ಬಾರ್ಗೆ ಎಣ್ಣೆ ಹೊಡೆಯಲು ಹೋಗಿ ಕಂಡವರ ಮನೆ ಮುಂದೆ ವಾಹನ ಪಾರ್ಕ್; ಪ್ರಶ್ನಿಸಿದ ಮನೆ ಮಾಲೀಕನಿಗೆ ಹಲ್ಲೆಗೆ ಯತ್ನ!
ಬೆಂಗಳೂರು: ಬಾರ್ಗೆ ಮದ್ಯಪಾನ ಮಾಡಲು ತೆರಳಿದ್ದ ಕ್ಯಾಬ್ ಚಾಲಕನೊಬ್ಬ ಕಂಡವರ ಮನೆ ಮುಂದೆ ವಾಹನ ನಿಲ್ಲಿಸಿ, ಪ್ರಶ್ನಿಸಿದ ಮನೆ ಮಾಲೀಕನೊಂದಿಗೆ ಗಲಾಟೆ ಮಾಡಿಕೊಂಡಿರುವ ಘಟನೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಕಾಚೋಹಳ್ಳಿ ರಸ್ತೆಯಲ್ಲಿ ನಡೆದಿದೆ.
ಕಾಚೋಹಳ್ಳಿ ರಸ್ತೆಯಲ್ಲಿರುವ ಬಾರ್ಗೆ ಮದ್ಯಪಾನ ಮಾಡಲು ತೆರಳಿದ್ದ ಕ್ಯಾಬ್ ಚಾಲಕ, ಬಾರ್ ಮುಂದಿನ ರಸ್ತೆಯಲ್ಲಿರುವ ಮನೆಯೊಂದರ ಮುಂದೆ ತನ್ನ ಕ್ಯಾಬ್ನ್ನು ಪಾರ್ಕ್ ಮಾಡಿದ್ದಾನೆ. ಬಳಿಕ ಸುಮಾರು ಒಂದು ಗಂಟೆಯಾದರೂ ಕ್ಯಾಬ್ ಚಾಲಕ ವಾಹನವನ್ನು ತೆಗೆದುಕೊಂಡು ಹೋಗಿರಲಿಲ್ಲ ಎನ್ನಲಾಗಿದೆ.
ಈ ವೇಳೆ ಮನೆ ಮಾಲೀಕ, ಕ್ಯಾಬ್ನಲ್ಲಿದ್ದ ಫೋನ್ ನಂಬರ್ಗೆ ಕರೆ ಮಾಡಿ ವಾಹನವನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಕರೆ ಮಾಡಿದ ಕೆಲ ಸಮಯದ ಬಳಿಕ ಕ್ಯಾಬ್ ಬಳಿ ಬಂದ ಚಾಲಕ, ಮನೆ ಮಾಲೀಕನೊಂದಿಗೆ ಗಲಾಟೆ ಆರಂಭಿಸಿದ್ದಾನೆ. ಈ ವೇಳೆ “ನಾನ್ ಯಾರ್ ಗೊತ್ತಾ?” ಎಂದು ಅವಾಜ್ ಹಾಕಿ ಮನೆ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಬಳಿಕ ಮಾತಿಗೆ ಮಾತು ಬೆಳೆದು ಕ್ಯಾಬ್ ಚಾಲಕ ಹಾಗೂ ಮನೆ ಮಾಲೀಕನ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣದ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.



