ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಮಂಗಳವಾರ (ಫೆ.16) ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲರೂ ಸೋಶಿಯಲ್ ಮೀಡಿಯಾ ಮೂಲಕವೇ ಶುಭ ಕೋರುತ್ತಿದ್ದಾರೆ. ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ‘ಡಿ ಬಾಸ್’ ಮನೆ ಎದುರು ಜಾತ್ರೆಯ ವಾತಾವರಣ ನಿರ್ಮಾಣ ಆಗಿರುತ್ತಿತ್ತು. ಆದರೆ ಅದಕ್ಕೆ ಈ ಬಾರಿ ಬ್ರೇಕ್ ಬಿದ್ದಿದೆ.
ಕೋವಿಡ್-19 ಇರುವುದರಿಂದ ಮನೆ ಬಳಿ ಯಾರೂ ಬರುವುದು ಬೇಡ ಎಂದು ದರ್ಶನ್ ಈಗಾಗಲೇ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಅವರ ಮನೆ ಎದುರು ಕೂಡ ಈ ಬಗ್ಗೆ ಸೂಚನೆ ನೀಡುವಂತಹ ಬ್ಯಾನರ್ ಹಾಕಲಾಗಿದೆ. ‘ಕೊರೊನಾ ವೈರಸ್ ಇರುವುದರಿಂದ ಈ ವರ್ಷ ಹುಟ್ಟುಹಬ್ಬದ ಸಂಭ್ರಮಾಚರಣೆ ಬೇಡ ಎಂದು ನಿರ್ಧರಿಸಿದ್ದೇನೆ. ನಾನು ಊರಿನಲ್ಲಿ ಇರುವುದಿಲ್ಲ. ಯಾರೂ ಮನೆಯ ಹತ್ತಿರ ಬಂದು ನಿರಾಶರಾಗಬೇಡಿ. ದಯಮಾಡಿ ನನ್ನ ಈ ಕೋರಿಕೆಯನ್ನು ಈಡೇರಿಸಿಕೊಡಿ’ ಎಂದು ದರ್ಶನ್ ಈ ಮೂಲಕ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹುಟ್ಟುಹಬ್ಬದ ಸಂಭ್ರಮ ಕಳೆಕಟ್ಟಿದೆ. ಕಾಮನ್ ಡಿಪಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ದರ್ಶನ್ಗೆ ಶುಭಾಶಯ ಕೋರುತ್ತಿದ್ದಾರೆ. ಚಿತ್ರರಂಗದ ಹಲವು ಗಣ್ಯರಿಂದ ಡಿ ಬಾಸ್ಗೆ ಶುಭಾಶಯ ಹರಿದುಬರುತ್ತಿದೆ. ಪುನೀತ್ ರಾಜ್ಕುಮಾರ್, ಶ್ರೀಮುರಳಿ, ಬಿ. ಶ್ರೀರಾಮುಲು ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ. ಬರ್ತ್ಡೇ ಪ್ರಯುಕ್ತ ‘ರಾಬರ್ಟ್’ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ.
ನಟಿ, ಕಾಂಗ್ರೆಸ್ ಪಕ್ಷ ಸದಸ್ಯೆ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾರೆ. ಭಾರತದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಹೋರಾಟಗಾರ್ತಿ ಗ್ರೆಟಾ ಥೆನ್ಬರ್ಗ್ ಬಗ್ಗೆ ಟ್ವೀಟ್ ಮಾಡಿದ್ದಾರೆ ರಮ್ಯಾ.
ಗ್ರೆಟಾ ಮಾಡಿದ್ದ ಟ್ವೀಟ್ ಅನ್ನು ಹಂಚಿಕೊಂಡಿರುವ ನಟಿ ರಮ್ಯಾ, ‘ಬಾಲಿವುಡ್ಗಿಂತಲೂ ಹೆಚ್ಚು ಬೆನ್ನುಮೂಳೆ ಇದೆ’ ಎಂದಿದ್ದಾರೆ ರಮ್ಯಾ. ಆ ಮೂಲಕ ಬಾಲಿವುಡ್ನ ಹಲವರಿಗೆ ಆತ್ಮಗೌರವ ಇಲ್ಲ, ಪುಕ್ಕಲರು ಎಂದು ಪರೋಕ್ಷವಾಗಿ ಹೇಳಿದ್ದಾರೆ ನಟಿ ರಮ್ಯಾ.
ಅದಾದ ಬಳಿಕ ನಟ ಅಕ್ಷಯ್ ಕುಮಾರ್ ಗೆ ಪ್ರಶ್ನೆ ಮಾಡಿರುವ ರಮ್ಯಾ, ‘ಕೆನೆಡಿಯನ್ ಪ್ರಜೆ ಅಕ್ಷಯ್ ಕುಮಾರ್, ಭಾರತದ ವಿಷಯದ ಬಗ್ಗೆ ಮಾತನಾಡಬಹುದಾದರೆ, ರಿಹಾನ್ನ ಏಕೆ ಮಾತನಾಡಬಾರದು’ ಎಂದು ಪ್ರಶ್ನೆ ಮಾಡಿದ್ದಾರೆ.
ದೆಹಲಿ ರೈತ ಪ್ರತಿಭಟನೆಗೆ ಸಾಮಾಜಿಕ ಹೋರಾಟಗಾರ್ತಿ ಗ್ರೆಟಾ ಥೆನ್ಬರ್ಗ್ ಬೆಂಬಲ ಸೂಚಿಸಿದ್ದರು. ಇದೇ ಕಾರಣಕ್ಕೆ ದೆಹಲಿಯಲ್ಲಿ ಗ್ರೆಟಾ ವಿರುದ್ಧ ದೂರು ದಾಖಲಾಗಿತ್ತು. ಅದರ ನಂತರ ಮತ್ತೆ ಟ್ವೀಟ್ ಮಾಡಿದ್ದ ಗ್ರೆಟಾ, ‘ಈಗಲೂ ನಾನು ರೈತರ ಪ್ರತಿಭಟನೆ ಪರ ಇದ್ದೇನೆ ಮತ್ತು ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ. ನೀವು ಎಷ್ಟೇ ದ್ವೇಷಿಸಿದರೂ, ಮಾನವ ಹಕ್ಕು ಉಲ್ಲಂಘನೆ ಮಾಡಿದರೂ ನನ್ನ ನಿರ್ಧಾರ ಬದಲಾಗುವುದಿಲ್ಲ’ ಎಂದಿದ್ದಾರೆ ಗ್ರೆಟಾ.
ಗ್ರೆಟಾ ಥೆನ್ಬರ್ಗ್ ಹಾಗೂ ಪಾಪ್ ಗಾಯಕಿ ರಿಹಾನ್ನ ಅವರುಗಳು ದೆಹಲಿ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಬೆನ್ನಲ್ಲೇ, ಬಾಲಿವುಡ್ನ ಹಲವು ನಟರು, ಕ್ರಿಕೆಟ್ ಸ್ಟಾರ್ಗಳು ‘ಹೊರಗಿನವರು ಭಾರತದ ವಿಷಯದಲ್ಲಿ ಮೂಗು ತೂರಿಸಬಾರದು’ ಎಂಬರ್ಥ ಬರುವ ಸರಣಿ ಟ್ವೀಟ್ಗಳನ್ನು ಮಾಡಿದ್ದರು. ಇದು ಭಾರಿ ಟ್ರೋಲ್ಗೆ ಗುರಿಯಾಗಿತ್ತು. ಇದೇ ಕಾರಣಕ್ಕೆ ನಟಿ ರಮ್ಯಾ, ‘ಬಾಲಿವುಡ್ ಪುಕ್ಕಲು’ ಎಂದು ಹೇಳಿರುವುದು.
ಈ ಹಿಂದೆ ನಟಿ ರಮ್ಯಾ ಡಿಸೆಂಬರ್ 23 ರಂದು ರೈತರ ಪ್ರತಿಭಟನೆ ಬೆಂಬಲಿಸಿ ಒಂದು ಹೊತ್ತಿನ ಊಟ ತ್ಯಜಿಸಿದ್ದರು. ರೈತರ ಹೋರಾಟದ ವಿಷಯವಾಗಿ ನಟಿ ಕಂಗನಾ ರಣೌತ್ಗೂ ಟ್ವಿಟ್ಟರ್ನಲ್ಲಿ ಪ್ರಶ್ನೆಗಳನ್ನು ಕೇಳಿದ್ದರು ರಮ್ಯಾ. ಅದಕ್ಕೂ ಮುನ್ನಾ ಹತ್ರಾಸ್ ಅತ್ಯಾಚಾರ ಪ್ರಶ್ನಿಸಿ ನಟ ಅಕ್ಷಯ್ ಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದರು.
ನಟಿ ರಮ್ಯಾ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಹಿಂದೆ ಕಾಂಗ್ರೆಸ್ನಿಂದ ಸಂಸದೆಯಾಗಿಯೂ ಆಯ್ಕೆ ಆಗಿದ್ದರು. ಆದರೆ ಕಳೆದ ಲೋಕಸಭೆ ಚುನಾವಣೆ ನಂತರ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ ರಮ್ಯಾ.