ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-9
ಮನ ಮೆಚ್ಚಿದ ಮಡದಿ
‘ತುಟಿಯ ಮೆಲೆ ತುಂಟ ಕಿರುನಗೆ, ಕೆನ್ನೆ ತುಂಬಾ ಕೆಂಡಸಂಪಿಗೆ…” ಹೀಗೆ ಹೆಣ್ಣನ್ನ ಹೊಗಳುವ ಆ ಗೀತರಚನೆಕಾರನ ಪರಿ ಇಂದಿಗೂ ಎಲ್ಲರಿಗೂ ಅಚ್ಚರಿ. ಪ್ರೀತಿ ಪ್ರೇಮದ ಸಾವಿರಾರು ಬಗೆಯ ತಲ್ಲಣಗಳನ್ನ ಪದಗಳಲ್ಲಿ ವರ್ಣಿಸುವ ರೀತಿ ಅವ್ರ ಹಾಡುಗಳಿಗೆ ಸಾವಿರ ಪಟ್ಟು ಜೀವ ತುಂಬುತಿತ್ತು.
ಹೀಗೆ `ಮನ ಮೆಚ್ಚಿದ ಮಡದಿ’ ಸಿನ್ಮಾದ ಈ ಹಾಡನ್ನ ಕೂಡ ಎಲ್ಲರಿಗೂ ಮನಸಲ್ಲಿ ಉಳಿಯುವಂತೆ ಬರೆದ ಒಬ್ಬ ಅದ್ಭುತ ಸಾಹಿತ್ಯ ರಚನೆಕಾರ ಕು.ರಾ ಸೀತಾರಾಮಶಾಸ್ತ್ರಿ. ತಮ್ಮ ಕಲ್ಪನೆಯ ನಾಯಕಿಯನ್ನೇ ಹೊಗಳಿ ಬರೀತಿದ್ದ ಶಾಸ್ತ್ರಿಗಳು ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ ಅಂತ ಬರೆದ್ರು. ಜೊತೆಗೆ, ಹೊಗಳಿದ್ದು ಜಾಸ್ತಿಯಾಯ್ತೇನೋ ಎಂಬಂತೆ, ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ ಅನ್ನೋ ಬಿಂಕ ಬಿನ್ನಾಣದ ಸಾಲುಗಳನ್ನ ಪೋಣಿಸಿದ್ರು. ಮನಮೆಚ್ಚಿನ ಹುಡುಗಿ ಸಿನ್ಮಾದ ಶೂಟಿಂಗ್ ಟೈಮಲ್ಲೇ ಡಾ! ರಾಜ್ಕುಮಾರ್ ಅವ್ರಿಗೆ ಗೊತ್ತಾಗಿದ್ದು, ಸೀತಾರಾಮಶಾಸ್ತ್ರಿಗಳು ಕವಿತೆ ಪದ್ಯಗಳನ್ನ ಬರೀತಾರೆ ಅಂತ.
ಹೀಗಾಗಿ ಬಿಡುವಿದೆ ನಿಮ್ಮ ಪದ್ಯಗಳನ್ನ ಓದಿಕೊಡ್ತೀನಿ ಅಂತ ಅಣ್ಣಾವ್ರು ಕೇಳಿ ಪುಸ್ತಕ ಪಡೆದ್ರಂತೆ. ಇಂತ ಸಾಕಷ್ಟು ಪದ್ಯಗಳಲ್ಲಿ ಅಣ್ಣಾವ್ರಿಗೆ ತುಂಬಾನೆ ಇಷ್ಟವಾದ ಪದ್ಯ ಇದೇ ತುಟಿಯ ಕಿರುನಗೆಯ ಸಾಲುಗಳು. ಈ ಪದ್ಯವನ್ನ ಸಿನ್ಮಾದಲ್ಲಿ ಬಳಸಿಕೊಳ್ಳೋಕೆ ಕೇಳಿದ್ರಂತೆ. ಇದಕ್ಕೆ ಒಪ್ಪದ ಶಾಸ್ತ್ರಿಗಳು ಚಿತ್ರದ ಸನ್ನಿವೇಶಕ್ಕೆ ದಕ್ಕೆ ಬರುತ್ತೆ ಅಂದ್ರಂತೆ. ಅದಕ್ಕೆ ಈ ಹಾಡನ್ನ ಕನಸಿನ ದೃಶ್ಯದಲ್ಲಿ ಬಳಸೋಣ ಎಂದು ಕೊನೆಗೂ ಒಪ್ಪಿಸಿದ್ರು ಡಾ! ರಾಜ್. ನಂತ್ರ ಈ ಪದ್ಯಕ್ಕೆ ವಿಜಯ್ ಬಾಸ್ಕರ್ ಅದ್ಬುತವಾದ ಟ್ಯೂನ್ ಹಾಕಿದ್ರು, ಮನ ಮೆಚ್ಚಿದ ಮಡದಿ ಚಿತ್ರದಲ್ಲಿ ಈ ಹಾಡು ಯೂಸ್ ಆಗಿದ್ದು ಹೀಗೆ.