ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿದ್ದು, ಪ್ರಬಲ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರಕ್ರಿಯೆ ಆರಂಭವಾಗಿದೆ. ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವಂತೆ KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ. ನವೆಂಬರ್ 5 ರಿಂದ 15 ರೊಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಟಿಕೆಟ್ ಬಯಸುವವರು ಅರ್ಜಿಗೆ 5 ಸಾವಿರ ರೂಪಾಯಿ ಶುಲ್ಕ ಪಾವತಿಸಬೇಕಿದೆ.
ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು 2 ಲಕ್ಷ ರೂಪಾಯಿ ಡಿಡಿ, ಕಾಂಗ್ರೆಸ್ ಸದಸ್ಯತ್ವದ ವಿವರ ಲಗತ್ತಿಸಬೇಕಿದೆ. ಇನ್ನ ಪರಿಶಿಷ್ಟ ವರ್ಗದವರಿಗೆ ಶೇ.50ರಷ್ಟು ವಿನಾಯಿತಿ ಘೋಷಣೆ ಮಾಡಲಾಗಿದ್ದು, ಇಲ್ಲಿ ಸಂಗ್ರಹಿಸುವ ಹಣ ಕಾಂಗ್ರೆಸ್ ಪಕ್ಷದ ಕಟ್ಟಡ ಕಾಮಗಾರಿ ನಿಧಿಗೆ ಜಮೆ ಆಗಲಿದೆ. ಹಾಲಿ ಶಾಸಕರ ಸಮೇತ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬೇಕಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಕೂಡ ಅರ್ಜಿ ಹಾಕುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಸಂದೇಶವನ್ನು ಡಿಕೆಶಿ ರವಾನಿಸಿದ್ದು, ಕಾಂಗ್ರೆಸ್ ತೊರೆದಿದ್ದವರು ಮತ್ತೆ ಪಕ್ಷಕ್ಕೆ ಬರುವುದಾದ್ರೆ ಅರ್ಜಿ ಸಲ್ಲಿಸಲು ಕರೆ ನೀಡಲಾಗಿದೆ. ಈ ಸಂಬಂಧ ಕಾಂಗ್ರೆಸ್ ಒಂದು ಸಮಿತಿ ರಚಿಸಿದ್ದು, ಪಕ್ಷ ಸೇರ್ಪಡೆ ಬಗ್ಗೆ ಸಮಿತಿ ತೆಗೆದುಕೊಳ್ಳುವ ತೀರ್ಮಾನವೇ ಫೈನಲ್ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.