ಲೋಕಸಭಾ ಚುನಾವಣೆ ರಂಗು ದಿನೇ ದಿನೇ ರಂಗೇರುತ್ತಿದೆ. ಮಂಡ್ಯ ಕ್ಷೇತ್ರ ಸದ್ಯಕ್ಕೆ ಕರ್ನಾಟಕದ ಟ್ರೆಂಡಿಂಗ್ ಕ್ಷೇತ್ರವಾಗಿದೆ. ಸುಮಲತಾ ಅಂಬರೀಷ್ ಹಾಗೂ ನಿಖಿಲ್ ಕುಮಾರಸ್ವಾಮಿ ಪರ ಯಾರು ಯಾರು ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಮೊನ್ನೆ ಮೊನ್ನೆಯಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನನ್ನ ಬೆಂಬಲ ಸುಮಲತಾ ಅಂಬರೀಷ್ ಗೆ ಎಂದು ಹೇಳುವ ಮೂಲಕ ಮಂಡ್ಯ ರಾಜಕಾರಣ ಇನ್ನಷ್ಟು ರಂಗೇರುವಂತೆ ಮಾಡಿದ್ರು,
ಇದರ ಬೆನ್ನಲ್ಲೆ ಕಿಚ್ಚ ಸುದೀಪ್ ದರ್ಶನ್ ಇರೋವಾಗ ನನ್ನ ಅವಶ್ಯಕಥೆ ಸುಮಲತಾ ಗೆ ಇಲ್ಲ ಅನ್ಸುತ್ತೆ ಅನ್ನೋ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ರು, ಸ್ಯಾಂಡಲ್ ವುಡ್ ನ ಈ ಇಬ್ಬರು ಸ್ಟಾರ್ ನಟರ ಹೇಳಿಕೆಯ ಬೆನ್ನಲ್ಲೆ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಉತ್ತಮ ಪ್ರಜಾಕೀಯ ಪಕ್ಷದಿಂದ ಯಾವ ಸೆಲೆಬ್ರಿಟಿಗೂ ಬೆಂಬಲವಿಲ್ಲ ಎಂದು ಹೇಳುವ ಮೂಲಕ ಸುಮಲತಾ ಅವರಿಗೂ ನಮ್ಮ ಬೆಂಬಲ ಇಲ್ಲ ಎನ್ನುವ ವಿಷಯವನ್ನ ಸ್ಪಷ್ಟಪಡಿಸಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷ ಈಗಾಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಉತ್ತಮ ಪ್ರಜಾಕೀಯ ಪಕ್ಷ ಸ್ಪರ್ಧೆಗಿಳಿಯಲಿದೆ ಎಂದು ನಟ ಉಪೇಂದ್ರ ಹೇಳಿದ್ದಾರೆ. ಈ ಬಾರಿ ತಾವು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಉಪೇಂದ್ರ ಮತ್ತೊಮ್ಮೆ ಹೇಳಿದರು.
ಅಭ್ಯರ್ಥಿಗಳ ಆಯ್ಕೆಯಾಗಿ ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಪಾಸಾದವರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಮಂಡ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ. ಆದರೆ, ಪ್ರಮುಖ ಅಭ್ಯರ್ಥಿಗಳಾಗಿರುವ ಸುಮಲತಾ ಅಂಬರೀಷ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ನಮ್ಮ ಪಕ್ಷದಿಂದ ಬೆಂಬಲವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಕನ್ನಡ ಚಿತ್ರರಂಗದ ಇವರಿಬ್ಬರಿಗೂ ನನ್ನ ಬೆಂಬಲ ಇಲ್ಲ ಎಂದಿದ್ದಾರೆ ಹಾಗೂ ರಾಜ್ಯಕ್ಕೆ ಒಂದು ಬಲಿಷ್ಠವಾದ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಾನು ಮುಂದುವರೆಯುತ್ತೇನೆ.
ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ವಿಧಾನಸಭೆಯಲ್ಲಿ ಸ್ಪರ್ಧಿಸುವ ಆಸಕ್ತಿ ಇದೆ. ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದಲ್ಲಿ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟು ರಾಜಕೀಯದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಅವರು ಉಪೇಂದ್ರ ಹೇಳಿದರು. ಉಪೇಂದ್ರ ಅವರ ಈ ಹೇಳಿಕೆಯಿಂದ ಹಲವರು ಖುಷಿ ಪಟ್ಟರೆ ಅವರ ಅಭಿಮಾನಿಗಳು ಮಾತ್ರ ಉಪೇಂದ್ರ ಅವರು ಸಿನಿಮಾ ರಂಗ ಬಿಟ್ಟು ಬಿಡುತ್ತಾರಾ ಎಂಬ ಬೇಸರದಲ್ಲಿದ್ದಾರೆ.