ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ರಚಿಸಲು ರೆಡಿಯಾಗಿದೆ. 353 ಕ್ಷೇತ್ರಗಳಲ್ಲಿ ಗೆದ್ದು ಬೀಗಿರುವ ಮೋದಿ ಪಡೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ರೆಡಿಯಾಗಿದೆ.
ಈ ಬಾರಿಯ ಚುನಾವಣೆ ಭಾರೀ ಕುತೂಹಲವನ್ನು ಹುಟ್ಟು ಹಾಕಿತ್ತು. ಎನ್ ಡಿಎ ಅದರಲ್ಲೂ ಮುಖ್ಯವಾಗಿ ಬಿಜೆಪಿಯೊಂದೇ 303 ಸ್ಥಾನಗಳಲ್ಲಿ ವಿಜಯ ಪತಾಕೆ ಹಾರಿಸಿದೆ.
ಕರ್ನಾಟಕದಲ್ಲಿಯೂ ಬಿಜೆಪಿಯ ನಾಯಕರೇ ನಿರಿಕ್ಷೀಸಿದ ಬಹು ದೊಡ್ಡ ಗೆಲುವು ಸಿಕ್ಕಿದೆ. ಬಿಜೆಪಿ ರಾಜ್ಯದಲ್ಲಿ 22ರವರೆಗೆ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ, ಬರೋಬ್ಬರಿ 25 ಸ್ಥಾನಗಳನ್ನು ಗೆಲ್ಲುವುದರ ಮೂಲಕ ದಾಖಲೆ ನಿರ್ಮಿಸಿದೆ.
ಮುಖ್ಯವಾಗಿ ಮೈತ್ರಿ ಬಳಗದಿಂದ ಜೆಡಿಎಸ್ ಅಭ್ಯರ್ಥಿಯಾಗಿ ತುಮಕೂರಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಹೆಚ್ .ಡಿ ದೇವೇಗೌಡರು ಸೋತಿದ್ದಾರೆ . ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜ್ ಅವರು ಮಾಜಿ ಪ್ರಧಾನಿಯವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ತ್ಯಾಗ ಮಾಡಿ ವಿರೋಧದ ನಡುವೆಯೂ ತುಮಕೂರಲ್ಲಿ ದೇವೇಗೌಡರು ಸ್ಫರ್ಧೆ ಮಾಡಿದ್ದರು.
ದೇವೇಗೌಡರು ಸೋತರು ಸಂಸದರಾಗುತ್ತಾರೆ..! ಪ್ರಜ್ವಲ್ ರೇವಣ್ಣ ತಾವು ಹೇಳಿಕೊಂಡಂತೆ ರಾಜೀನಾಮೆ ಕೊಡುತ್ತಾರೆ. ಅವರ ಸ್ಥಾನಕ್ಕೆ ದೇವೇಗೌಡರು ಸ್ಪರ್ಧಿಸಿ ಗೆದ್ದು ಸಂಸತ್ ಪ್ರವೇಶಿಸುತ್ತಾರೆ ಎಂದುಕೊಂಡಿರಾ? ಆಗಲ್ಲ…ಲೋಕ ಸಮರದಲ್ಲಿ ಸೆಣಸದೇ ದೇವೇಗೌಡರು ಸಂಸದರಾಗಬಹುದು.
ದೇವೇಗೌಡರನ್ನು ರಾಜ್ಯಸಭೆಗೆ ಸರ್ವಾನುಮತದಿಂದ ಆಯ್ಕೆ ಮಾಡುವ ಸಾಧ್ಯತೆ ಇದೆ. ದೇವೇಗೌಡರಂತ ನಾಯಕರ ಅನುಭವ ಬೇಕು. ಹಾಗಾಗಿ ದೇವೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಯಾರೂ ಸಹ ವಿರೋಧ ವ್ಯಕ್ತಪಡಿಸಲ್ಲ. ದೇವೇಗೌಡರು ರಾಜ್ಯ ಸಭೆಗೆ ಆಯ್ಕೆಯಾಗುವ ಮೂಲಕ ಸಂಸದರಾಗುವ ಸಾಧ್ಯತೆ ಇದೆ.
ದೇವೇಗೌಡರು ಮಾತ್ರವಲ್ಲದೆ ರಾಜ್ಯದಲ್ಲಿ ಘಟಾಘಟಿ ಮೈತ್ರಿ ನಾಯಕರುಗಳಾದ , ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮುನಿಯಪ್ಪ, ಧ್ರುವನಾರಾಯಣ್, ಕೃಷ್ಣೇಬೈರೇಗೌಡರು ಸೇರಿದಂತೆ ಅನೇಕರು ಸೋತಿದ್ದಾರೆ. ಕಾಂಗ್ರೆಸ್ ನಿಂದ ಡಿ.ಕೆ ಸುರೇಶ್, ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಮಾತ್ರ ಗೆದ್ದಿದ್ದಾರೆ.