No menu items!
8.7 C
Munich
Wednesday, April 15, 2026

ಜನ್ಮದಿನದಂದೇ ಯುವಕನ ದಾರುಣ ಸಾವು

Must read

ಅಯ್ಯೋ ವಿಧಿಯೇ ನೀನೆಂಥಾ ಕ್ರೂರಿ? ಮಗನ ಹುಟ್ಟು ಹಬ್ಬದ ಸಂಭಮ್ರದಲ್ಲಿದ್ದ ಹೆತ್ತವರ ಒಡಲಿಗೆ ಬೆಂಕಿ ಇಟ್ಟು ಬಿಟ್ಯಲ್ಲಾ…

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ಶರತ್​ನ ಸಾವಿನ ಸುದ್ದಿ ಕೇಳಿದ ಪ್ರತಿಯೊಬ್ಬರೂ ವಿಧಿಗೆ ಹಿಡಿಶಾಪ ಹಾಕದೆ ಇರಲಾರರು.

ರಾಗಿಬೊಮ್ಮನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಗೀತಾ ದಂಪತಿ ಪುತ್ರ ಶರತ್​, ಡಿ.23ರಂದು 19 ವರ್ಷ ತುಂಬಿ 20ನೇ ವಸಂತಕ್ಕೆ ಕಾಲಿಟ್ಟಿದ್ದ. ಮಳವಳ್ಳಿಯ ಶಾಂತಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ಈತ, ಜನ್ಮ ದಿನದಂದೂ ಕಾಲೇಜಿಗೆ ತೆರಳಿದ್ದ. ಕಾಲೇಜಿನಲ್ಲಿ ಸಹಪಾಠಿಗಳೆಲ್ಲರೂ ಶರತ್​ಗೆ ಶುಭ ಕೋರಿದ್ದರು. ತರಗತಿ ಮುಗಿದ ಬಳಿಕ ಖುಷಿಯಿಂದಲೇ ಸಹಪಾಠಿಗಳ ಜತೆ ಶರತ್​ ವಾಪಸ್​ ಮನೆಗೆ ಬರುತ್ತಿದ್ದ. ಮಾರ್ಗಮಧ್ಯೆ ದುರಂತ ಸಂಭವಿಸಿದ್ದು, ಶರತ್​ ಬಾರದ ಲೋಕಕ್ಕೆ ಹೋಗಿಬಿಟ್ಟ.

ಕಾಲೇಜು ಮುಗಿದ ಬಳಿಕ ಮನೆಗೆ ಹೋಗಲೆಂದು ಸಹಪಾಠಿಗಳಾದ ಶಶಾಂಕ್​ ಮತ್ತು ಸುದರ್ಶನ್​ ಜತೆ ಶರತ್ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ಕುಕ್ಕುಟ ಸಂವರ್ಧನಾ ಕೇಂದ್ರದ ಸಮೀಪ ಈ ಮೂವರು ವಿದ್ಯಾರ್ಥಿಗಳಿಗೂ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರ ಗಾಯಗೊಂಡ ಶರತ್​, ಶಶಾಂಕ್ ಮತ್ತು ಸುದರ್ಶನ್ ಮೂವರನ್ನು ಜಿಲ್ಲಾಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಯಿತು. ಈ ಪೈಕಿ ಶರತ್​ಗೆ ತೀವ್ರ ರಕ್ತಸ್ರಾವವಾಗಿ ಚಿಂತಾಜನಕ ಸ್ಥಿತಿಗೆ ತಲುಪಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಶರತ್​​ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗನ ಉಳಿವಿಗಾಗಿ ಪಾಲಕರು ಕಣ್ಣೀರಿಡುತ್ತಾ, ದೇವರಿಗೂ ಪರಿಪರಿಯಾಗಿ ಬೇಡಿಕೊಂಡಿದ್ದರು. ಆಸ್ಪತ್ರೆಯಲ್ಲೂ ಮಗನನ್ನು ಉಳಿಸಿಕೊಡಿ ಎಂದು ವೈದ್ಯರನ್ನ ಅಂಗಲಾಚಿ ಬೇಡಿಕೊಂಡಿದ್ದರು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಫಲಿಸಲಿಲ್ಲ. ವಿಧಿಯಾಟವೇ ಬೇರೆಯಾಗಿತ್ತು. ಶರತ್​ನ ಮಿದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಮಗ ಬದುಕಿ ಬರಲಾರ ಎಂದರಿತ ಪಾಲಕರು ನೋವಿನಲ್ಲೂ ಶರತ್​​ನ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.

ಅತ್ತ ಶರತ್​ ಮತ್ತು ಈತನ ಸಹಪಾಠಿಗಳಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಅಪಘಾತ ಸಂಭವಿಸಿದ ವೇಳೆ ಕಾರನ್ನು ಚಾಲನೆ ಮಾಡುತ್ತಿದ್ದವ ಪೊಲೀಸ್​ ಸಿಬ್ಬಂದಿ ಎನ್ನಲಾಗಿದೆ. ಆರೋಪಿ ಇಲಾಖೆ ಸಿಬ್ಬಂದಿಯಾದ ಕಾರಣ ಪೊಲೀಸರು ಆತನ ರಕ್ಷಣೆಗೆ ನಿಂತಿದ್ದಾರೆ ಆಕ್ರೋಶ ಹೊರಹಾಕಿದ್ದ ಜಿಪಂ ಮಾಜಿ ಸದಸ್ಯ ಆರ್​.ಎನ್​.ವಿಶ್ವಾಸ್​, ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article