ನಾಳೆ ಮೈಸೂರಿನಲ್ಲಿ ಎಸ್ಎಲ್ ಭೈರಪ್ಪ ಅಂತ್ಯಕ್ರಿಯೆ
ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್.ಎಲ್ ಭೈರಪ್ಪ ಅವರು ನಿನ್ನೆ ವಿಧಿವಶರಾಗಿದ್ದಾರೆ. ಈ ಸಂಬಂಧ ರಾಜ್ಯದೆಲ್ಲೆಡೆ ಸಾಹಿತ್ಯಾಸಕ್ತರು, ಗಣ್ಯರು ಅವರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಸದ್ಯ ಇಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪನವರ ಪಾರ್ಥೀವ ಶರೀರ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಮಧ್ಯಾಹ್ನ 1 ಗಂಟೆ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ರವಾನೆ ಮಾಡಲಾಗುತ್ತದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಪಾರ್ಥೀವ ಶರೀರ ಮೈಸೂರು ತಲುಪಲಿದೆ. ಬಳಿಕ ಮೈಸೂರು ಕಲಾಮಂದಿರದ ಮುಂಭಾಗ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು,
ಬಳಿಕ ಕೋಲ್ಡ್ ಸ್ಟೋರೆಜ್ನಲ್ಲಿ ಇಡಲಾಗುತ್ತೆ. ಸೆ.26ರಂದು ಶುಕ್ರವಾರ ಬೆಳಗ್ಗೆ ಕುವೆಂಪುನಗರದಲ್ಲಿರುವ ಭೈರಪ್ಪ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗುತ್ತದೆ. ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಗುತ್ತದೆ. ಸದ್ಯ ಭೈರಪ್ಪ ಅವರ ಪುತ್ರ ರವಿಶಂಕರ್ ಲಂಡನ್ ನಿಂದ ಆಗಮಿಸುತ್ತಿದ್ದಾರೆ.
ಈ ದೇಶಕಂಡ ಖ್ಯಾತ ಕಾದಂಬರಿಕಾರ, ಸರಸ್ವತಿ ಸನ್ಮಾನ್ ಪ್ರಶಸ್ತಿ ವಿಜೇತ ಕನ್ನಡ ಸಾಹಿತ್ಯ ಲೋಕದ ಪರ್ವ ಡಾ.ಎಸ್.ಎಲ್ ಭೈರಪ್ಪನವರ ಯುಗಾಂತ್ಯವಾಗಿದೆ. ತಮ್ಮ ಕಾದಂಬರಿಗಳಿಂದಲೇ ಮನೆಮನಗಳಲ್ಲಿ ಅಚ್ಚಳಿಯದೇ ಉಳಿದಿದ್ದ ಚೈತನ್ಯದ ಚಿಲುಮೆ ಡಾ. ಎಸ್ ಎಲ್ ಭೈರಪ್ಪನವರು ಬಾರದ ಲೋಕಕ್ಕೆ ತೆರಳಿದ್ದಾರೆ,
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪನವರು ನಿನ್ನೆ ವಿಧಿವಶರಾಗಿದ್ದಾರೆ, 94 ವರ್ಷದ ಡಾ.ಎಸ್.ಎಲ್ ಭೈರಪ್ಪನವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ನಿನ್ನೆ ಮಧ್ಯಾಹ್ನ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಇಡೀ ಕನ್ನಡ ನಾಡೇ ಕಂಬನಿ ಇಟ್ಟಿದೆ, ಇವರ ಸಾವಿನಿಂದ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.