ಕೇಂದ್ರದಿಂದ ಸಮಯಾವಕಾಶ ಕೇಳಿದ ಟ್ವಿಟ್ಟರ್! ಏನಿದು ಸ್ಟೋರಿ

admin
1 Min Read

ಕೇಂದ್ರ ಸರ್ಕಾರದ ಕೊನೆಯ ನೋಟಿಸ್ ಬಳಿಕ ಎಚ್ಚೆತ್ತಿರುವ ಸಾಮಾಜಿಕ ಜಾಲತಾಣದ ದಿಗ್ಗಜ ಸಂಸ್ಥೆ ಟ್ವಿಟ್ಟರ್, ಐಟಿ ನಿಯಮಗಳನ್ನು ಪಾಲಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಕೋರಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಡಿಜಿಟಲ್ ನಿಯಮಗಳನ್ನು ಅನುಸರಿಸಲು ತಾನು ಬದ್ಧನಾಗಿದ್ದೇನೆ. ಆದರೆ ಈಗಿನ ಸಾಂಕ್ರಾಮಿಕ ಸನ್ನಿವೇಶದ ಕಾರಣದಿಂದಾಗಿ ಹೆಚ್ಚುವರಿ ಸಮಯದ ಅಗತ್ಯವಿದೆ ಎಂದು ಅದು ಸರ್ಕಾರಕ್ಕೆ ತಿಳಿಸಿದೆ ಎಂದು ವರದಿಯಾಗಿದೆ.


ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಫೆಬ್ರವರಿಯಲ್ಲಿ ರೂಪಿಸಿರುವ ಹೊಸ ಐಟಿ ನಿಯಮಗಳು, ಟ್ವಿಟ್ಟರ್ ಸೇರಿದಂತೆ ಎಲ್ಲ ಸಾಮಾಜಿಕ ಮಾಧ್ಯಮ ಕಂಪೆನಿಗಳೂ ಮೇ 26ರ ಒಳಗೆ ಸ್ಥಳೀಯ ಮಟ್ಟದ ಅಹವಾಲು ಸ್ವೀಕಾರ ಅಧಿಕಾರಿಯನ್ನು ನೇಮಿಸಬೇಕು ಎಂದು ಸೂಚಿಸಿದೆ. ಆದರೆ ಕೇಂದ್ರದ ಸೂಚನೆಯನ್ನು ಪಾಲಿಸದೆ ಭಾರತದ ಕಾನೂನಿಗೆ ಬದ್ಧವಾಗುವುದಿಲ್ಲ ಎಂಬ ಸುಳಿವು ನೀಡಿದ್ದ ಟ್ವಿಟ್ಟರ್‌ಗೆ ಸರ್ಕಾರ ಕೊನೆಯ ಅವಕಾಶ ನೀಡಿತ್ತು. ಈಗ ಟ್ವಿಟ್ಟರ್ ಎಷ್ಟು ಸಮಯದ ಅವಕಾಶ ನೀಡಿದೆ ಎನ್ನುವುದು ಸ್ಪಷ್ಟವಾಗಿಲ್ಲ.
ಮೂವರು ಶಾಸನಬದ್ಧ ಅಧಿಕಾರಿಗಳನ್ನು ನೇಮಿಸಬೇಕೆಂಬ ಕಟ್ಟನಿಟ್ಟಾದ ಕಾನೂನಿನಂತೆ, ಟ್ವಿಟ್ಟರ್ ಅಮೆರಿಕದಲ್ಲಿನ ತನ್ನ ಕೇಂದ್ರ ಕಚೇರಿಯಿಂದ ಹಸಿರು ನಿಶಾನೆ ಪಡೆಯಬೇಕಿದೆ. ಬಳಿಕ ಅದು ಈ ವಿಚಾರದಲ್ಲಿ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.


ಈ ನಡುವೆ ಭಾರತದಲ್ಲಿ ಅಹವಾಲು ಅಧಿಕಾರಿಗಳನ್ನು ನೇಮಿಸಲು ಅಮೆರಿಕದ ಕೇಂದ್ರ ಕಚೇರಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದು, ಭಾರತೀಯರ ಬದಲು ಭಾರತದ ಹೊರಗೆ ಇರುವ ತನ್ನ ಅಧಿಕಾರಿಗಳನ್ನೇ ನೇಮಕ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಮಾರ್ಗಸೂಚಿಯನ್ನು ಅನುಸರಿಸಲು ಟ್ವಿಟ್ಟರ್ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ ಎಂದು ಭಾರತ ಸರ್ಕಾರಕ್ಕೆ ನಾವು ಭರವಸೆ ನೀಡಿದ್ದೇವೆ. ಈ ಕುರಿತಾದ ನಮ್ಮ ಬೆಳವಣಿಗೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಭಾರತ ಸರ್ಕಾರದೊಂದಿಗೆ ರಚನಾತ್ಮಕ ಮಾತುಕತೆ ನಡೆಸುವುದನ್ನು ನಾವು ಮುಂದುವರಿಸುತ್ತೇವೆ’ ಎಂದು ಟ್ವಿಟ್ಟರ್ ವಕ್ತಾರರು ತಿಳಿಸಿದ್ದಾರೆ.


ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಸರ್ಕಾರ ಹಲವು ಸೂಚನೆಗಳನ್ನು ನೀಡಿದ್ದರೂ, ಸ್ಥಳೀಯ ಅಹವಾಲು ಅಧಿಕಾರಿಯನ್ನು ನೇಮಿಸಲು ಮುಂದಾಗದ ಟ್ವಿಟ್ಟರ್‌ಗೆ ಕೆಲವು ದಿನಗಳ ಹಿಂದೆ ಸರ್ಕಾರ ಕೊನೆಯ ಎಚ್ಚರಿಕೆಯ ನೋಟಿಸ್ ನೀಡಿತ್ತು. ಕಾನೂನು ಪಾಲಿಸುವಲ್ಲಿ ವಿಫಲವಾದರೆ ಐಪಿಸಿ ಅಡಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು

Share This Article
Leave a Comment