ಬೆಂಗಳೂರಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಬಿಬಿಎಂಪಿ ಒಪ್ಪಿಗೆ ನೀಡಿದೆ. ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ವಾರ್ಡಿಗೆ ಒಂದು ಗಣೇಶೋತ್ಸವ ಅಂತ ನಿಗದಿಪಡಿಸಲಾಗಿತ್ತು. ಮೂರು ದಿನ ಮಾತ್ರ ಆಚರಣೆಗೆ ಅವಕಾಶ ನೀಡಲಾಗಿತ್ತು. ಆದರೆ, ಈ ಸಾರಿ 15 ದಿನಗಳವರೆಗೂ ಗಣೇಶ ಕೂರಿಸಲು ಬಿಬಿಎಂಪಿಯಿಂದ ಅನುಮತಿ ನೀಡಲಾಗ್ತಿದೆ.
ಗಣೇಶ ಕೂರಿಸಲು ಇಚ್ಛಿಸುವವರು ಏಕ ಗವಾಕ್ಷಿ ಪದ್ಧತಿಯಲ್ಲಿ ಅನುಮತಿ ಪಡೆಯಬೇಕಿದೆ. ಪೊಲೀಸ್ ಇಲಾಖೆ, ಬಿಬಿಎಂಪಿ ಹಾಗೂ ಬೆಸ್ಕಾಂ ಇಲಾಖೆಗಳಿಗೆ ಸಂಬಂಧಿಸಿದಂತೆ ಒಂದೇ ಅನುಮತಿ ಪಡೆಯಲು ಏರ್ಪಾಡು ಮಾಡಲಾಗಿದ್ದು, ವಲಯ ಕಚೇರಿಗಳಲ್ಲಿ ಅನುಮತಿ ಕೋರಬೇಕಾಗಿದೆ. ಅನುಮತಿ ಪಡೆದವರು ಅದ್ಧೂರಿಯಾಗಿ ಸಾಂಸ್ಕೃತಿಕ ಹಾಗೂ ಕಲಾ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಬಹುದು. ಆದರೆ, ಯಾರೇ ಗಣೇಶ ಕೂರಿಸಬೇಕೆಂದರೂ ಕಡ್ಡಾಯವಾಗಿ ಅನುಮತಿ ಪಡೆಯೋದರ ಜೊತೆಗೆ ಶಾಂತಿ ಭಂಗವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಆಗಸ್ಟ್ 30 ರಿಂದ ಸೆಪ್ಟೆಂಬರ್ 15ರವರೆಗೆ ಮಾತ್ರ ಗಣೇಶ ಕೂರಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.