಸಿ 2009ರಲ್ಲಿ ಕಂಪನಿಯನ್ನು ವಾಡಕ್ಕೆ ವರ್ಗಾಯಿಸಿದ್ದಾರೆ. ಇವತ್ತು 7395920000.00 ರೂ ಬೆಲೆ ಬಾಳುವ ಕಂಪನಿಯ ಸಿಇಒ ಆಗಿರುವ ಇವರಿಗೆ ಪದ್ಮಶ್ರೀ ಪ್ರಶಸ್ತಿಯೂ ಲಭಿಸಿದೆ..! ಅಂದಹಾಗೆ ಈ ಸಾಧಕಿಯ ಹೆಸರು `ಕಲ್ಪನಾ ಸರೋಜ್’..! ಕಲ್ಪನಾರಿಗೆ ಕಮಾನಿಯವರ ಮುಚ್ಚಿದ ಕಂಪನಿಗಳಾದ ಕಮಾನಿ ಇಂಜಿನಿಯರಿಂಗ್, ಕಾಮನಿ ಮೆಟೆಲ್ಸ್ನ್ನೂ ತೆರೆದು ಬೆಳೆಸ ಬೇಕೆಂಬ ಆಸೆ ಇದೆಯಂತೆ..! ಕಷ್ಟಪಟ್ಟು ಮೇಲೆ ಬಂದ ಇವರಿಂದ ಇವತ್ತು ಎಷ್ಟೋ ಜನರ ಬದುಕು ಸುಧಾರಿಸಿದೆ..! ಎಷ್ಟೋ ಜನರಿಗೆ ಅನ್ನದಾತರಾಗಿದ್ದಾರೆ.
- ಶಶಿಧರ ಡಿ ಎಸ್ ದೋಣಿಹಕ್ಲು
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
18 ವರ್ಷದಿಂದ ಒಂದೇ ಕಾಲಲ್ಲಿ ದುಡಿಯುತ್ತಿರುವ ರೈತ..! ಈತನ ಛಲದ ಮುಂದೆ ವಿಧಿಯೂ ಶರಣಾಗಿದೆ..!
50 ಕೋಟಿ ಬೆಲೆಬಾಳುವ ಕಂಪನಿ ಕಟ್ಟಿದ ಹುಟ್ಟು ಕುರುಡರಾದ ಶ್ರೀಕಾಂತ್…! ಇದು ಅಂಧನ ಯಶೋಗಾಥೆ..!
ರಷ್ಯಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಮೋದಿ..! #Video
ಮಾಸ್ಟರ್ ಪೀಸು… ಹಿಂಗೈತಿ ಬಾಸು..! – ಕಿರಿಕ್ ಕೀರ್ತಿ ..!
ಬರಲಿದೆ ವಾಟ್ಸ್ ಆ್ಯಪ್ ನಲ್ಲಿ ವೀಡಿಯೋ ಕಾಲಿಂಗ್..! ಅಚ್ಚರಿಗಳನ್ನು ಹೊತ್ತು ತರಲಿದೆ ಹೊಸ ಮಾದರಿ..!