ಚಾಮರಾಜನಗರ: ರೈತರು ತಾವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗೆ ಒಂದು ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ ಮುಖ್ಯಮಂತ್ರಿಗೆ ಕೊಟ್ಟ ಮನವಿಗಳು ಕಸದ ರಾಶಿಗೆ ಸೇರಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹೌದು ಜು.10 ರಂದು ಕಾಂಗ್ರೆಸ್ ಪಕ್ಷದ ಕೃತಜ್ಞತಾ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದರು. ಆ ವೇಳೆ ರೈತ ಸಂಘದ ನಾಯಕರು ಸಿಎಂ ಸಿದ್ದರಾಮಯ್ಯಗೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಮನವಿ ಪತ್ರಗಳನ್ನು ಕೊಟ್ಟಿದ್ದರು. ಆದರೆ ಈ ಮನವಿ ಪತ್ರಗಳು ಇದೀಗ ಕಸದ ಬುಟ್ಟಿ ಸೇರಿವೆ.
ಮುಖ್ಯಮಂತ್ರಿಗಳನ್ನೇ ಭೇಟಿ ಮಾಡಿ ಮನವಿ ಸಲ್ಲಿಸಿದರೆ ಸಮಸ್ಯೆಗೆ ಪರಿಹಾರ ಆಗುತ್ತದೆ ಎನ್ನುವುದು ಜನರ ಭರವಸೆ. ಆದರೆ ಮುಖ್ಯಮಂತ್ರಿಗಳು ಸ್ವೀಕರಿಸಿದ್ದ ಮನವಿ ಪತ್ರಗಳು ನಗರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಸದ ರಾಶಿಯಲ್ಲಿ ಬಿದ್ದಿವೆ. ಬಿಸಿಲನ್ನು ಲೆಕ್ಕಿಸದೆ ಗಂಟೆಗಟ್ಟಲೆ ಕಾದು ಮನವಿ ಸಲ್ಲಿಸಿದ್ದ ಸಾರ್ವಜನಿಕರು ಹಾಗೂ ರೈತ ಸಂಘಟನೆಗಳು, ಇದು ದುರಹಂಕಾರದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.