No menu items!
7.8 C
Munich
Thursday, April 30, 2026

80 ವರ್ಷದ ಸುರ್ತಿ ಎಲ್ಲರಿಗೂ ಸ್ಫೂರ್ತಿ

Must read

ಅಬಿದ್ ಸುರ್ತಿ. 80 ವರ್ಷ ವಯೋಮಾನದ ಇವರು, ಮಾಡುವ ಪರಿಸರ, ಜನಮುಖಿ ಕಾರ್ಯ ಎಲ್ಲಾ ವಯೋಮಾನದವರನ್ನು ನಾಚಿಸುವಂತಹದ್ದು. ಪರಿಸರ ಸಂರಕ್ಷಣೆ ಅದಕ್ಕಿಂತ ಹೆಚ್ಚಾಗಿ ಮುಗಿದು ಹೋಗುವ ಸಂಪನ್ಮೂಲ ಎಂದೇ ಕರೆಯುವ ನೀರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇವರು ಜಲ ನಾಯಕ ರೆಂದೇ ಹೆಸರುವಾಸಿ.
ಮುಂಬೈನ ಮೀರಾ ರಸ್ತೆಯ ನಿವಾಸಿ ಅಬಿದ್ ಸುರ್ತಿ, ವೃತ್ತಿಯಲ್ಲಿ ಖ್ಯಾತ ಬರಹಗಾರರು, ವ್ಯಂಗ್ಯ ಚಿತ್ರಕಾರರು ಹೌದು. ಆದರೆ, ಪ್ರವೃತ್ತಿಯಲ್ಲಿ ಪರಿಸರವಾದಿ ಜೊತೆಗೆ ‘ಡ್ರಾಪ್ ಡೆಡ್’ ಪ್ರತಿಷ್ಠಾನದ ಅಧ್ಯಕ್ಷರು ಕೂಡ. ಅಂದರೆ, ಇವರ ಪ್ರತಿಷ್ಠಾನ ಏಕವ್ಯಕ್ತಿಯ ಸ್ವಯಂ ಸೇವಾ ಸಂಸ್ಥೆ. ಇದಕ್ಕೆ ಮತ್ಯಾರು ಪದಾಧಿಕಾರಿಗಳಿಲ್ಲ. ಡ್ರಾಪ್ ಡೆಡ್ ಮೂಲಕ ಈವೆರೆಗೂ ಸಾವಿರಾರು ಮಿಲಿಯನ್ ಲೀಟರ್ ನಷ್ಟು ವ್ಯರ್ಥ ನೀರನ್ನು ರಕ್ಷಿಸಿದ್ದಾರೆ.


ಮೂಲತಃ ಗುಜರಾತಿನ ಮೂಲದ ಅಬಿದ್ ಸುರ್ತಿ ಕುಟುಂಬ ಬಹಳ ವರ್ಷಗಳ ಹಿಂದೆಯೇ ವಾಣಿಜ್ಯನಗರಿ ಮುಂಬೈಗೆ ಬಂದು ನೆಲೆಸಿತಂತೆ. ಅಬಿದ್ ಸುರ್ತಿ ಅವರ ಬಗ್ಗೆ ಹೇಳಬೇಕೆಂದರೆ, 80ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲ ಏಳು ನಾಟಕಗಳನ್ನೂ ರಚಿಸಿದ್ದಾರೆ. ದೇಶ-ವಿದೇಶಗಳಲ್ಲೂ 16ಕ್ಕೂ ಹೆಚ್ಚು ವರ್ಣಚಿತ್ರಗಳ ಪ್ರದರ್ಶನಗಳನ್ನು ಆಯೋಜಿಸಿ ಅಪಾರ ಜನಮೆಚ್ಚುಗೆ ಗಳಿಸಿದ್ದಾರೆ. ಇನ್ನು 1993ರಲ್ಲೇ ವೈವಿದ್ಯಮಯ ಕಲಾಸೇವೆಗೆ ರಾಷ್ಟ್ರೀಯ ಪುರಸ್ಕಾರ ಕೂಡ ಲಭಿಸಿದೆ.
ಇನ್ನು ಅಬಿದ್ ಸುರ್ತಿ ಅವರು ಬರವಣೆಗೆ ಮತ್ತು ವ್ಯಂಗ್ಯಚಿತ್ರಗಳ ಮೂಲಕ ಪ್ರಖ್ಯಾತಿ ಆಗುವುದಕ್ಕಿಂತಲೂ ಹೆಚ್ಚಾಗಿ ನೀರಿನ ಬಳಕೆ ಮತ್ತು ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಕಾರ್ಯವನ್ನು 80ರ ವಯಸ್ಸಿನಲ್ಲೂ ಮುಂದುವರಿಸಿಕೊಂಡು ಬರುತ್ತಿರುವುದು ಇವರ ಸಾಧನೆಯೇ ಸರಿ. ಅಂದರೆ, ಸುರ್ತಿಯವರು ನೀರಿನ ಉಳಿತಾಯದ ಬಗ್ಗೆ ಪುಕಟ್ಟೆ ಭಾಷಣ ಮಾಡುವವರಲ್ಲ, ತಾವೇ ಸ್ವತಃ ಪ್ರತಿ ಮನೆಗಳಿಗೆ ಹೋಗಿ ವ್ಯರ್ಥವಾಗುವ ನೀರಿನ ಉಳಿಸುವ ಬಗ್ಗೆ ಜನರಿಗೆ ತಿಳಿಸಿ ಹೇಳಿಬರುತ್ತಾರೆ.


ಅಬಿದ್ ಸುರ್ತಿ ಅವರು 2007ರಲ್ಲಿ ಡ್ರಾಪ್ ಡೆಡ್ ಸಂಸ್ಥೆ ಯನ್ನು ಹುಟ್ಟು ಹಾಕಿದ್ದಾರೆ. ಅಂದಿನಿಂದ ಪ್ರತಿಭಾನುವಾರ ಮುಂಬೈನಲ್ಲಿ ಪ್ರತಿ ಮನೆ ಮನೆಗಳಿಗೆ ತೆರಳಿ ಪ್ಲಂಬರ್ ಗಳನ್ನು ಕರೆದುಕೊಂಡು ಹೋಗಿ ಕೊಳಾಯಿ ನಲ್ಲಿಗಳನ್ನು ರಿಪೇರಿ ಮಾಡಿ ಸೋರುತ್ತಿರುವ ನೀರನ್ನು ತಡೆದಿದ್ದಾರೆ. 2007ರಿಂದ ಫೆಬ್ರವರಿ 2008ರ ವೇಳೆಗೆ ಕೇವಲ ಒಂದು ವರ್ಷದಲ್ಲಿ 1600 ಮನೆಗಳಿಗೆ ತೆರಳಿ ನಲ್ಲಿಗಳನ್ನು ರಿಪೇರಿ ಮಾಡಿದಲ್ಲದೆ, 6 ಮಿಲಿಯನ್ ಲೀಟರ್ ನಷ್ಟು ಸೋರಿ ಹೋಗುತ್ತಿದ್ದ ನೀರನ್ನು ಉಳಿಸಿದ್ದಾರೆ.
ಅಬಿದ್ ಸುರ್ತಿಯವರು, ಇಂದಿಗೂ ತಮ್ಮ ಜಾಗೃತಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ಘನಕಾರ್ಯಕ್ಕಾಗಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ. ಅವರು 2025ರ ವೇಳೆಗೆ ವಿಶ್ವದ 40 ರಾಷ್ಟ್ರಗಳಲ್ಲಿ ನೀರಿಗಾಗಿ ದೊಡ್ಡ ಯುದ್ಧ ನಡೆಯಲಿದೆ ಎಂದು ಹೇಳಿದ್ದಾರೆ. ಹಾಗಾಗಿ, ನೀರನ್ನು ಬಳಸಿ, ಆದರೆ ವ್ಯರ್ಥಮಾಡಬೇಡಿ ಎನ್ನುವುದು ಅವರ ಕಳಕಳಿ. ಆ ದಿಸೆಯಲ್ಲಿ ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಜನರಿಗೆ ‘ಡ್ರಾಪ್ ಡೆಡ್ ’ ಕಾರ್ಯನಿರ್ವಹಿಸುತ್ತಿದೆ.
ಬಾಲ್ಯದಲ್ಲಿ ತಮ್ಮ ತಾಯಿ ಒಂದು ಬಕೆಟ್ ನೀರಿಗಾಗಿ ನಾಲ್ಕು ತಾಸು ಕಾಯ್ದ ಸನ್ನಿವೇಶವನ್ನು ನೆನೆಸಿಕೊಂಡು ಅಬಿದ್ ಸುರ್ತಿಯವರು, ಇಂದು ಮಿಲಿಯನ್ ಲೀಟರ್ ನಷ್ಟು ಕೊಳಾಯಿಗಳಲ್ಲಿ ವ್ಯರ್ಥವಾಗಿ ಹೋಗುವ ನೀರನ್ನು ಉಳಿಸುವ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article