ಮೊದಲ ಗೆಲುವಿಗೆ ಬೀಗ ಬೇಡ, ಎರಡನೇ ಬಾರಿ ಸೋತಾಗ ಅಣಕಿಸುವ ತುಟಿಗಳು ನಿನ್ನ ಮೊದಲ ಗೆಲುವನ್ನು ಅದೃಷ್ಟ ಅಂದು ಬಿಡುತ್ತವೆ..! ಇದು ಎಂಥಹಾ ಅದ್ಭುತ, ಅರ್ಥಗರ್ಭಿತ ಸಾಲುಗಳು ಅಲ್ವಾ..? ಇದನ್ನು ಹೇಳಿದವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ.
ಕೇವಲ ದೊಡ್ಡ ದೊಡ್ಡ ಮಾತುಗಳನ್ನಾಡುವ ಬಹಳಷ್ಟು ಜನ ನಮ್ಮ ನಡುವೆ ಇದ್ದಾರೆ…! ಆದ್ರೆ ನುಡಿದಂತೆ ನಡೆಯ ಬೇಕಲ್ಲಾ..? ಅಬ್ದುಲ್ ಕಲಾಂ ನುಡಿದಂತೆ ನಡೆದವರೂ ಕೂಡ..! ಅದಕ್ಕಾಗಿಯೇ ಯಾರ ನಗೆಪಾಟಲಿಗೂ ಗುರಿ ಆಗ್ಲಿಲ್ಲ..! ಉನ್ನತ ಪದವಿ, ಅಧಿಕಾರ, ಹೆಸರು, ಕೀರ್ತಿ, ಹಣ ಎಲ್ಲಾ ಇದ್ದರೂ ಸಾಮಾನ್ಯ ವ್ಯಕ್ತಿಯಾಗಿ ಬದುಕು ಸವೆಸಿದರು..! ಕೆಲವರು ಅಧಿಕಾರದಲ್ಲಿರುವಾಗಲೇ ಯಾರಿಗೂ ಗೊತ್ತಿರಲ್ಲ..! ಇನ್ನು ಮಾಜಿ ಆದರೆಂದರೆ ಅವರ ನೆನಪೇ ಯಾರಿಗೂ ಇರಲ್ಲ..! ಆದರೆ ಅಧಿಕಾರದ ಅವಧಿಯ ನಂತರ…, ಅಷ್ಟೇ ಏಕೆ ಮರಣ ನಂತರವೂ ಇಡೀ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವಂತಹ ಮಹಾನ್ ವ್ಯಕ್ತಿ ಅಂದ್ರೆ, ಅದು ನಮ್ಮೆಲ್ಲರ ನೆಚ್ಚಿನ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮಾತ್ರ.
ಅಬ್ದುಲ್ ಕಲಾಂಜಿ ಅವರ ಪೂರ್ಣ ಹೆಸರು, ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ. ಇವರು ವಿಶ್ವಕಂಡ ಶ್ರೇಷ್ಠ ವಿಜ್ಞಾನಿ ಮಾತ್ರವಲ್ಲ ಅಪರೂಪದ ಮಾಣಿಕ್ಯ, ಭಾರತ ರತ್ನ. ಇವರು ಅಕ್ಟೋಬರ್ 15,1931ರಲ್ಲಿ ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಟಿಯಲ್ಲಿ ಜನಿಸಿದ್ದರು. ಬಾಲ್ಯದಲ್ಲಿ ದಿನಪತ್ರಿಕೆ ಮನೆಮನೆಗೆ ಹಾಕುತ್ತಾ ದುಡಿಮೆಯೊಂದಿಗೆ ಕಲಿಕೆ ಮುಂದುವರೆಸಿದ್ದರು..! ಇವರು 1958ರಲ್ಲಿ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯಿಂದ ವೈಮಾನಿಕ ಇಂಜಿನಿಯರ್ ಪದವಿ ಪಡೆದರು…! ಡಿ.ಆರ್.ಡಿ.ಓ ಹಾಗೂ ಇಸ್ರೋದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದೂ ಇತಿಹಾಸ…! 2007ರ ಜುಲೈ 25ರಿಂದ 2007ರ ಜುಲೈ 25 ಅವಧಿಯಲ್ಲಿ ದೇಶದ ಹನ್ನೊಂದನೆಯ ರಾಷ್ಟ್ರಪತಿಯಾಗಿ ಆ ಹುದ್ದೆಗೇ ಗೌರವ ತಂದುಕೊಟ್ಟ ಮಹಾತ್ಮರು…! ಜಾತಿ, ಪಕ್ಷದ ಎಲ್ಲೆಯನ್ನು ಮೀರಿದ ವ್ಯಕ್ತಿತ್ವ ಇವರದ್ದಾಗಿತ್ತು…! ದೇಶದ ಈ ಹೆಮ್ಮೆಯ ವ್ಯಕ್ತಿಗೆ ಮಕ್ಕಳೊಂದಿಗೆ ಕಾಲ ಕಳೆಯುವುದೆಂದರೆ ಅಚ್ಚುಮೆಚ್ಚು. ಸದಾ ಮಕ್ಕಳೊಡನೆ, ಮಗುವಂತೆ ಬೆರೆಯುತ್ತಿದ್ದ ಕಲಾಂ, ಎಲ್ಲರಿಗೂ ಆದರ್ಶರು. ಎಲ್ಲರನ್ನೂ ಹುರಿದುಂಬಿಸುತ್ತಿದ್ದ ಪ್ರೇರಣಾ ಶಕ್ತಿ ಆಗಿದ್ದರು. ಇವರ ನಡೆ ಪ್ರತಿಯೊಬ್ಬರಿಗೂ ದಾರಿದೀಪ, ಮಾರ್ಗಸೂಚಿ, ಪ್ರೇರಣೆ…! 1997ರಲ್ಲಿ ಭಾರತ ಸರಕಾರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ರಾಜಸ್ಥಾನದ ಪೋಕ್ರಾನ್ ನಲ್ಲಿ ಅಣುಪರೀಕ್ಷೆ ನೇತೃತ್ವವಹಿಸಿದ್ದ ಇವರು ಕ್ಷಿಪಣಿ ಮಾನವ, ಕ್ಷಿಪಣಿ ಜನಕ(ಮಿಸೈಲ್ ಮ್ಯಾನ್ ಆಫ್ ಇಂಡಿಯಾ) ಎಂದು ಕರೆಯಲ್ಪಟ್ಟರು.
ಬಡತನದಲ್ಲಿ ಬೆಳೆದ ಅಬ್ದುಲ್ ಕಲಾಂ ದೇಶದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿರುವುದು ನಿಜಕ್ಕೂ ಪ್ರತಿಯೊಬ್ಬರ ಸಾಧನೆಗೂ ಸ್ಪೂರ್ತಿ….! ಯಾವಗಲೂ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಹೇಳುತಿದ್ದರು ಕಲಾಂ. ಸದಾ ಎಲ್ಲರೊಡನೆ ಬೆರೆತು ಉಪನ್ಯಾಸ ಮಾಡುವುದನ್ನೇ ನೆಚ್ಚಿಕೊಂಡು, ಅದರಲ್ಲಿಯೇ ತೃಪ್ತಿ ಮತ್ತು ಸಂತೋಷವನ್ನು ಕಾಣುತ್ತಿದ್ದ ಭಾರತರತ್ನ ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ 27ಜುಲೈ-2015ರಂದು ಶಿಲ್ಲಾಂಗ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಎಂ)ನಲ್ಲಿ ಉಪನ್ಯಾಸ ನೀಡುತ್ತಿದ್ದಾಗಲೇ ನಮ್ಮನ್ನೆಲ್ಲಾ ಅಗಲಿದರು. ಅವರ ಮರಣದಿಂದಾಗಿ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಅಮೂಲ್ಯ ರತ್ನವನ್ನು ಕಳೆದುಕೊಂಡಂತಾಗಿದೆ. ಉಪನ್ಯಾಸ ಮಾಡುತ್ತಲೇ ಮರಣವನ್ನಪ್ಪುವ ಮೂಲಕ ಅವರು ಬಯಸಿದ ಮರಣವನ್ನು ಕಂಡರಾದರೂ…, ನಮ್ಮನ್ನೆಲ್ಲಾ ತುಂಬಾ ಬೇಗ ಬಿಟ್ಟು ಹೋಗಿದ್ದಾರೆ. ಇವರ ನೆನಪೊಂದೇ ಶಾಶ್ವತ.. ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು ಅವರು ಕಂಡ ಭಾರತ ನಿರ್ಮಾಣವಾಗಲೇ ಬೇಕು..! ಈ ವರ್ಷ ನಮ್ಮನ್ನಗಲಿದ ಕಲಾಂರ 86ನೇ ಜಯಂತಿ ಇಂದು. ಛೇ.. ಅವರು ನಮ್ಮೊಡನೆ ಇಲ್ಲ.., ಆದ್ರೆ ಅವರ ನೆನಪು ಪ್ರತಿಯೊಬ್ಬರಲ್ಲೂ ಹಸಿರಾಗಿಯೇ ಇದೆ..! ಅಬ್ದುಲ್ ಕಲಾಂಜಿ, ಸ್ವರ್ಗದಲ್ಲಿರೋ ನಿಮಗೆ ಹುಟ್ಟು ಹಬ್ಬದ ಶುಭಾಷಯಗಳು..ನಿಮಗಾಗಿ ಕಾದಿದ್ದೇವೆ.. ತಡಮಾಡದೆ ಮತ್ತೆ ಹುಟ್ಟಿಬನ್ನಿ…..
——————————————————————————-
ಅಬ್ದುಲ್ ಕಲಾಂಜಿ ಅವರ ಪೂರ್ಣ ಹೆಸರು, ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ.
ಜನನ : ಅಕ್ಟೋಬರ್ 15,1931
ಭಾರತರತ್ನ ಪ್ರಶಸ್ತಿ : 1997
2002 ಜುಲೈ 25ರಿಂದ 2007 ಜುಲೈ 25ರವರೆಗೆ ರಾಷ್ಟ್ರಪತಿಯಾಗಿದ್ದರು
ಮರಣ: ಜುಲೈ27, 2015
——————————————————-———————–
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times