ದೇವಾಲಯದ ಚಿನ್ನದಿಂದ ಹಣ ಗಳಿಸುವ ಯೋಜನೆ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ನವದೆಹಲಿ: ದೇಶಾದ್ಯಂತ ದೇವಾಲಯ ಟ್ರಸ್ಟ್ಗಳು ಹಾಗೂ ಇತರ ಧಾರ್ಮಿಕ ಸಂಸ್ಥೆಗಳು ಹೊಂದಿರುವ ಚಿನ್ನದಿಂದ ಹಣಗಳಿಕೆ ಮಾಡುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸುತ್ತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಈ ಕುರಿತು ಹರಿದಾಡುತ್ತಿರುವ ಸುದ್ದಿಗಳು ಮತ್ತು ವದಂತಿಗಳು ಸಂಪೂರ್ಣ ಸುಳ್ಳು, ದಾರಿತಪ್ಪಿಸುವ ಹಾಗೂ ಆಧಾರರಹಿತವಾಗಿವೆ ಎಂದು ಸಚಿವಾಲಯ ಖಡಕ್ ಸ್ಪಷ್ಟನೆ ನೀಡಿದೆ.
ದೇವಾಲಯಗಳ ಗುಮ್ಮಟಗಳು, ಬಾಗಿಲುಗಳು ಅಥವಾ ಇತರ ಧಾರ್ಮಿಕ ರಚನೆಗಳ ಮೇಲೆ ಅಳವಡಿಸಿರುವ ಚಿನ್ನವನ್ನು ಭಾರತದ ಕಾರ್ಯತಂತ್ರದ ಚಿನ್ನದ ನಿಕ್ಷೇಪಗಳ ಭಾಗವೆಂದು ಪರಿಗಣಿಸಲಾಗುತ್ತದೆ ಎಂಬ ಹೇಳಿಕೆಗಳನ್ನು ಹಣಕಾಸು ಸಚಿವಾಲಯ ತಳ್ಳಿ ಹಾಕಿದೆ.
ಇಂತಹ ಹೇಳಿಕೆಗಳು ಸಂಪೂರ್ಣ ಅಸತ್ಯವಾಗಿದ್ದು, ಯಾವುದೇ ಅಧಿಕೃತ ಆಧಾರವಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಈ ರೀತಿಯ ಸುಳ್ಳು ಸುದ್ದಿಗಳನ್ನು ನಂಬಬಾರದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಬಾರದು ಎಂದು ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಮನವಿ ಮಾಡಿದೆ.
ನೀತಿ ನಿರ್ಧಾರಗಳು ಅಥವಾ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಮಾಹಿತಿಯನ್ನು ಕೇಂದ್ರ ಸರ್ಕಾರ ಪತ್ರಿಕಾ ಪ್ರಕಟಣೆಗಳು, ಅಧಿಕೃತ ವೆಬ್ಸೈಟ್ಗಳು ಹಾಗೂ ಪರಿಶೀಲಿತ ಸಾರ್ವಜನಿಕ ಸಂವಹನ ವೇದಿಕೆಗಳ ಮೂಲಕವೇ ಪ್ರಕಟಿಸುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಸಾರ್ವಜನಿಕರು ನಿಖರ ಹಾಗೂ ವಿಶ್ವಾಸಾರ್ಹ ಮಾಹಿತಿಗಾಗಿ ಕೇವಲ ಅಧಿಕೃತ ಮೂಲಗಳನ್ನೇ ಅವಲಂಬಿಸಬೇಕು ಎಂದು ಸಲಹೆ ನೀಡಲಾಗಿದೆ.
ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳ ಬಗ್ಗೆ ತಪ್ಪು ಮಾಹಿತಿ ಹರಡುವುದು ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಮತ್ತು ಗೊಂದಲ ಸೃಷ್ಟಿಸುವುದರ ಜೊತೆಗೆ ಸಾಮಾಜಿಕ ಸಾಮರಸ್ಯಕ್ಕೂ ಧಕ್ಕೆಯುಂಟುಮಾಡಬಹುದು ಎಂದು ಸರ್ಕಾರ ಎಚ್ಚರಿಸಿದೆ.
ಈ ಹಿನ್ನೆಲೆಯಲ್ಲಿ, ಇಂತಹ ದಾರಿತಪ್ಪಿಸುವ ಸುದ್ದಿಗಳಿಗೆ ಯಾವುದೇ ಆಧಾರವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರ ರವಾನಿಸಿದೆ.



