: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಭರ್ಜರಿ ಪ್ರದರ್ಶನ ನೀಡಿದ್ದ ಮಾಂತ್ರಿಕ ಸ್ಪಿನ್ನರ್ ವರುಣ್ ಚಕ್ರವರ್ತಿ ಸತತ ಎರಡು ಬಾರಿ ಟೀಮ್ ಇಂಡಿಯಾ ಟಿಕೆಟ್ ಪಡೆಯಲು ವಿಫಲರಾಗಿದ್ದಾರೆ.
ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದ ತಮಿಳುನಾಡು ಮೂಲದ ಯುವ ಸ್ಪಿನ್ನರ್ ಭುಜದ ನೋವಿನ ಸಮಸ್ಯೆ ಕಾರಣ ತಂಡದಿಂದ ಹೊರಗುಳಿಯುವಂತ್ತಾಯಿತು. ಇದೀಗ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಗೆ ವರುಣ್ ಆಯ್ಕೆಯಾಗಿದ್ದಾರೆ ಆದರೂ, ತಂಡದಲ್ಲಿ ಆಡುವ ಅವಕಾಶ ಪಡೆಯಲು ಬೇಕಿರುವ ಫಿಟ್ನೆಸ್ ಸಾಬೀತು ಪಡಿಸುವಲ್ಲಿ ಒಂದಲ್ಲ ಎರಡು ಬಾರಿ ವಿಫಲರಾಗಿದ್ದಾರೆ.
ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಖಾತ್ರಿ ಪಡಿಸಿಕೊಳ್ಳಲು ಆಟಗಾರರು ಫಿಟ್ನೆಸ್ ಪರೀಕ್ಷೆ ತೆಗೆದುಕೊಳ್ಳಬೇಕು. ಯೋ-ಯೋ ಟೆಸ್ಟ್ನಲ್ಲಿ ಕನಿಷ್ಠ 17 ಅಂಕ ಮತ್ತು 8 ನಿಮಿಷ, 30 ಸೆಕೆಂಡ್ಗಳಲ್ಲಿ 2 ಕಿ.ಮೀ. ಓಟ ಪೂರೈಸಿದರೆ ಮಾತ್ರವೇ ಭಾರತ ತಂಡದಲ್ಲಿ ಸ್ಥಾನ ಖಾತ್ರಿಯಾಗುತ್ತದೆ. ವರುಣ್ ಎರಡು ಬಾರಿ ಈ ಪರೀಕ್ಷೆಯಲ್ಲಿ ಎಡವಿದ್ದಾರೆ.
ಐಪಿಎಲ್ 2020 ಟೂರ್ನಿಯಲ್ಲಿ ಕೆಕೆಆರ್ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡ 29 ವರ್ಷದ ವರುಣ್ ಚಕ್ರವರ್ತಿ, ಸತತ ಎರಡು ಬಾರಿ ಫಿಟ್ನೆಸ್ ಸಾಬೀತು ಪಡಿಸುವಲ್ಲಿ ವಿಫಲರಾಗಿರುವುದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ವರುಣ್ ಚಕ್ರವರ್ತಿ ಹೊರತಾಗಿ ಯುವ ಆಲ್ರೌಂಡರ್ ರಾಹುಲ್ ತೆವಾಟಿಯಾ ಕೂಡ ಫಿಟ್ನೆಸ್ ಟೆಸ್ಟ್ನಲ್ಲಿ ಪೇಲ್ ಆಗಿದ್ದಾರೆ. ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ತಂಡದ ಪರ ಐಪಿಎಲ್ ಟೂರ್ನಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚಿದ್ದ ತೆವಾಟಿಯಾಗೆ ಟೀಮ್ ಇಂಡಿಯಾ ಪರ ಆಡುವ ಮೊತ್ತ ಮೊದಲ ಕರೆ ಬಂದಿತ್ತು. ಆದರೆ ಕಳಪೆ ಫಿಟ್ನೆಸ್ ಕಾರಣ ಈ ಅವಕಾಶ ಕೈತಪ್ಪಿದೆ. ಇದೇ ವೇಳೆ ಭಾರತ ತಂಡದ ಪರ ಏಕೈಕ ಟಿ20 ಪಂದ್ಯವನ್ನಾಡಿರುವ ಯುವ ಲೆಗ್ ಸ್ಪಿನ್ನರ್ ರಾಹುಲ್ ಚಹರ್ಗೆ ಬುಲಾವ್ ನೀಡಲಾಗಿದೆ.