ರಾಜ್ಯದ ಹಿಂದುಳಿದ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಹೊಸ ವಿಶ್ವವಿದ್ಯಾಲಯ ತಲೆ ಎತ್ತಲಿದೆ. ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಬೇಕೆಂಬುದು ಜಿಲ್ಲೆಯ ಶಿಕ್ಷಣ ತಜ್ಞರ, ವಿದ್ಯಾರ್ಥಿಗಳ, ಶಿಕ್ಷಕ ವೃಂದದ ಬಹುವರ್ಷಗಳ ಕನಸಾಗಿತ್ತು.
ಇದೀಗ ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದೆ. ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಪ್ರತ್ಯೇಕ ವಿವಿಯ ಕನಸು ನನಸಾಗುವ ದಿನ ಹತ್ತಿರವಾಗಿದೆ.
ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಹೇಮಂತ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಇನ್ನು 15 ದಿನಗಳಲ್ಲಿ ಸರ್ಕಾರಕ್ಕೆ ವರದಿ ನೀಡುವ ಸಾಧ್ಯತೆ ಇದೆ. ಸಮಿತಿ ಸದಸ್ಯರು ನಾಳೆ (ಗುರುವಾರ) ಮೊದಲ ಬಾರಿಗೆ ಸಭೆ ಸೇರಿ ಈ ವಿಚಾರವಾಗಿ ಚರ್ಚಿಸಲಿದ್ದಾರೆ.
ಈಗಾಗಲೇ ಚಾಮರಾಜನಗರದ ಹೊರವಲಯದ ಬೇಡರಪುರದಲ್ಲಿ ಮೈಸೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. 2010-11ರಲ್ಲಿ ಸ್ಥಾಪನೆಯಾದ ಈ ಕೇಂದ್ರದಲ್ಲಿ 10 ಸ್ನಾತಕೋತ್ತರ ಕೋರ್ಸ್ಗಳು ಲಭ್ಯವಿದೆ. ಈ ವರ್ಷದಿಂದ ಎಂಬಿಎ ಕೋರ್ಸ್ ಕೂಡ ಆರಂಭವಾಗಲಿದೆ.
ಇಂಗ್ಲಿಷ್ ಕೋರ್ಸ್ ಆರಂಭಿಸುವ ಪ್ರಯತ್ನಗಳೂ ನಡೆಯುತ್ತಿವೆ. ಸುಮಾರು 55 ಎಕರೆ ಪ್ರದೇಶವನ್ನು ಹೊಂದಿರುವ ಸ್ನಾತಕೋತ್ತರ ಕೇಂದ್ರದ ಆವರಣವನ್ನೇ ಕೇಂದ್ರವಾಗಿಟ್ಟುಕೊಂಡು, ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಕಾರ್ಯಸಾಧುವೇ ಎಂಬುದರ ಬಗ್ಗೆ ತಜ್ಞರ ಸಮಿತಿ ಅಧ್ಯಯನ ನಡೆಸಲಿದ್ದು, ಶೀಘ್ರದಲ್ಲಿ ಈ ಕ್ಯಾಂಪಸ್ಗೂ ಭೇಟಿ ನೀಡಲಿದೆ.
ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಷಿ ಅವರು ತಜ್ಞರ ಸಮಿತಿಯ ಸಂಚಾಲಕರಾಗಿದ್ದಾರೆ. ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ವಿ.ಜಿ. ತಳವಾರ್, ಬೆಂಗಳೂರು ಉತ್ತರ ವಿವಿ ಕುಲಪತಿ ಕೆಂಪರಾಜು ಸದಸ್ಯರಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಡಾ. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಆರಂಭಗೊಂಡಾಗಲೇ ಪ್ರತ್ಯೇಕ ವಿವಿಯ ಬೇಡಿಕೆ ಕೇಳಿ ಬಂದಿತ್ತು. ದಶಕದ ನಂತರವಾದರೂ ಸರ್ಕಾರ ಈ ಬೇಡಿಕೆ ಈಡೇರಿಕೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಇದರಿಂದಾಗಿ ಜಿಲ್ಲೆಯ ಯುವ ಜನಾಂಗಕ್ಕೆ ಉನ್ನತ ಶಿಕ್ಷಣ ಪಡೆಯುವ ಅವಕಾಶಗಳು ಹೆಚ್ಚಾಗಿವೆ.