ಹಿಂದೂಗಳ ಮೇಲಿನ ದಾಳಿ ಪ್ರಕರಣ ವಾಪಸ್ ಪಡೆದು ಸರ್ಕಾರ ಯಾವ ಸಂದೇಶ ನೀಡುತ್ತಿದೆ?: ಸಿ.ಟಿ. ರವಿ ಪ್ರಶ್ನೆ
ಚಿಕ್ಕಮಗಳೂರು: ಸಿ.ಟಿ. ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಹಿಂದೂಗಳ ಮೇಲಿನ ದಾಳಿ ಪ್ರಕರಣಗಳನ್ನು ಹಿಂಪಡೆದು ಸರ್ಕಾರ ಯಾವ ಸಂದೇಶ ನೀಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಡ್ಲೆ ಮಶಾಕ್ ದರ್ಗಾ ಪ್ರಕರಣ ಹಿಂಪಡೆಯುವ ವಿಚಾರವನ್ನು ತೀವ್ರವಾಗಿ ಖಂಡಿಸಿದರು.
“ರಾಘವ ಚೈತನ್ಯ ಬೃಂದಾವನದ ಪೂಜೆಗೆ ತೆರಳಿದ್ದ ವೇಳೆ ದಾಳಿ ನಡೆದಿತ್ತು. ಬಂದೋಬಸ್ತ್ಗೆ ಇದ್ದ ಪೊಲೀಸರು, ಎಸ್ಪಿ ಹಾಗೂ ಸಂಸದ ಖೂಬಾ ಅವರ ಕಾರಿನ ಮೇಲೂ ದಾಳಿ ಮಾಡಲಾಗಿತ್ತು. ಇಂತಹ ಪ್ರಕರಣಗಳನ್ನು ವಾಪಸ್ ಪಡೆಯುವ ಮೂಲಕ ಸರ್ಕಾರ ಏನು ಸಂದೇಶ ಕೊಡುತ್ತಿದೆ?” ಎಂದು ಪ್ರಶ್ನಿಸಿದರು.
“ಈ ಮೂಲಕ ‘ನಾವು ನಿಮ್ಮ ಜೊತೆಯಲ್ಲಿದ್ದೇವೆ’ ಎಂಬ ಸಂದೇಶವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ” ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, “ಕಮ್ಯುನಲ್ ಮತ್ತು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ರಕ್ಷಣೆ ನೀಡುವ ನೀತಿ ಸಮಾಜಘಾತುಕ ಮತ್ತು ಅಪಾಯಕಾರಿಯಾಗಿದೆ” ಎಂದು ಹೇಳಿದರು.
“ರೈತರು ಅಥವಾ ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದರೆ ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ ಬೆಂಕಿ ಹಚ್ಚುವುದು, ದೊಣ್ಣೆ ಹಿಡಿದು ದಾಳಿ ನಡೆಸಿದ ಪ್ರಕರಣಗಳನ್ನು ಹಿಂಪಡೆಯುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.



