ನೆಹರು ಬೆಳೆಸಿದರು.. ಇಂದಿರೆ ಉಳಿಸಿದರು.. ರಾಹುಲ್ ಮುಗಿಸಿದರು..! ಇದು ಕಾಂಗ್ರೆಸ್‍ನ ಇವತ್ತಿನ ಪರಿಸ್ಥಿತಿ..!

Date:

 

raaaನಿಧಿ ಶೋಧನೆಯ ಅಗತ್ಯವೇ ಇರಲಿಲ್ಲ, ಕೈಯ್ಯಲ್ಲೇ ಕಾಂಗ್ರೆಸ್ ಎಂಬ ಬೆಲೆ ಕಟ್ಟಲಾಗದ ನಿಧಿಯಿತ್ತು. ಆದರೂ ಯುವರಾಜ ಅದನ್ನ ಸಮರ್ಥವಾಗಿ ನಿಭಾಯಿಸುವುದರಲ್ಲಿ ಸೋತುಹೋದರು. ಕಾಂಗ್ರೆಸ್ ಧೂಳೀಪಟವಾಗಿದೆ ಎನ್ನುವುದೇ ವಾಸ್ತವ. ಒಂದೇ ಕುಟುಂಬ, ಮೂವರೂ ಪ್ರೈಂ ಮಿನಿಸ್ಟರ್, ಒಬ್ಬ ಸಮರ್ಥ ನಾಯಕಿ. ಅವರ ಕುಟುಂಬದ ಕೂಸಿನ ಬಗ್ಗೆ ಸಹಜವಾಗಿಯೇ ನಿರೀಕ್ಷೆಗಳಿದ್ದವು. ಕಾಂಗ್ರೆಸ್ ಯಾವತ್ತು ಕುಟುಂಬ ರಾಜಕಾರಣದ ಆರೋಪಕ್ಕೆ ತುತ್ತಾಗಿರಲಿಲ್ಲ. ಏಕೆಂದರೇ ನೆಹರೂ ರಕ್ತ ಅವರ ಕುಟುಂಬದ ನರನಾಡಿಯಲ್ಲೂ ಮಿಳಿತವಾಗಿತ್ತು. ಕಾಂಗ್ರೆಸ್‍ನ ಮಿಕ್ಕ ನಾಯಕರು ಕೂಡ ನೆಹರು ಕುಟುಂಬದ ನಾಯಕತ್ವವನ್ನು ಒಪ್ಪಿಕೊಂಡಿತ್ತು, ಅಥವಾ ಒಗ್ಗಿಕೊಂಡಿತ್ತು. ಯಾವುದನ್ನೂ ರಾಹುಲ್ ಬಯಸಲಿಲ್ಲ, ಎಲ್ಲವೂ ಅದಾಗಿಯೇ ಒದಗಿಬಂದಿತ್ತು. ರಾಜಕಾರಣಕ್ಕೆ ತಪಸ್ಸು ಬೇಕೆನ್ನುತ್ತಾರೆ, ನಸೀಬಿದ್ದವಿನಿಗೆ ರಾಜಕಾರಣ ಒಲಿಯುತ್ತದೆ. ಪಥ್ಯವಾಗುತ್ತದೆ. ಅವರು ಜನನಾಯಕರೆನಿಸಿಕೊಳ್ಳುತ್ತಾರೆ. ಒಳ್ಳೆ ಆಡಳಿತ ಎನ್ನುವುದಕ್ಕಾಗದಿದ್ದರೂ.. ಅಟ್ಲಿಸ್ಟ್ ಆಡಳಿತ ನಡೆಸುವ ಚಾಕಾಚಕ್ಯತೆ ಅವರಲ್ಲಿ ಮೇಳೈಸಿರುತ್ತದೆ. ಆದರೆ ಇದ್ಯಾವ ಕ್ವಾಲಿಟಿಯೂ ರಾಹುಲ್‍ಗಿರಲಿಲ್ಲ.

ಮುತ್ತಾತನ ಕೀರ್ತಿ, ಅಜ್ಜಿಯ ದಿಟ್ಟ ಆಡಳಿತ, ಅಪ್ಪನ ಖ್ಯಾತಿ, ಅಮ್ಮನ ಶ್ರೀ ರಕ್ಷೆ.. ಇವಿಷ್ಟು ಮಾತ್ರ ಅವರ ಬೆನ್ನಿಗಿತ್ತು. ತೋಳು ಮಡಚಿ ಜನನಾಯಕರಾಗಲು ಹೊರಟರು. ಕಾಂಗ್ರೆಸ್ ಅನ್ನು ಇನ್ನಿಲ್ಲದ ಎತ್ತರಕ್ಕೆ ತೆಗೆದುಕೊಂಡು ಹೋಗುವಂತೆ ವಿಜೃಂಭಿಸಿದರು. ಮೈಕ್ ಸಿಕ್ಕಲೆಲ್ಲಾ ಯರ್ರಾಬಿರ್ರಿ ಭಾಷಣಗಳನ್ನು ಹರಿಯಬಿಟ್ಟರು. ಕಡೆಕಡೆಗೆ ಕಾಂಗ್ರೆಸ್‍ನ ಹಿರಿಯ ನಾಯಕರ ಬಗ್ಗೆಯೇ ಟೀಕೆ ಮಾಡತೊಡಗಿದರು. ಎಲ್ಲವೂ ಬಾಲೀಶತನದ ಪರಮಾವಧಿಯಾಗಿತ್ತು.
ಒಂದಿಷ್ಟು ಯುವ ಪೀಳಿಗೆಯನ್ನು ರಾಹುಲ್ ಸೆಳೆದಿದ್ದು ನಿಜ. ಆದರೆ ಅದಕ್ಕೆ ಕಾರಣ ಅವರ ಪ್ರಬುದ್ಧ ರಾಜಕಾರಣವೆಂದರೇ ತಮಾಷೆಯಾಗುತ್ತದೆ. ರಾಹುಲ್‍ನನ್ನು ಯುವಕರು ಅಥವಾ ಯುವತಿಯರು ಇಷ್ಟಪಡುವುದಕ್ಕೆ ಬಲವಾದ ಕಾರಣ, ಅವರು ಯಾವುದೇ ಬಾಲಿವುಡ್ ಹೀರೋಗಿಂತ ಕಡಿಮೆಯಿರಲಿಲ್ಲ. ಅವರಂತೆ ಅವರನ್ನು ಪ್ರೀತಿಸುವವರ ಕಾರಣವೂ ಬಾಲೀಶವಾಗಿತ್ತು.

ಕಾಂಗ್ರೆಸ್ ರಾಹುಲ್‍ಗೆ ಏನೆಲ್ಲಾ ಕೊಟ್ಟಿಲ್ಲ ಹೇಳಿ, ಆರಂಭದಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್‍ನ ನಾಯಕತ್ವ ವಹಿಸಿತು. ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಸೆಕ್ರೆಟರಿ ಮಾಡಿತು. ಅಮೇಥಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ನಿಲ್ಲಿಸಿ ಪಾರ್ಲಿಮೆಂಟ್ ಸದಸ್ಯತ್ವ ನೀಡಿತು. ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಸೆಕೆಂಡ್ ರ್ಯಾಂಕ್ ಕೊಟ್ಟು ಪ್ರೋತ್ಸಾಹಿಸಿತು. ಆದರೂ ರಾಹುಲ್ ರಾಜಕೀಯದಲ್ಲಿ ಪ್ರಬುಧ್ದರಾಗಲಿಲ್ಲ. ಎಲ್ಲಾ ಗೊತ್ತಿದ್ದು ಅವರನ್ನು ಲೋಕಸಭೆ ಚುನಾವಣೆಯಲ್ಲಿ ಪಿ ಎಂ ಕ್ಯಾಂಡಿಡೆಟ್ ಅಂತ ಘೋಷಿಸಿ ಅಖಾಡಕ್ಕಿಳಿಸಿತ್ತು. ಚುನಾವಣಾ ಪ್ರಚಾರದ ವೇಳೆ.. ಮೋದಿ ಹಾಗೂ ರಾಹುಲ್ ಗಾಂಧಿಯ ಭಾಷಣಗಳು ಕೂಡ ಹೈಲೇಟ್ ಆಗುತ್ತಿತ್ತು. ಮೋದಿ ಅಭಿವೃದ್ದಿ ಮಂತ್ರ ಘೋಷಿಸುತ್ತಿದ್ದರೇ, ರಾಹುಲ್ ಮೋದಿಯನ್ನು ಕೋಮುವಾದಿ ಎಂದು ಬೈಯುತ್ತಲೇ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಮೋದಿ, `ರಾಹುಲ್ ಬಚ್ಚಾ.. ಗಲತ್ ಬೋಲ್ತಾ ಹೈ, ಖೇಲ್‍ನೇ ಚೋಡ್‍ದೋನಾ..’ ಅಂತ ಟಾಂಗು ಕೊಟ್ಟು ಸುಮ್ಮನಾಗುತ್ತಿದ್ದರು.

ಮುಂದೆ ಕಾಂಗ್ರೆಸ್ ಇನ್ನಿಲ್ಲದಂತೆ ನೆಲಕಚ್ಚಿಹೋಯ್ತು. ಯುವರಾಜ ಮುಖಭಂಗ ಅನುಭವಿಸಿದರು. ಅವತ್ತಿನಿಂದಲೇ ಯುವರಾಜ ನಾಪತ್ತೆಯಾದರು. ಕಾಂಗ್ರೆಸ್‍ನ ಯಾವುದೇ ಸಭೆ ಸಮಾರಂಭದಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅಲ್ಲೆಲ್ಲೋ ಕೆಲವೊಮ್ಮೆ ಹೈಕಮಾಂಡ್ ಎಂದೇ ಖ್ಯಾತಿಯಾಗಿದ್ದ ಸೋನಿಯಾಗಾಂಧಿ ಮುಖ ದರ್ಶನವಾಗುತ್ತಿತ್ತಷ್ಟೇ..! ಹತ್ತಿರತ್ತಿರ ಅರವತ್ತು ವರ್ಷಗಳ ಕಾಲ ಇಡೀ ದೇಶವನ್ನು ಆಳಿದ್ದ ಬಲಿಷ್ಠ ಕಾಂಗ್ರೆಸ್ ಕೇವಲ ಒಂದೇ ಚುನಾವಣೆಯ ಸೋಲಿಗೆ `ಕೈ’ ಮುರಿದುಕೊಂಡಿತಾ..? ಮತ್ಯಾವತ್ತೂ ಚೇತರಿಸಿಕೊಳ್ಳುವುದಿಲ್ಲ ಅಂತ ಆಗಲೇ ನಿರ್ಧಾರಕ್ಕೆ ಬಂದುಬಿಟ್ಟಿದ್ಯಾ..? ಕಷ್ಟಪಟ್ಟು ವಿರೋಧ ಪಕ್ಷದ ಸ್ಥಾನದಲ್ಲಿ ಕುಂತಿರುವ ಆ ಪಕ್ಷಕ್ಕೆ ಟೀಕಾ-ಟಿಪ್ಪಣೆ ಮಾಡುವಷ್ಟು ಸಾಮಥ್ರ್ಯ ಇಲ್ಲವೆಂದ್ರೇ ನಿಜಕ್ಕೂ ಶೇಮ್. ಅದಕ್ಕೆ ಪೂರಕವಾದ ಉತ್ತರಗಳು ಸಿಗುತ್ತಿವೆ. ಕಾಂಗ್ರೆಸ್ ಸೋಲುಗಳಿಗೆ, ಸೋತ ನಂತರದ ಬೆಳವಣಿಗೆಗೆ ಕಾರಣ ರಾಹುಲ್ ಗಾಂಧಿ. ಒಂದು ದೊಡ್ಡ ಪಕ್ಷದ ಸರ್ವನಾಶಕ್ಕೆ ಒಬ್ಬ ಅಸಮರ್ಥ, ಅನುಭವಿ ನಾಯಕ ಸಾಕು ಎನ್ನುವುದಕ್ಕೆ, ರಾಹುಲ್ ತಾಜಾ ನಿದರ್ಶನ.

ರಾಜೀವ್ ಗಾಂಧಿ ಜಮಾನ ಮುಗಿದ ಎಷ್ಟೋ ವರ್ಷಗಳ ನಂತರ ಕಾಂಗ್ರೆಸ್ ಚುಕ್ಕಾಣಿ ಹಿಡಿದ ಸೋನಿಯಾ ಗಾಂದಿ,ü ಕಾಂಗ್ರೆಸ್‍ಗೆ ಮರುಜೀವ ನೀಡಿದರು. ಸತತ ಎರಡು ಬಾರಿ `ಕೈ’ಯನ್ನು ಎತ್ತಿ ಹಿಡಿದಿದ್ದರು. ಆದರೆ ತಾನು ವಿಶ್ರಾಂತಿ ಬಯಸಿ, ತನ್ನ ಸುಪುತ್ರನನ್ನು ಅಖಾಢಕ್ಕೆ ಬಿಟ್ಟರು ನೋಡಿ, ಎಡವಟ್ಟಾಗಿದ್ದೇ ಇಲ್ಲಿ. ಹೆತ್ತವರಿಗೆ ಹೆಗ್ಗಣ ಮುದ್ದು. ಆದರೆ ದಶಕಗಳ ಇತಿಹಾಸವಿರುವ ಕಾಂಗ್ರೆಸ್ ಮಟ್ಟಿಗೆ ಈ ಲಾಲಿ ಸುವ್ವಾಲಿಗಳ ಅಗತ್ಯವಿರಲಿಲ್ಲ. ಸೋನಿಯಾ ಗಾಂಧಿ ಮಗನನ್ನು ಪ್ರಧಾನಿ ಮಾಡಲು ಹೋಗಿ `ಕೈ’ ಸುಟ್ಟುಕೊಂಡಿದ್ದಾರೆ. ಪ್ರಣವ್ ಮುಖರ್ಜಿ, ಪಿ ಚಿದಂಬರಂ, ಆಂಟನಿ ಅವರಂಥ ಬಲಾಢ್ಯ ನಾಯಕರನ್ನು ಬದಿಗಿಟ್ಟು, ರಾಹುಲ್‍ನನ್ನು ಪಿ ಎಂ ಅಭ್ಯರ್ಥಿ ಅಂತ ಘೋಷಿಸಿ ಮುಂದೆ ಬಿಟ್ಟರೋ, ಅನನುಭವಿ ಯುವರಾಜ ತನ್ನ ಬಾಲೀಶತನಗಳಿಂದಲೇ ಕಾಂಗ್ರೆಸ್ ಅವನತಿಗೆ ಕಾರಣರಾದರು. ಕಾರಣವಾಗುತ್ತಿದ್ದಾರೆ..! ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿ, ಅಟ್ಲಿಸ್ಟ್ ವಿರೋಧ ಪಕ್ಷದ ಸ್ಥಾನಕ್ಕೂ ಹೆಣಗಾಡಿದಾಗ.. ರಾಹುಲ್ ಎಂಬ ಮಗು ಪೇಚಾಡಿದ್ದನ್ನು ನೋಡಬೇಕಿತ್ತು. ಚುನಾವಣ ಪೂರ್ವ, ಚುನಾವಣಾ ನಂತರವೂ ಅವರ ಬಾಲೀಶತನ ಸತ್ತಿರಲಿಲ್ಲ. ಏಕೆಂದರೇ ಕಾಂಗ್ರೆಸ್ ಸೋತಿರುವುದು ಇದೇನು ಮೊದಲ ಸಲವಲ್ಲ. ಸಮರ್ಥ ಆಡಳಿತ ನಡೆಸಿದ ನಂತರವೂ ಜನತಾ ಪರಿವಾರದ ಹೊಡೆತಕ್ಕೆ ತರಗರಲೆಯಾಗಿ ಹೋಗಿತ್ತು. ಆದರೆ ಒಂದೇ ಟರ್ಮ್‍ನಲ್ಲಿ ಆ ಸೋಲನ್ನು ನಿವಾಳಿಸಿ ದಿಗ್ವಿಜಯಗಳಿಸಿತ್ತು. ಅವತ್ತು ಅಲ್ಲಿದ್ದವರು `ಪವರ್‍ಫುಲ್’ ಇಂದಿರಾ ಗಾಂಧಿ. ಇವತ್ತು ಇಲ್ಲಿರೋದು `ಪವರ್‍ಲೆಸ್’ ರಾಹುಲ್ ಗಾಂಧಿ.

ಮೋದಿ ಅಭಿವೃದ್ದಿ ಮಂತ್ರ ಘೋಷಣೆಯ ಉದ್ದಕ್ಕೂ ಕಾಂಗ್ರೆಸ್ ಭಾರತವನ್ನು ಅರವತ್ತು ವರ್ಷಗಳಿಂದ ತಟಸ್ಥಗೊಳಿಸಿದೆ, ಯಾವುದೇ ಅಭಿವೃದ್ದಿಯಾಗಿಲ್ಲ, ನಾನು ಐದೇ ವರ್ಷದಲ್ಲಿ ಏನೆಲ್ಲಾ ಮಾಡ್ತೀನಿ ನೋಡಿ ಎನ್ನುತ್ತಲೇ ಅಧಿಕಾರಕ್ಕೆ ಬಂದರು. ಯೋಜನೆಗಳನ್ನು ಜಾರಿಗೆ ತಂದರು. ಅದನ್ನು ಹೇಗೆ ಪ್ರಚಾರ ಮಾಡಬೇಕು, ಜನರಿಗೆ ಹೇಗೆ ಮುಟ್ಟಿಸಬೇಕು, ಜನರ ಮನಸಿನಲ್ಲಿ ಹೇಗೆ ವೀರಾಜಮಾನರಾಗಬೇಕು ಎಂಬ ತಂತ್ರಗಾರಿಕೆ ಅವರಿಗೆ ಕರಗತವಾಗಿತ್ತು. ಆದರೆ ಮನಮೋಹನ್ ಸಿಂಗ್ ಮಾತೇ ಆಡಲಿಲ್ಲ. ಪ್ರಚಾರ ಬಯಸಲಿಲ್ಲ. ಆದರೆ ಕೆಲಸ ಮಾಡಿದರು. ಆರ್ಥಿಕ ಸಂಕಷ್ಟದಿಂದ ಬಳಲಬೇಕಾಗಿದ್ದ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದರೆ ಇವ್ಯಾವುದು ಜನರಿಗೆ ಅರ್ಥವಾಗಲಿಲ್ಲ. ಏಕೆಂದರೇ ಮನ್‍ಮೋಹನ್ ಸಿಂಗ್ ಜನರನ್ನು ಮುಟ್ಟಲಿಲ್ಲ. ಏಕೆಂದರೇ ಕಾಂಗ್ರೆಸ್‍ಗೆ ಅಂಥ ಪ್ರಚಾರ ಬೇಕಿರಲಿಲ್ಲ. ಯಥಾಪ್ರಕಾರ ರಾಜಗಾಂಭೀರ್ಯದಲ್ಲೇ ನಡೆಯಿತು. ಅದು ಕಾಂಗ್ರೆಸ್‍ನ ಸಿದ್ಧಾಂತವೂ ಹೌದು. ನಡೆದು ಬಂದ ರೀತಿಯೂ ಹೌದು. ಇನ್ನು ಆ ಪಕ್ಷದ ಅನುಭವದ ಬಗ್ಗೆ ಮಾತೇ ಆಡುವಂತಿಲ್ಲ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಮದರ್ ಸೆಂಟಿಮೆಂಟ್‍ಗೆ ತಕರಾರು ಮಾಡದೇ ಸುಮ್ಮನಾಯಿತು. ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ರಾಹುಲ್‍ಗೆ ಸಡನ್ನಾಗಿ ವಲ್ರ್ಡ್‍ಕಪ್ ಆಡಲು ಅವಕಾಶ ಕೊಟ್ಟಿತು. ಅವರು ಮೊದಲ ಎಸೆತಕ್ಕೆ ಇಡೀ ತಂಡವನ್ನು ಔಟ್ ಮಾಡಿದ್ದರು. ಈಗಲೂ ದೊಡ್ಡ ಇನ್ನಿಂಗ್ಸ್ ಕಟ್ಟುವ ಸೂಚನೆಯೇ ಸಿಗುತ್ತಿಲ್ಲ.

ಯಾವುದೇ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಸೋಲಿನ ಪರಾಮರ್ಶೆ ಮಾಡುತ್ತದೆ. ಆದ ತಪ್ಪುಗಳನ್ನು ಸರಿಪಡಿಸಿಕೊಂಡು.. ಆಡಳಿತ ಪಕ್ಷದ ಕಿವಿ ಹಿಂಡುವ ಕೆಲಸ ಮಾಡುತ್ತದೆ. ವಿರೋಧ ಪಕ್ಷವಾಗಿ ಅವಕಾಶ ಸಿಕ್ಕಾಗೆಲ್ಲಾ.. ಆಡಳಿತ ಪಕ್ಷದ ಮೇಲೆ ಮುಗಿಬಿದ್ದು ಜನರ ಮನಸ್ಸಿನಲ್ಲಿ ಸ್ಥಾಪಿತವಾಗಲು ಪ್ರಯತ್ನಿಸುತ್ತದೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ, ಅಧಿಕಾರಕ್ಕೇರುವ ಶತಃಪ್ರಯತ್ನಗಳನ್ನು ಮಾಡುತ್ತದೆ. ಆದರೆ ಕಾಂಗ್ರೆಸ್‍ನಲ್ಲಿ ಇವ್ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೊಳು ಮಡಚಿ, ಯಕಃಶ್ಚಿತ್ ಬಾಲೀಶವಾಗಿಯಾದರೂ ಅಬ್ಬರಿಸುತ್ತಿದ್ದ ರಾಹುಲ್ ಗಾಂಧಿಯ ಮಾತಿಗೆ ಕಿಮ್ಮತ್ತಿಲ್ಲ. ಸೋನಿಯಾ ಗಾಂಧಿ ಅಲ್ಲೊಮ್ಮೆ ಇಲ್ಲೊಮ್ಮೆ ಮಾತನಾಡಿದರೇ ಹೆಚ್ಚು.

ಕಾಂಗ್ರೆಸ್; ಭಾರತದ ಅತ್ಯಂತ ಹಳೆಯ ಹಾಗೂ ಅತಿದೊಡ್ಡ ಪಕ್ಷ. ಬ್ರಿಟೀಷರ ವಿರುದ್ಧ ಸಿಡಿದೆದ್ದ ಪಕ್ಷ. ಸ್ವಾತಂತ್ರ್ಯ ನಂತರ ಭಾರತದಲ್ಲಿ ಅತೀ ಹೆಚ್ಚು ಕಾಲ ಆಡಳಿತ ನಡೆಸಿರುವುದು ಕೂಡ ಕಾಂಗ್ರೆಸ್. ಭಾರತ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸುಶಿಕ್ಷಿತ ಭಾರತೀಯರಿಗೆ ಸರ್ಕಾರದಲ್ಲಿ ಹೆಚ್ಚಿನ ಅವಕಾಶ ಸೃಷ್ಠಿಸುವ ಉದ್ದೇಶದೊಂದಿಗೆ 1885ರಲ್ಲಿ ಸ್ಥಾಪಿಸಲಾಯಿತು. ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷ ಬ್ರಿಟೀಷ್ ವಿರೋಧಿಯಾಗಿರಲಿಲ್ಲ. ಆನಂತರದ ದಿನಗಳಲ್ಲಿ ಬ್ರಿಟೀಷ್ ಸರ್ಕಾರದ ವಿರುದ್ಧ ಸೆಟೆದು ನಿಂತಿತ್ತು. ಭಾರತೀಯ ಸ್ವಾತಂತ್ರ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಸಾರಥ್ಯವನ್ನು ಗಾಂಧೀಜಿ ಮತ್ತು ಸುಭಾಷ್ ಚಂದ್ರ ಬೋಸ್ ವಹಿಸಿಕೊಂಡಿದ್ದರು. ಸ್ವಾತಂತ್ರ್ಯ ನಂತರ ಜವಾಹರ್ ಲಾಲ್ ನೆಹರು ನೇತೃತ್ವದ ಕಾಂಗ್ರೆಸ್, ಅನೇಕ ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಮಟ್ಟಿಗೆ ನೆಹರು ಪ್ರಮುಖವಾಗಿದ್ದರಿಂದ ಅದು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿಯನ್ನು ಮುಗಿಸಿಕೊಂಡು ರಾಹುಲ್ ಗಾಂಧಿಯವರೆಗೆ ಬಂದು ನಿಂತಿದೆ.

ಕಾಂಗ್ರೆಸ್‍ನಿಂದ ನೆಹರು ದೇಶದ ಮೊದಲ ಪ್ರಧಾನ ಮಂತ್ರಿಯಾಗಿ ಗದ್ದುಗೆಗೇರಿದ್ದರು. ಅವರು 1947 ಆಗಸ್ಟ್ 15ರಿಂದ 1964 ಮೇ 27ರವರೆಗೆ ಅಧಿಕಾರದಲ್ಲಿದ್ದರು. ಅವರು ಬರೋಬ್ಬರಿ 16 ವರ್ಷ 286 ದಿನಗಳ ಕಾಲ ದೇಶವನ್ನು ಆಳಿದರು. ಅವರ ಮರಣ ನಂತರ ಗುಲ್ಜಾರಿಲಾಲ್ ನಂದಾ ಹಾಗೂ ಲಾಲ್ ಬಹದ್ಧೂರ್ ಶಾಸ್ತ್ರಿ ಪ್ರಧಾನಿಯಾದರು. ಆದರೆ 1966ರಿಂದ ನೆಹರು ಕುಟುಂಬವೇ ಅಧಿಕಾರ ನಡೆಸತೊಡಗಿತು. ಗಾಂಧಿ ಕುಟುಂಬದ ಎರಡನೇ ಕುಡಿ ಇಂದಿರಾ ಗಾಂಧಿ 1966 ಜನವರಿ 24 ರಂದು ಕಾಂಗ್ರೆಸ್ ಪಕ್ಷದಿಂದ ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೆ ಬಂದರು. ಸತತ 11 ವರ್ಷಗಳ ಕಾಲ ಆಡಳಿತ ನಡೆಸಿದರು. ಅವರಿದ್ದಷ್ಟು ದಿನ ಕಾಂಗ್ರೆಸ್‍ನಲ್ಲಿ ಅವರದ್ದೇ ಅಂತಿಮ ಮಾತಾಗಿರುತ್ತಿತ್ತು. ಅಲ್ಲಿ ಬೇರೆಯವರ ಅಭಿಪ್ರಾಯ, ಸಲಹೆಗಳಿಗೆ ಜಾಗವಿರಲಿಲ್ಲ. ಇಂದಿರಾಗಾಂಧಿ ಮಹಿಳೆಯಾದರೂ, ಅವರ ಆಡಳಿತ ವೈಖರಿ, ಪಕ್ಷದ ಮೇಲಿನ ಹಿಡಿತ, ಜನರು ಅವರ ಮೇಲಿಟ್ಟಿದ್ದ ವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು. 1971ರಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಭಾರಿ ಅಕ್ರಮ ನಡೆಸಿದ್ದಾರೆಂದು ಆ ಚುನಾವಣೆಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯ ಅಸಿಂಧುಗೊಳಿಸಿತು. ಇಂದಿರಾಗಾಂಧಿ ಈ ಸಂದರ್ಭದಲ್ಲಿ ರಾಜಿನಾಮೆ ನೀಡುವ ಬದಲು ತುರ್ತು ಪರಿಸ್ಥಿತಿ ಘೋಷಿಸಿದರು. ಎರಡು ವರ್ಷಗಳ ಕಾಲ ತುರ್ತು ಪರಿಸ್ಥಿತಿ ಮುಂದುವರೆದಿತ್ತು. ಇದರಿಂದ ಬೇಸತ್ತ ದೇಶದ ಜನ 1977ರ ಚುನಾವಣೆಯಲ್ಲಿ ಜನತಾ ಮೋರ್ಚಾ ಎಂದು ಕರೆಯಲ್ಪಟ್ಟ ಪಕ್ಷಗಳ ಒಕ್ಕೂಟವನ್ನು ಗೆಲ್ಲಿಸಿದರು. ಕಾಂಗ್ರೆಸ್ ಪಕ್ಷ ಮೊದಲ ಬಾರಿ ಹೀನಾಯವಾಗಿ ಸೋತಿತ್ತು.

ಆದರೆ ಜನತಾ ಪಕ್ಷ ಅಧಿಕಾರಕ್ಕೆ ಬಂದರೂ, ಅದರ ನೆಲೆಗಟ್ಟು ದುರ್ಬಲವಾಗಿತ್ತು. ಅಧಿಕಾರದಲ್ಲಿ ಹಿಡಿತವಿರಲಿಲ್ಲ. ಕಾಂಗ್ರೆಸ್‍ನಿಂದ ಬಂಡಾಯವೆದ್ದು ಜನತಾ ಪರಿವಾರ ಸೇರಿಕೊಂಡಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ, ಗುಲ್ಜಾರಿ ಲಾಲ್ ನಂದಾರಂಥ ಬಲಾಢ್ಯ ನಾಯಕರಿದ್ದರೂ, ಸ್ಥಿರತೆಯನ್ನು ಕಾಪಾಡುವುದರಲ್ಲಿ ಸಫಲತೆ ಕಾಣಲಿಲ್ಲ. ಹಾಗಾಗಿ 1980ರಲ್ಲಿ ಮತ್ತೆ ಚುನಾವಣೆ ನಡೆಯಿತು. ಅಷ್ಟರಲ್ಲಾಗಲೇ ಇಂದಿರಾಗಾಂಧಿ ಎಡವಟ್ಟುಗಳನ್ನು ಮರೆತಿದ್ದ ಜನ, ಅವರನ್ನು ಮತ್ತೊಮ್ಮೆ ಪ್ರಧಾನಿ ಪಟ್ಟದಲ್ಲಿ ಕೂರಿಸಿದರು. 1984ರಲ್ಲಿ ಇಂದಿರಾಗಾಂಧಿ ಹತ್ಯೆ ನಡೆದ ನಂತರ ಮಧ್ಯಂತರ ಅವಧಿಗೆ ಪ್ರಧಾನಿಯಾಗಿ ರಾಜೀವ್ ಗಾಂಧಿ ಪ್ರಮಾಣವಚನ ಸ್ವೀಕರಿಸಿದರು. ಆನಂತರ 1984 ನವೆಂಬರ್‍ನಲ್ಲಿ ನಡೆದ ಚುನಾವಣೆಯಲ್ಲಿ ರಾಜೀವ್ ಗಾಂಧಿ ಮತ್ತೆ ಪ್ರಧಾನಿಯಾದರು. 1989ರವರೆಗೆ ದೇಶವನ್ನಾಳಿದರು. ರಾಜೀವ್ ಗಾಂಧಿ ಹತ್ಯೆಯಾದನಂತರ ಕಾಂಗ್ರೆಸ್ ಪಕ್ಷ ಸಮರ್ಥ ನಾಯಕನಿಲ್ಲದೆ ಸೊರಗತೊಡಗಿತು. ಪಿ ವಿ ನರಸಿಂಹರಾವ್ ಅಧಿಕಾರ ಹಿಡಿದರಾದರೂ ಕಾಂಗ್ರೆಸ್ ಮಂಪರಿನಿಂದ ಏಳಲಿಲ್ಲ. ಈ ಹೊತ್ತಿಗೆ ಕಾಂಗ್ರೆಸ್‍ಗೆ ಗಾಂಧಿ ಕುಟುಂಬದ ಸೊಸೆ ಸೋನಿಯಾ ಗಾಂಧಿಯ ಪ್ರವೇಶವಾಯಿತು. ಪ್ರಧಾನಿಯಾಗುವ ಅವಕಾಶವಿದ್ದರೂ ನಿರಾಕರಿಸಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಿ, ತಾವು ಹೈಕಮಾಂಡ್ ಸ್ಥಾನದಲ್ಲಿ ಪ್ರತಿಷ್ಠಾಪನೆಯಾದರು. ಕಾಂಗ್ರೆಸ್ ಸತತ 10 ವರ್ಷಗಳ ಕಾಲ ಆಡಳಿತ ನಡೆಸಿತು. ಆದರೆ ಕಳೆದ ಚುನಾವಣೆಯಲ್ಲಿ ರಾಹುಲ್‍ನನ್ನು ಮುಂದೆ ಬಿಟ್ಟು ಎಡವಟ್ಟು ಮಾಡಿಕೊಂಡಿತ್ತು. ಕಾಂಗ್ರೆಸ್ ಧೂಳೀಪಟವಾಯಿತು.

ಒಟ್ಟಿನಲ್ಲಿ ನೆಹರು ಅವರಿಂದ ಶುರುವಾದ ಕಾಂಗ್ರೆಸ್ ಯಾನ, ಇದೀಗ ರಾಹುಲ್ ಗಾಂಧಿಯವರೆಗೆ ಬಂದು ನಿಂತಿದೆ. ಅಸಲಿಗೆ ಸೋನಿಯಾ ಗಾಂಧಿಯ ನಂತರ ಕಾಂಗ್ರೆಸ್ ಪತಾಕೆಯನ್ನು ಪ್ರಿಯಾಂಕ ಗಾಂಧಿ ಹಾರಿಸಲಿ, ಅವರಿಗೆ ಇಂದಿರಾ ಗಾಂಧಿಯ ಲುಕ್ ಇದೆ, ಜನರನ್ನು ಸೆಳೆಯುವ ಚಾಕಾಚಕ್ಯತೆಯಿದೆ ಎಂದೇ ಲೆಕ್ಕಾಚಾರವಿತ್ತು. ಬಹುಶಃ ರಾಹುಲ್ ಬದಲಿಗೆ ಪ್ರಿಯಾಂಕ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಧುಮುಕ್ಕಿದ್ದರೇ, ಕಾಂಗ್ರೆಸ್‍ಗೆ ಈ ದುರ್ಗತಿ ಬರುತ್ತಿರಲಿಲ್ಲವೇನೋ..?. ಒಟ್ಟಿನಲ್ಲಿ ಕಾಂಗ್ರೆಸ್ ಎಂಬ ಮಹಾ ಪರ್ವತವೊಂದು ಅನನುಭವಿಯ `ಕೈ’ಯಲ್ಲಿ ಸಿಕ್ಕಿ ಅಧಃಪತನಕ್ಕಿಳಿದಿದೆ. ಇನ್ನು ಮುಂದೆಯಾದರೂ ರಾಹುಲ್‍ನಿಂದ ಅಧಿಕಾರದ ಚುಕ್ಕಾಣಿಯನ್ನು ಕಿತ್ತುಕೊಂಡು, ಸಮರ್ಥ ನಾಯಕರಿಗೆ ಪಟ್ಟ ಕೊಡದಿದ್ದರೇ ಕಾಂಗ್ರೆಸ್ ಅನ್ನು ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ…!

POPULAR  STORIES :

ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?

ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!

ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...