ಬೆಂಗಳೂರು:- ಬೆಂಗಳೂರಿನಂತಹ ಮಾಯಾನಗರಿಯ ಒಂದು ಪ್ರದೇಶದಲ್ಲಿ ಕಳೆದ 21 ಗಂಟೆಯಿಂದ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡಿರುವಂತಹ ಘಟನೆ ನಡೆದಿದೆ.
ನಾಗರಬಾವಿಯ ವಿನಾಯಕ ಲೇಔಟ್ ಸುತ್ತಮುತ್ತ ನಿನ್ನೆ ರಾತ್ರಿಯಿಂದ ವಿದ್ಯುತ್ ಸ್ಥಗಿತವಾಗಿದ್ದು, ನಿವಾಸಿಗಳು ತೀವ್ರ ಪರದಾಡಿದ್ದಾರೆ. ಸತತ 21 ಗಂಟೆಯಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ನಿವಾಸಿಗಳು ಪರದಾಡಿದ್ದಾರೆ.
ಸೂಚನೆ ಇಲ್ಲದೆ ವಿದ್ಯುತ್ ಸ್ಥಗಿತದಿಂದ ನಿವಾಸಿಗಳು ಕಂಗಾಲಾಗಿದ್ದು, ಪ್ರಶ್ನಿಸಿದರೆ ಲೈನ್ ದುರಸ್ತಿ ಕಾರ್ಯದ ನೆಪ ಹೇಳುತ್ತಿದ್ದಾರೆ ಬೆಸ್ಕಾಂ ಅಧಿಕಾರಿಗಳು. ಹೀಗಾಗಿ ಸದ್ಯ ಅಧಿಕಾರಿಗಳ ಈ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಟಿಬಿಟಿ ಸಿಟಿ ಬೆಂಗಳೂರಿನಲ್ಲಿ ಸರಿಯಾದ ರಸ್ತೆಗಳು ಇಲ್ಲ. ಒಂದು ದೊಡ್ಡ ಮಳೆಯಾದರೆ ಸಾಕು ರಸ್ತೆಗಳೆಲ್ಲ ಕೆರೆಗಳಂತೆ ಕಾಣುತ್ತವೆ. ಈ ನಡುವೆ ವಿದ್ಯುತ್ ಸ್ಥಗಿತದಿಂದ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ವಿದ್ಯುತ್ ಸ್ಥಗಿತದ ಬಗ್ಗೆ ಮುನ್ಸೂಚನೆ ನೀಡಿಲ್ಲವೆಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ವಿದ್ಯುತ್ ಮೂಲಸೌಕರ್ಯ ನವೀಕರಣ, ಟ್ರಾನ್ಸ್ಫಾರ್ಮರ್ ರಿಪೇರಿ ಮತ್ತು ನಿರ್ವಹಣೆ ಕೆಲಸಗಳು ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ಹಲವೆಡೆ ವಿದ್ಯುತ್ ವ್ಯತ್ಯ ಉಂಟಾಗಲಿದೆ ಎಂದು ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ ತಿಳಿಸಿತ್ತು.
ಹೆಚ್ಬಿಆರ್ ಸುತ್ತಮುತ್ತ ಇಂದು ಬೆಳಗ್ಗೆ 10.30 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಹಾಗೂ ರೆಸಿಡೆನ್ಸಿ ರಸ್ತೆ ಸುತ್ತಮುತ್ತ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.