ಕೇರಳದಲ್ಲಿ ಕಾನೂನು ವಿದ್ಯಾರ್ಥಿನಿ ಜೀಶಾಳನ್ನು ಅತ್ಯಾಚಾರಗೈದು ಕೊಲೆಮಾಡಿದ ಬೆನ್ನಿಗೆ ಚಿತ್ರನಟಿ ಪ್ರಿಯಾಮಣಿ, `ಭಾರತದಲ್ಲಿ ಮಹಿಳೆಯರು ಸುರಕ್ಷಿತರಲ್ಲ, ನೀವು ಸುರಕ್ಷಿತ ಜಾಗವನ್ನು ಹುಡುಕಿಕೊಳ್ಳಿ, ಬೇಡಿಕೊಳ್ಳುತ್ತೇನೆ’ ಎಂದು ಟ್ವೀಟ್ ಮಾಡಿದ್ದಳು. ಇದೀಗ ಅವಳ ಟ್ವೀಟ್ ವಿರುದ್ಧ ಆಕ್ರೋಶ ಕೇಳಿಬಂದಿದೆ. ಅವತ್ತು ಅಮಿರ್ ಖಾನ್ ದೇಶಬಿಟ್ಟು ಹೋಗುತ್ತೇನೆ ಅಂದಿದ್ದರು, ಇದೀಗ ಪ್ರಿಯಾಮಣಿ ದೇಶಬಿಡಲು ಹೇಳುತ್ತಿದ್ದಾಳೆ. ಇವಳು ಅಮಿರ್ಖಾನ್ ಸೋದರಿ ಎನ್ನುತ್ತಿದ್ದಾರೆ. ನೇರವಾಗಿ ಪ್ರಿಯಾಮಣಿ ಟ್ವೀಟ್ ಅಪಾರ್ಥವೆನಿಸಿದರೂ, ಅವರ ಆಂತರ್ಯದ ಕಸಿವಿಸಿಗಳನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಶದಲ್ಲಿ ನಿಜಕ್ಕೂ ಮಹಿಳೆಯರು ಸುರಕ್ಷಿತರಾಗಿದ್ದಾರಾ..? ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಂಡು ನೋಡಿದರೇ ಅಸಲಿಯತ್ತು ಗೊತ್ತಾಗುತ್ತದೆ. ದಿನಕ್ಕೆ ಈ ದೇಶದಲ್ಲಿ ಎಷ್ಟು ರೇಪ್ ಪ್ರಕರಣಗಳು ದಾಖಲಾಗುತ್ತವೆ..? ಎಷ್ಟು ಮಂದಿ ಮಹಿಳೆಯರು ಹತ್ಯೆಯಾಗುತ್ತಿದ್ದಾರೆ..? ಎಂಬುದರ ಅಂಕಿಅಂಶಗಳು ಪ್ರಿಯಾಮಣಿ ಟ್ವೀಟ್ಗೆ ಸಾಥ್ ಕೊಡುತ್ತವೆ. ಅವರ ಟ್ವೀಟ್ ಅನ್ನು ಕೇವಲ ದೇಶಪ್ರೇಮದಿಂದ ನೋಡುವ ಬದಲು, ವಾಸ್ತವವನ್ನು ಪರಿಗಣಿಸಿ ಚರ್ಚಿಸಬೇಕಾಗಿದೆ. ಇತ್ತೀಚೆಗಷ್ಟೇ ಬೆಂಗಳುರಿನ ಕತ್ರಿಗುಪ್ಪೆಯಲ್ಲಿ ಅಕ್ಷಯ್ ಎಂಬಾತ ರಾಜಾರೋಷವಾಗಿ ಮಣಿಪ್ಪುರದ ಯುವತಿಯೊಬ್ಬಳನ್ನು ಎತ್ತಾಕಿಕೊಂಡು ಹೋಗಿದ್ದ. ಕೇರಳದಲ್ಲಿ ಕಾನೂನು ವಿದ್ಯಾರ್ಥಿ ಜೀಶಾಳನ್ನು ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲ್ಲಲಾಗಿತ್ತು. ಇಂತಹ ಅನೇಕ ಪ್ರಕರಣಗಳು ಗಂಟೆಗಳ ಲೆಕ್ಕದಲ್ಲಿ ನಡೆಯುತ್ತಿರುವಾಗ ಒಬ್ಬ ಹೆಣ್ಣಾಗಿ ಪ್ರಿಯಾಮಣಿ ಆತಂಕವ್ಯಕ್ತಪಡಿಸಿದರಲ್ಲಿ ಗುರುತರ ಅಪರಾಧಗಳೇನಿಲ್ಲ. ಏಕೆಂದರೇ ಹೆಣ್ಣು ಮಧ್ಯರಾತ್ರಿ ಒಬ್ಬಂಟಿಯಾಗಿ ಒಬ್ಬಳೇ ಓಡಾಡಿದಾಗ ಮಾತ್ರ ಈ ದೇಶ ಪರಿಪೂರ್ಣ ಸ್ವತಂತ್ರವಾಗುತ್ತದೆ ಎಂದಿದ್ದು ಮಹಾತ್ಮ ಗಾಂಧಿಜಿ. ಮಧ್ಯರಾತ್ರಿ ಹೋಗಲಿ, ಹಾಡಾಹಗಲೇ ಹೆಣ್ಣು ಸೇಫಲ್ಲ ಎಂಬ ಪರಿಸ್ಥಿತಿಯಿದೆ. ಇಲ್ಲಿ ಕ್ರೈಂ ಮಾಡಿರುವವರಿಗೆ ನಮ್ಮ ಕಾನೂನಿನಲ್ಲಿರುವ ಮೀಸಲಾತಿಗಳು ಸಿಗುತ್ತವೆ. ಸಾಕ್ಷಿನಾಶಕ್ಕೆ ಸಾಕಷ್ಟು ಟೈಂಗಳು ಸಿಗುತ್ತವೆ. ಪ್ರಬಲ ಸಾಕ್ಷಿಗಳಿದ್ದರೂ ರೇಪ್ ಮಾಡಿದ ಖಾವಿಧಾರಿಗಳೇ ಬಚಾವಾಗುತ್ತಿದ್ದಾರೆ. ಈ ದೇಶದಲ್ಲಿ ತಪ್ಪು ಮಾಡಿದವನು ಈಸಿಯಾಗಿ ಬಚಾವಾಗುತ್ತಿರುವ ಈ ಹೊತ್ತಿಗೆ, ಈ ದೇಶದಲ್ಲಿ ಹೆಣ್ಣುಮಕ್ಕಳು ಸೇಫ್ ಎನ್ನಲು ಸಾಧ್ಯವೇ..? ಪ್ರಿಯಾಮಣಿ ಟ್ವೀಟ್ ನಲ್ಲಿ ಪ್ರಶ್ನೆ ಹುಡುಕುವ ಬದಲು ವಾಸ್ತವ ಅರ್ಥಮಾಡಿಕೊಳ್ಳುವುದು ಸಮಂಜಸ.
ಉಮೇಶ್ ರೆಡ್ಡಿಗಳು, ಜಯಶಂಕರ್ ಗಳು ಈ ದೇಶದಲ್ಲಿ ಎಷ್ಟು ಮಂದಿಯಿಲ್ಲ ಹೇಳಿ. ರಸ್ತೆಯಲ್ಲಿ ಹೋಗುವ ಹೆಣ್ಣು ಮಕ್ಕಳನ್ನು ಕೆಣಕುವ, ರೇಗಿಸುವ, ರೇಟು ಮಾತಾಡುವ ಬೀದಿ ಕಾಮಣ್ಣರು ಕೂಡ ಅತ್ಯಾಚಾರಿಗಳ ತಳಪಾಯವಾಗಿರುತ್ತಾರೆ. ಆದರೆ ಅವರ ಚಪಲ ಕಾಮನ್ ಅಂತ ಕರೆಸಿಕೊಳ್ಳುತ್ತದೆ. ಇದೇ ಕಾಮನ್ ಮುಂದೊಂದು ದಿನ, ಇದೇ ಗುಂಪಿನ ಒಬ್ಬನನ್ನು ಉಮೇಶ್ ರೆಡ್ಡಿಯಾಗಿ ರೂಪಿಸುತ್ತದೆ, ಅವರಲ್ಲೂ ಒಬ್ಬ ಜಯಶಂಕರ್ ಹುಟ್ಟಿಕೊಳ್ಳುತ್ತಾನೆ ಎಂಬ ವಾಸ್ತವ ಈ ಸಮಾಜಕ್ಕೆ ಅರ್ಥವಾಗುತ್ತಿಲ್ಲ. ಪಕ್ಕದ ಮನೆಯ ಹೆಣ್ಣುಮಗಳ ಅತ್ಯಾಚಾರವಾದರೇ ನಮಗೇನು, ನಮ್ಮ ಮಗಳಿಗೇನೂ ಆಗಿಲ್ವಲ್ಲಾ ಎಂಬ ಸ್ವಾರ್ಥ ಹಾಗೂ ಉಢಾಳತನ; ಮುಂದೊಂದು ದಿನ ತಮ್ಮ ಮನೆಯಲ್ಲೂ ರಕ್ತಕಣ್ಣೀರು ಹರಿಸುತ್ತದೆ ಎಂಬ ಸತ್ಯ ಯಾರಿಗೂ ಅರ್ಥವಾಗುತ್ತಿಲ್ಲ. ಹೆಣ್ಣುಮಕ್ಕಳು ಹಾಕುವ ಉಡುಪು ಪ್ರಚೋಧನಕಾರಿಯಾಗಿದ್ದರೇ ಅತ್ಯಾಚಾರ ನಡೆಯುತ್ತದೆ, ಹಳ್ಳಿಗಳಲ್ಲಿ ಬಾತ್ರೂಂ ಕಟ್ಟಿಸಿಬಿಟ್ಟರೇ ಅತ್ಯಾಚಾರ ತಡೆಯಬಹುದು ಎಂಬ ಮೂರನೇ ಕ್ಲಾಸ್ ಸಚಿವರ ಹುರುಳಿಲ್ಲದ ಹೇಳಿಕೆಗಳಿಗೆ ಅರ್ಥವೇ ಇಲ್ಲ. ಹೈಫೈ ಡ್ರೆಸ್ ತೊಟ್ಟ ಯುವತಿ, ಸೀರೆಯುಟ್ಟ ಗರತಿ, ಯೂನಿಫಾರ್ಮ್ ತೊಟ್ಟ ಬಾಲಕಿಯರಲ್ಲಿ ಕಾಮುಕ ಕೇವಲ ಹೆಣ್ಣನ್ನು ಮಾತ್ರ ನೋಡುತ್ತಾನೆ. ಹೈಟೆಕ್ ಬಾತ್ರೂಂಗಳಿದ್ದ ಮನೆಯ ಹೆಣ್ಣುಮಕ್ಕಳ ಮೇಲೂ ಅತ್ಯಾಚಾರಗಳು ನಡೆದ ಹಲವಾರು ನಿದರ್ಶನಗಳಿವೆ. ರೇಪ್ ತಡೆಯಬೇಕೆಂದರೇ ಈ ವ್ಯವಸ್ಥೇ ಮೊದಲು ಬದಲಾಗಬೇಕು. ಕಾನೂನಿನಲ್ಲಿ ಮಾರ್ಪಾಡಾಗಬೇಕು. ಅರಬ್ ದೇಶದಲ್ಲಿ ಅತ್ಯಾಚಾರಕ್ಕೆ ಮರ್ಮಾಂಗವನ್ನೇ ಕಟ್ ಮಾಡಿ ಕೊಲ್ಲುವ, ಕ್ರೇನ್ ನಲ್ಲಿ ಕಟ್ಟಿ ಕಲ್ಲಿನಲ್ಲಿ ಹೊಡೆದು ಸಾಯಿಸುವ ಕ್ರೂರ ಶಿಕ್ಷೆಯಿದೆ. ಅಂಥ ಶಿಕ್ಷೆ ಇಡೀ ಜಗತ್ತಿನಲ್ಲಿ ಜಾರಿಯಾಗಬೇಕು. ಆಗ ಯಾವುದೇ ಕಾಮುಕ ಐದು ನಿಮಿಷದ ಕಾಮಕ್ಕೆ ಜೀವ ಕಳೆದುಕೊಳ್ಳಲಾರ.
ಇವೆಲ್ಲಾ ಎಷ್ಟರ ಮಟ್ಟಿಗೆ ಆಗುತ್ತೋ ಬಿಡುತ್ತೋ ಖಾತ್ರಿಯಿಲ್ಲ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿ ಗ್ಯಾಂಗ್ ರೇಪ್ ವಿರುದ್ಧ ಅಷ್ಟೆಲ್ಲಾ ಪ್ರತಿಭಟನೆ ನಡೆದ್ರೂ ಆರಂಭದಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳವುದಕ್ಕೂ ಮೀನಮೇಷ ಎಣಿಸಿತ್ತು. ಬಾಪುವಿನ ಕನಸಂತೆ ಈ ದೇಶದಲ್ಲಿ, ಅಥವಾ ಜಗತ್ತಿನಲ್ಲಿ ಹೆಣ್ಣು ಒಬ್ಬಂಟಿಯಾಗಿ ಮಧ್ಯರಾತ್ರಿ ದೈರ್ಯದಿಂದ ತಿರುಗಾಡಬೇಕಾದ್ರೇ, ಅವಳು ನಿಜಕ್ಕೂ ಗಂಡಿಗೆ ಸರಿಸಮಾನಳಾಗಿ ಬದುಕಬೇಕೆಂದರೇ ಆಯಾ ದೇಶದ ನಪುಂಸಕತ್ವ ಕೊನೆಯಾಗಬೇಕು. ಆಗ ಉಮೇಶ್ ರೆಡ್ಡಿಗಳ ಬೇರು ನಾಶವಾಗುತ್ತದೆ. ಸದಾ ಪ್ರಶ್ನೆಗಳನ್ನು ಹೊತ್ತು ತಿರುಗುವಹೆಣ್ಣಿನ ಮೊಗದಲ್ಲಿ ನಗು ಅರಳುತ್ತದೆ. ಪ್ರಿಯಾಮಣಿ ಟ್ವೀಟ್ ನ ಅಸಲಿ ಉದ್ದೇಶವೇ ಇದು.
- ರಾ ಚಿಂತನ್.
POPULAR STORIES :
ಶಿವಣ್ಣನ ಸ್ಯಾಂಡಲ್ ವುಡ್ ಪ್ರೀತಿ…. ಶಿವಣ್ಣ ನಿಮಗೆ ನೀವೇ ಸಾಟಿ
ಐಪಿಎಲ್ ಮ್ಯಾಚ್ನಿಂದ ಕೊಹ್ಲಿ ಸಸ್ಪೆಂಡ್..!!? ಕೊಹ್ಲಿ ನಸೀಬು ಹೀಗ್ಯಾಕೆ ಆಯ್ತು..!!?
`ಕಾಡಿಗೆ ಬೆಂಕಿ’ 50000 ಜನರು ಸುಟ್ಟು ಕರಕಲಾದರು..!?
ಪ್ರಿಯಾಂಕ ಲಡ್ಡು, ರಾಹುಲ್ ಫುಡ್ಡು, ಶೀಲಾ ಉಪ್ಪಿನಕಾಯಿ..! ಉತ್ತರ ಪ್ರದೇಶದಲ್ಲಿ ಪ್ರಶಾಂತ್ `ಕೈ’ ಚಳಕ..!?
ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?
ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!