ಕನ್ನಡಿಗ ರಾಹುಲ್ ಗೆ ಮತ್ತೆ ನಿರಾಸೆ..!

Date:

ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಟೆಸ್ಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಸರ್ವಪತನ ಕಂಡಿದ್ದ ಭಾರತ ತಂಡ ಅಂತಿಮವಾಗಿ 8 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ಮೆಲ್ಬೋರ್ನ್‌ನಲ್ಲಿ ಶನಿವಾರದಿಂದ ಆರಂಭವಾಗುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯಕ್ಕೆ ಟೀಮ್‌ಇಂಡಿಯಾ ಅಂತಿಮ 11 ಆಟಗಾರರನ್ನು ಪ್ರಕಟಿಸಿದ್ದು, ಶುಭಮನ್‌ ಗಿಲ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ಒಂದು ಕಡೆ ಮೊದಲ ಹಣಾಹಣಿಯ ಹೀನಾಯ ಸೋಲು, ಮತ್ತೊಂದು ಕಡೆ ವಿರಾಟ್‌ ಕೊಹ್ಲಿ ಹಾಗೂ ಮೊಹಮ್ಮದ್‌ ಶಮಿ ಅನುಪಸ್ಥಿತಿ ಟೀಮ್‌ ಇಂಡಿಯಾಗೆ ಬಹುವಾಗಿ ಕಾಡುತ್ತಿದೆ. ಇದರ ನಡುವೆಯೂ ತಂಡದ ಜವಾಬ್ದಾರಿ ಹೊತ್ತಿರುವ ಅಜಿಂಕ್ಯ ರಹಾನೆ, ಭಾರತ ತಂಡದ ಅಂತಿಮ 11ರಲ್ಲಿ ಹಲವು ಬದಲಾವಣೆ ಮಾಡಿಕೊಂಡು ಶನಿವಾರ ಕಣಕ್ಕೆ ಇಳಿಯುತ್ತಿದ್ದಾರೆ.

ಮೊದಲ ಪಂದ್ಯದ ಹೀನಾಯ ಸೋಲಿನ ಬೆನ್ನಲ್ಲೆ ಮಾಜಿ ಆಟಗಾರರು ಮೆಲ್ಬೋರ್ನ್‌ ಟೆಸ್ಟ್‌ಗೆ ಭಾರತ ತಂಡದ ಅಂತಿಮ 11ರಲ್ಲಿ ಹಲವು ಬದಲಾವಣೆಗಳನ್ನು ಸೂಚಿಸಿದ್ದರು. ಅದರಂತೆ, ಟೀಮ್‌ ಮ್ಯಾನೇಜ್‌ಮೆಂಟ್‌ ಪೃಥ್ವಿ ಶಾ ಬದಲು ಶುಭಮನ್‌ ಗಿಲ್‌ , ಗಾಯಾಳು ಮೊಹಮ್ಮದ್ ಶಮಿ ಬದಲು ಮೊಹಮ್ಮದ್‌ ಸಿರಾಜ್‌ಗೆ ‌ಶನಿವಾರದ ಪಂದ್ಯಕ್ಕೆ ಅಂತಿಮ 11ರಲ್ಲಿ ಅವಕಾಶ ನೀಡಿದೆ. ಅಲ್ಲದೆ, ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಮರಳಿದ್ದು, ವೃದ್ದಿಮಾನ್‌ ಸಹಾ ಬದಲು ರಿಷಭ್‌ ಪಂತ್‌ಗೆ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ನೀಡಲಾಗಿದೆ.
ಆಸ್ಟ್ರೇಲಿಯಾದಲ್ಲಿ ಸೀಮಿತ ಓವರ್‌ಗಳ ಸರಣಿಯಲ್ಲಿ ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಉತ್ತಮ ಪ್ರದರ್ಶನ ತೋರಿದ್ದರು ಹಾಗೂ ಟೆಸ್ಟ್‌ ಸರಣಿಗೂ ಮುನ್ನ ನಡೆದಿದ್ದ ಅಭ್ಯಾಸ ಪಂದ್ಯಗಳಲ್ಲಿ ಪೃಥ್ವಿ ಶಾಗಿಂತ ಪಂಜಾಬ್‌ ಮೂಲದ ಆಟಗಾರ ಉತ್ತಮ ಬ್ಯಾಟಿಂಗ್‌ ಮಾಡಿದ್ದರು. ಅಡಿಲೇಡ್‌ ಟೆಸ್ಟ್‌ಗೆ ಅವಕಾಶ ಪಡೆದಿದ್ದ ಪೃಥ್ವಿ ಶಾ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಎರಡೂ ಇನಿಂಗ್ಸ್‌ಗಳಲ್ಲಿ ಮಿಚೆಲ್‌ ಸ್ಟಾರ್ಕ್‌ ಹಾಗೂ ಪ್ಯಾಟ್‌ ಕಮಿನ್ಸ್‌ಗೆ ಕ್ರಮವಾಗಿ ಕ್ಲೀನ್‌ ಬೌಲ್ಡ್‌ ಆಗಿದ್ದರು. ಈ ಹಿನ್ನೆಲೆಯಲ್ಲಿ ಗಿಲ್‌, ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಅವಕಾಶ ಪಡೆದುಕೊಂಡಿದ್ದು, ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ.
2018-19ರ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಯಾಂಕ್‌ ಅಗರ್ವಾಲ್‌ ಗಮನಾರ್ಹ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅಡಿಲೇಡ್‌ ಟೆಸ್ಟ್‌ನಲ್ಲಿ ಆಡಿದ್ದ ಮಯಾಂಕ್‌, ಆಸೀಸ್‌ ಬೌಲರ್‌ಗಳ ಎದುರು ತಿಣುಕಾಡಿದ್ದರು. ಆದರೂ, ಎರಡನೇ ಟೆಸ್ಟ್‌ಗೆ ಮತ್ತೊಂದು ಅವಕಾಶವನ್ನು ನಿರೀಕ್ಷೆಯಂತೆ ಕರ್ನಾಟಕದ ಬ್ಯಾಟ್ಸ್‌ಮನ್‌ ಪಡೆದುಕೊಂಡಿದ್ದಾರೆ. ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಒಂದು ತುದಿಯಲ್ಲಿ ಮಯಾಂಕ್‌ ಗಟ್ಟಿಯಾಗಿ ನಿಂತರೆ ಖಂಡಿತಾ ಭಾರತಕ್ಕೆ ಉತ್ತಮ ಆರಂಭ ದೊರೆಯಲಿದೆ.
ಡೇ-ನೈಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ 43 ರನ್‌ ಗಳಿಸಿ ಉತ್ತಮ ಆರಂಭ ಪಡೆದುಕೊಂಡಿದ್ದರು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಪ್ಯಾಟ್‌ ಕಮಿನ್ಸ್‌ಗೆ ಶೂನ್ಯಕ್ಕೆ ವಿಕೆಟ್‌ ಒಪ್ಪಿಸುವ ಮೂಲಕ ತೀವ್ರ ನಿರಾಸೆ ಮೂಡಿಸಿದ್ದರು. ಆದರೆ, ಮೊದಲ ಪಂದ್ಯದಲ್ಲಿ ಮಾಡಿದ್ದ ತಪ್ಪನ್ನು ತಿದ್ದಿಕೊಂಡ ಪೂಜಾರ ಮೆಲ್ಬೋರ್ನ್‌ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ. ಈಗಾಗಲೇ ಅಭ್ಯಾಸ ಶುರು ಮಾಡಿರುವ ಅವರು ರಕ್ಷಣಾತ್ಮಕ ಆಟದ ಮೇಲೆ ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ. ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಭಾರತಕ್ಕೆ ಪೂಜಾರ ಕೀ ಆಟಗಾರರಾಗಿದ್ದಾರೆ.
ಪಿತೃತ್ವ ರಜೆ ಪಡೆದು ತವರಿಗೆ ಮರಳಿರುವ ವಿರಾಟ್‌ ಕೊಹ್ಲಿ ಬದಲು ಇನ್ನುಳಿದ ಮೂರು ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅಜಿಂಕ್ಯ ರಹಾನೆ ಪಡೆದುಕೊಂಡಿದ್ದಾರೆ. ಅಡಿಲೇಡ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 42 ರನ್‌ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ರಹಾನೆ ಔಟ್‌ ಆಗಿದ್ದರು. ಆದರೆ, ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಇವರು ಫಾರ್ಮ್‌ಗೆ ಬರಲಿದ್ದಾರೆಂಬ ಭರವಸೆಯನ್ನು ಟೀಮ್‌ ಮ್ಯಾನೇಜ್‌ಮೆಂಟ್‌ ಹೊಂದಿದೆ. ಅಲ್ಲದೆ, ನಾಯಕತ್ವದ ಜತೆಗೆ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಲೇಬೇಕಾದ ಅನಿರ್ವಾಯತೆ ಇರುವುದರಿಂದ ರಹಾನೆ ಮೇಲೆ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರಿ ಒತ್ತಡವಿದೆ.
ನಿಯಮಿತ ನಾಯಕ ವಿರಾಟ್‌ ಕೊಹ್ಲಿ ಪಿತೃತ್ವ ರಜೆಯ ಮೇಲೆ ತವರಿಗೆ ಮರಳಿದ್ದು, ಅವರ ಬ್ಯಾಟಿಂಗ್‌ ನಾಲ್ಕನೇ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಆಡಿದರೆ, ಐದನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಹನುಮ ವಿಹಾರಿ ಆಡಲಿದ್ದಾರೆ. ಅದ್ಭುತ ಲಯದಲ್ಲಿದ್ದ ಕೆ.ಎಲ್‌ ರಾಹುಲ್‌ ಅವರಿಗೆ ಮತ್ತೇ ನಿರಾಸೆಯಾಗಿದೆ. ರವೀಂದ್ರ ಜಡೇಜಾ ಅಂತಿಮ 11ಕ್ಕೆ ಮರಳಿದ ಹಿನ್ನೆಲೆಯಲ್ಲಿ ಕರ್ನಾಟಕ ಬ್ಯಾಟ್ಸ್‌ಮನ್‌ಗೆ ಅವಕಾಶ ಸಿಗಲಿಲ್ಲ. ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ ಹೊರತಾಗಿಯೂ ವಿಹಾರಿ ಮತ್ತೊಂದು ಅವಕಾಶವನ್ನು ಪಡೆದುಕೊಂಡಿದ್ದಾರೆ.

ಸೀಮಿತ ಓವರ್‌ಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳಿಗೆ ಬೆಂಡೆತ್ತಿದ್ದ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ, ಮೊದಲನೇ ಟಿ20 ಪಂದ್ಯದಲ್ಲಿ ಮಿಚೆಲ್‌ ಸ್ಟಾರ್ಕ್‌ ಎಸೆತದಲ್ಲಿ ತಲೆಗೆ ಚೆಂಡು ತಗುಲಿಸಿಕೊಂಡು ಕನ್ಕಷನ್‌ಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದರು. ಆದರೆ, ಬುಧವಾರ ನೆಟ್ಸ್‌ನಲ್ಲಿ ದೀರ್ಘಾವಧಿ ಅಭ್ಯಾಸ ನಡೆಸಿದ್ದ ಜಡೇಜಾ ಸಂಪೂರ್ಣ ಫಿಟ್‌ ಇರುವುದಾಗಿ ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅಂತಿಮ 11ಕ್ಕೆ ಅವಕಾಶವನ್ನು ಪಡೆದುಕೊಂಡಿದ್ದಾರೆ. ಜಡೇಜಾ ಅಂತಿಮ 11ಕ್ಕೆ ಬಂದಿದ್ದರಿಂದ ರಾಹುಲ್‌ ಅವಕಾಶ ವಂಚಿತರಾದರು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...