ಕಾಂಗ್ರೆಸ್ನ ಎಲ್ಲಾ ನಾಯಕರು ನರಸತ್ತವರು ಎಂದು ಬಿಜೆಪಿಯ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದರೆ, ಕಾಂಗ್ರೆಸ್ನ ಸಂಸದ ಡಿ.ಕೆ.ಸುರೇಶ್ ಅದಕ್ಕೆ ತಿರುಗೇಟು ನೀಡಿ, ಈಶ್ವರಪ್ಪ ಅವರಿಗೆ ತಲೆ ಕೆಟ್ಟಿದೆ ಅವರನ್ನು ನಿಮ್ಹಾನ್ಸ್ ಸೇರಿಸಬೇಕು ಎಂದು ಟಾಂಗ್ ನೀಡುವ ಮೂಲಕ ಉಪಚುನಾವಣಾ ಕಣದಲ್ಲಿ ರಾಜಕೀಯ ವಾಕ್ಸಮರ ತಾರಕಕ್ಕೇರಿದೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರು ಪದೇ ಪದೇ ಮುಂದೆ ಮತ್ತೆ ಸಿಎಂ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಇದನ್ನು ಕೇಳಿಕೊಂಡು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರು ಬಾಯಿ ಮುಚ್ಚಿಕೊಂಡಿದ್ದಾರೆ.
ಲೋಕಸಭೆ ಮತ್ತು ಉಪಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ದಿಕ್ಕು ದೆಸೆಯಿಲ್ಲದಂತೆ ಕಳೆದುಹೋಗುತ್ತವೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ ಬರುತ್ತದೆ. ಮುಖ್ಯಮಂತ್ರಿಯಾಗಿ ಅಧಿಕಾರ ಕಳೆದುಕೊಂಡ ನಂತರ ಸಿದ್ದರಾಮಯ್ಯ ಅವರಿಗೆ ತಲೆ ಕೆಟ್ಟಿದೆ. ಹುಚ್ಚು ಹಿಡಿದಿರುವ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ ಯಾವ ನರ ಕೆಟ್ಟಿದೆ ಎಂದುಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು.
ಇದಕ್ಕೆ ಹುಬ್ಬಳ್ಳಿಯಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್ನ ಸಂಸದ ಡಿ.ಕೆ.ಸುರೇಶ್, ಈಶ್ವರಪ್ಪ ಅವರಿಗೆ ವಯಸ್ಸಾಗಿದೆ. ಆದರೆ ಬುದ್ಧಿ ಬಲಿತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವಂತೆ ಅವರಿಗೆ ತಲೆ ಕೆಟ್ಟಿದೆ. ನಿಮ್ಹಾನ್ಸ್ಗೆ ಕಳುಹಿಸಿ ಪರೀಕ್ಷೆ ಮಾಡಿಸುವ ಅಗತ್ಯವಿದೆ ಎಂದು ಟಾಂಗ್ ನೀಡಿದರು.
ಈಶ್ವರಪ್ಪ ಅವರು ಜೀವನದಲ್ಲಿ ಒಳ್ಳೆಯ ಕೆಲಸಗಳನ್ನೇ ಮಾಡಿಲ್ಲ. ಅವರ ಡಿಕ್ಷಂನರಿಯಲ್ಲಿ ಒಳ್ಳೆಯದು ಎಂಬ ಪದಗಳೇ ಇಲ್ಲ. ರಾಜಕೀಯವಾಗಿ ಹಿರಿಯರಾಗಿದ್ದಾರೆ, ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು.
ಕುಂದಗೋಳದಲ್ಲಿ ಈವರೆಗೂ ಬಿಜೆಪಿಯವರು ಮಾಡಲಾಗದಿರುವ ಒಳ್ಳೆಯ ಕೆಲಸಗಳನ್ನು ಕಾಂಗ್ರೆಸ್ನವರು ಮಾಡಿ ತೋರಿಸಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.