No menu items!
11.1 C
Munich
Wednesday, April 29, 2026

ಆಡುಮುಟ್ಟದ ಸೊಪ್ಪಿಲ್ಲ, ದೊಡ್ಡರಂಗೇ ಗೌಡರು ಛಾಪು ಮೂಡಿಸದ ಸಾಹಿತ್ಯ ಪ್ರಕಾರಗಳಿಲ್ಲ..!

Must read

ಜೀವನ ಮತ್ತು ಸಾಹಿತ್ಯಕ್ಕೆ ಸಂಬಂಧವಿದೆ..! ಜೀವನದ ಸಾರವೇ ಒಂದರ್ಥದಲ್ಲಿ ಸಾಹಿತ್ಯ ಆಗಬಲ್ಲದು..! ಯಾವ ಒಬ್ಬ ವ್ಯಕ್ತಿ ತನ್ನ ಬದುಕನ್ನು ಇಷ್ಟಪಡುತ್ತಾನೋ? ಯಾರು ತನ್ನ ಜೀವನವನ್ನು ಹತ್ತಿರದಿಂದ ಕಾಣುತ್ತಾನೋ..,ಕಂಡದನ್ನು ಸೊಗಸಾಗಿ, ಅರ್ಥಗರ್ಭಿತವಾಗಿ, ಸೃಜನಶೀಲವಾಗಿ ಬರೆಯುತ್ತಾರೋ ಅವರು ನಿಜಕ್ಕೂ ದೊಡ್ಡ ಸಾಹಿತಿ ಆಗುತ್ತಾರೆ..! ಮಲೆನಾಡ ಕವಿ ಕುವೆಂಪು ಮಲೆನಾಡ ಜೀವನದಲ್ಲಿ ತಾ ಕಂಡದನ್ನು, ಅನುಭವಿಸಿದ್ದನ್ನು ಬರೆದು ಸಾಹಿತ್ಯ ಲೋಕದ ದಿಗ್ಗಜರಾಗಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹದು..! ಅಂತೆಯೇ, ಇವತ್ತು ನಮಗೆಲ್ಲಾ ದಾರಿದೀಪವಾಗಿರುವ ಕನ್ನಡದ ವಿಶಿಷ್ಟ ಸಾಹಿತಿ, ಬರಹಗಾರ ಡಾ. ದೊಡ್ಡರಂಗೇಗೌಡರು..!
ದೊಡ್ಡರಂಗೇಗೌಡರು ತಮ್ಮ ಸಾಹಿತ್ಯಕ್ಕೆ ನಿರ್ದಿಷ್ಟವಾದ ಚೌಕಟ್ಟನ್ನು ಹಾಕಿಕೊಂಡವರಲ್ಲ.. ಎಲ್ಲಾ ರೀತಿಯ ಸಾಹಿತ್ಯದಲ್ಲಿಯೂ ತನ್ನನ್ನು ತಾನು ಗುರುತಿಸಿಕೊಂಡಿರುವ ಹಿರಿಯರು.
ಭಾವಗೀತೆ, ಕವನ, ಪ್ರವಾಸ ಕಥನಗಳಲ್ಲದೇ 600ಕ್ಕೂ ಹೆಚ್ಚು ಚಿತ್ರಗೀತೆಗಳನ್ನೂ ಬರೆದು ಕನ್ನಡಿಗರ ಮನಸ್ಸಿನಲ್ಲಿ, ಹೃದಯದಲ್ಲಿ ಭಧ್ರಕೋಟೆಯನ್ನು ಕಟ್ಟಿಕೊಂಡಿರುವ ಅಪರೂಪದ ಸಹೃದಯವಂತ, ನಗುಮೊಗದ ಸಾಹಿತಿ..! ಈಗಲೂ ಚಿತ್ರಗೀತೆರಚನೆಯಲ್ಲಿ ತೊಡಗಿಸಿಕೊಂಡಿದ್ದಾರಲ್ಲದೇ 10ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆಯನ್ನೂ ಬರೆದಿದ್ದರೆ..!
ಇವರು ಬರೆದಿದುವ ಆಲೆಮನೆ, ಪರಸಂಗದ ಗೆಂಡೆತಿಮ್ಮ, ಜನುಮದ ಜೋಡಿ, ಅರುಣರಾಗ, ಅಶ್ವಮೇದ ಸಿನಿಮಾಗಳ ಹಾಡುಗಳನ್ನು ಮರೆಯಲಾದೀತೆ..?! ಇಂದಿಗೂ ಅವುಗಳನ್ನು ಗುನುಗುತ್ತಲೇ ಇರುತ್ತೇವೆ..!
`ತೇರಾನೇರಿ ಅಂಬರದಾಗೆ ನೇಸರ ನಗುತಾನೆ, ಮರಗಿಡ ತೂಗ್ಯಾವೇ ಹಕ್ಕಿ ಹಾಡ್ಯಾವೇ..’ ಗೀತೆಯನ್ನು ನೆನಪಿದೆಯಲ್ಲಾ..?! ಇದು ಇದೇ ದೊಡ್ಡೇರಂಗೇ ಗೌಡರ ರಚನೆ.
ಅಶ್ವಮೇದ ಸಿನಿಮಾದಲ್ಲಿನ “ಹೃದಯ ಸಮುದ್ರ ಕಲಕಿ..ಉಕ್ಕಿದೆ ದ್ವೇಷದ ಬೆಂಕಿ, ರೋಷಾಗ್ನಿ ಜ್ವಾಲೆ ಉರಿದುರಿದು..” ಈ ಹಾಡನ್ನು ಗುನುಗದಿರುವವರಿಲ್ಲ, ಅಂದಿಗೂ ಇಂದಿಗೂ, ಎಂದೆಂದಿಗೂ ಈ ಹಾಡು ಜನಪ್ರಿಯ..! ಈ ಹಾಡನ್ನು ಡಾ. ದೊಡ್ಡರಂಗೇಗೌಡರು ಕೊಟ್ಟ ಉಡುಗೊರೆ..! ದೊಡ್ಡರಂಗೇಗೌಡರು ಎಂಥಾ ಅದ್ಭುತ ಗೀತರಚನೆಗಾರರೆಂದು ತಿಳಿಯಲು ಇವೆರಡು ಹಾಡಗಳೇ ಸಾಕಲ್ಲವೇ..!?
ಸರಳತೆ, ಆಡುಭಾಷೆಲ್ಲಿಯೇ ಬರಹಗಳನ್ನು ಬರೆಯುವ ಮೂಲಕ ಕನ್ನಡಿಗರ ಮನದಲ್ಲಿ ನೆಲೆಸಿದ್ದಾರೆ..! ಇವರ ಮೊದಲ ಕವನ ಸಂಕಲನ ಜಗಲಿ ಹತ್ತಿ ಇಳಿದು ಅರವತ್ತರ ದಶಕದಲ್ಲಿ ಪ್ರಕಟವಾಯಿತು. ಎರಡನೇ ಕವನ ಸಂಕಲನ ಕಣ್ಣು ನಾಲಿಗೆ ಕಡಲು ನವ್ಯ ಸಾಹಿತ್ಯ ಪರಂಪರೆಗೆ ಹೊಸ ಮೆರುಗನ್ನು ತಂದು ಕೊಟ್ಟದಕ್ಕಾಗಿ ಅರ್ಹವಾಗಿಯೇ ರಾಜ್ಯ ಸಾಹಿತ್ಯ ಅಕಾಡಮೆಯಿಂದ ಪುರಸ್ಕರಿಸಲ್ಪಟ್ಟಿದೆ..!
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ಗೌಡರು ಇವತ್ತು ವಿಶ್ವಮಟ್ಟದಲ್ಲಿ ಅಪಾರ ಅಭಿಮಾನಿಗಳ ಪ್ರೀತಿಪಾತ್ರರಾಗಿದ್ದಾರೆ..!
ಒಬ್ಬ ಕವಿಯಾಗಿ, ಒಬ್ಬ ಲೇಖಕನಾಗಿ, ಅಂಕಣಗಾರನಾಗಿ, ವಿಮರ್ಶಕರಾಗಿ, ಸಿನಿಮಾಗೀತಾ ರಚನಾಗಾರರಾಗಿಯೂ ತನ್ನದೇ ಆದ ಛಾಪನ್ನು ಮೂಡಿಸಿದ ವ್ಯಕ್ತಿ ದೊಡ್ಡರಂಗೇಗೌಡರು..!
ಅದು, ಕವನವೇ ಆಗಿರಲಿ, ಸಾಹಿತ್ಯವೇ ಆಗಿರಲಿ, ವಿಮರ್ಶೆಯೇ ಆಗಿರಲಿ, ಇನ್ಯಾವುದೇ ಬರಹಳಾಗಿರಲಿ, ದೊಡ್ಡರಂಗೇಗೌಡರು ಬರೆಯುವುದು ಜನ ಸಾಮನ್ಯರ ಭಾಷೆಯಲ್ಲಿ..! ಜನ ಸಾಮಾನ್ಯರಿಗೆ ಅರ್ಥವಾಗದೇ ಕನ್ನಡ ಪಂಡಿತರಿಗೆ ಅರ್ಥವಾದರೆಷ್ಟು ಬಿಟ್ಟರೆಷ್ಟಲ್ಲವೇ..?! ಒಬ್ಬ ಬರಹಗಾರನ ಶ್ರೇಷ್ಠತೆ ಇರುವುದು ತನ್ನ ಬರಹದ ಮೂಲಕ ಜನರ ಹೃದಯದಲ್ಲಿ ಸ್ಥಾನ ಪಡೆಯುವಲ್ಲಿ..! ಆ ಶ್ರೇಷ್ಠತೆಯನ್ನು ದೊಡ್ಡರಂಗೇಗೌಡರು ಸಂಪಾದಿಸಿದ್ದಾರೆ..! ತುಂಬಿದ ಕೊಡ ತುಳುಕುವುದಿಲ್ಲ ಅನ್ನೋಹಾಗೆ ತುಂಬಾ ಎತ್ತರಕ್ಕೆ ಬೆಳೆದಿದ್ದರೂ ಸರಳ ನಡೆ ನುಡಿ ಇವರ ಶ್ರೀಮಂತಿಕೆ..! ದೊಡ್ಡರಂಗೇಗೌಡರ ಬಗ್ಗೆ ಬರೆಯುತ್ತಾ ಹೋದರೆ, ಅವರು ಬರೆದಿರುವ ಅಷ್ಟೂ ಪುಸ್ತಕಕ್ಕಿಂತಲೂ ಹೆಚ್ಚಿನ ಗಾತ್ರದ ಪುಸ್ತಕವೊಂದು ರಚನೆ ಆಗುತ್ತದೆಯೇನೋ..! ಒಬ್ಬ ನಿಜವಾದ ಕೃಷಿಕನಿಗೆ ಕೃಷಿಯೇ ಉಸಿರು,ಯಾವ ಬೆಳೆಯನ್ನೇ ಆಗಲಿ, ಅತ್ಯಂತ ಪ್ರೀತಿಯಿಂದ ಬೆಳೆಯುತ್ತಾನೆ, ಕೃಷಿ ಮಾಡುತ್ತಾನೆ..! ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ದೊಡ್ಡರಂಗೇ ಗೌಡರು ಆಸಕ್ತಿ ತೋರದ ಸಾಹಿತ್ಯ ಪ್ರಕಾರಗಳಿಲ್ಲ..! ಎಲ್ಲಾ ನಾನಾ ಬಗೆಯ ಸಾಹಿತ್ಯದಲ್ಲಿ ಛಾಪು ಮೂಡಿಸಿದ ಅಪರಂಜಿ..! ಅಂದಹಾಗೆ ಇವತ್ತು ಈ ಮೇರುವ್ಯಕ್ತಿಯ ಹುಟ್ಟು ಹಬ್ಬ..! ಹುಟ್ಟು ಹಬ್ಬದ ಶುಭಾಶಯಗಳು ದೊಡ್ಡರಂಗೇಗೌಡರೇ..! ಯುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಾ ನೂರುಕಾಲ ಚೆನ್ನಾಗಿ ಬಾಳಿ…! ನಿಮ್ಮ ಆಶೀರ್ವಾದ ಬೇಡುತ್ತಾ..
                          ಶುಭ ಕೋರುವವರು

ರಘು ಭಟ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಟೀಮ್..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article