ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-೧
ಗಾಳಿಮಾತು
‘ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೆ’…? ಈ ಹಾಡು ಕೇಳಿದ ತಕ್ಷಣ ಮನಸಾರೆ ಪ್ರೀತಿಸುವ ಜೀವಕ್ಕಾಗಿ ಈ ಹಾಡನ್ನ ಬರೆಯಲಾಗಿದೆ ಅನ್ನೋ ಫೀಲ್ ಬರೋದು ನಿಜ. ಆದ್ರೆ ಇದು ಪ್ರೀತಿ ಮಾಡುವವನ ಕುರಿತಾಗಿ ಬರೆದ ಹಾಡಲ್ಲ…! ಬದಲಾಗಿ ಎಲ್ಲರಿಗೂ ಬೆಳಕು ನೀಡೋ ಸೂರ್ಯನನ್ನ ಕುರಿತು ಬರೆದ ಹಾಡು.
ಹಾಡಿಗಾಗಿಯೇ ಸಿನಿಪ್ರೀಯರನ್ನ ಥಿಯೇಟರ್ಗೆ ಕರ್ಕೊಂಡು ಬರ್ಬೇಕು ಅನ್ನೋ ಹಠ ಆಗಿನ ಕಾಲದ ನಿರ್ದೇಶಕ, ಗೀತರಚನೆಕಾರ, ಸಂಗೀತ ನಿರ್ದೇಶಕರದ್ದಾಗಿತ್ತು. ಇನ್ನು ಈ ಚಿತ್ರದ ಹಾಡುಗಳು ತುಂಬಾನೆ ಚಾಲೆಂಜಿಂಗ್ ಆಗಿದ್ವು. ಯಾಕಂದ್ರೆ ಕೆಲವೇ ಸೆಕೆಂಡುಗಳ ಅಂತರದಲ್ಲಿ ಎರೆಡು ಹಾಡುಗಳನ್ನ ಸಿನ್ಮಾದಲ್ಲಿ ಸೇರಿಸುವುದು ನಿಜಕ್ಕೂ ಚಾಲೆಂಜಿಂಗ್ ಟಾಸ್ಕ್. ನಮ್ಮೂರ ಸಂತೇಲಿ ಅನ್ನೋ ಹಾಡು ಹಾಗೂ ಒಮ್ಮೆ ನಿನ್ನನ್ನು ಎರೆಡು ಹಾಡುಗಳು ಸಿನಿಪ್ರೀಯರನ್ನ ಇಂದಿಗೂ ಕಾಡುತ್ತಿವೆ. ಇಂತಹ ಹೆವೀ ರಿಸ್ಕ್ ತೆಗೆದುಕೊಂಡಿದ್ದು ನಿರ್ದೇಶಕ ದೊರೆ ಭಗವಾನ್.
ಚಿ.ಉದಯಶಂಕರ್ ಬರೆದ ಈ ಹಾಡು, ಮಿನುಗುತಿಹ ತಾರೆಯೆಲ್ಲಾ ನಿನ ಕಂಗಳೋ… ನಗುತಿರಲು ಭೂಮಿಯೆಲ್ಲಾ ಬೆಳದಿಂಗಳೋ.. ಅನ್ನೋ ಸಾಲಿನಿಂದ ಶುರುವಾದಾಗ ಹುಡುಗರಿಗೆ ಅದೇನೋ ಪುಳಕ. ನಂತ್ರ, ಮೂಡಣದ ಅಂಚಿನಿಂದ ನಿನ ಪಯಣವೋ… ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ, ಎಂದಾಗ ಮಾತ್ರ ಇದು ಪ್ರಿಯಕರನ ಕುರಿತಾದ ಪದಗಳಲ್ಲ. ಆಕಾಶದ ರಾಜ ಸೂರ್ಯನನ್ನು ಕುರಿತು ಗೀಚಿದ ಅದ್ಬುತ ಸಾಲುಗಳು ಎಂದು. ಒಂದೇ ಸಲಕ್ಕೆ ಪ್ರೇಮ ಗೀತೆ ವಿರಹಗೀತೆ ಎರಡನ್ನೂ ಸೇರಿಸಿ ಒಂದುಗೂಡಿಸಿ, ಎಲ್ಲರನ್ನೂ ತಬ್ಬಿಬ್ಬುಗೊಳಿಸುವಂಥ ಹಾಡನ್ನ ಹೀಗೂ ಮಾಡಬಹುದು ಅನ್ನೋದನ್ನ ತೋರಿಸಿಕೊಟ್ರು.
-ಅಕ್ಷತಾ