ಅನೈತಿಕ ಸಂಬಂಧಕ್ಕೆ ಅಡ್ಡಿ: ಬೆಳಗಾವಿಯಲ್ಲಿ ಪ್ರಿಯಕರನ ಜೊತೆ ಸೇರಿ ಪತಿಗೇ ಚಟ್ಟ ಕಟ್ಟಿದ ಪತ್ನಿ
ಬೆಳಗಾವಿ : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಗರದ ಅನಗೋಳದ ಬಾಬಲೇ ಗಲ್ಲಿಯಲ್ಲಿ ಈ ಭೀಕರ ಹತ್ಯೆ ನಡೆದಿದೆ. ಖಾಸಗಿ ಆಯುರ್ವೇದಿಕ್ ಕಾಲೇಜಿನಲ್ಲಿ ಥೆರಪಿಸ್ಟ್ ಆಗಿದ್ದ ಅವಿನಾಶ್ ಸೂಪ್ಪಣ್ಣವರ (40) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಲಕ್ಷ್ಮೀ ಸೂಪ್ಪಣ್ಣವರ ಹಾಗೂ ಕೈಲಾಶ್ ಅಚ್ಚಿತಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ತನಿಖೆ ಪ್ರಕಾರ, ಆರೋಪಿಗಳು ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಅವಿನಾಶ್ಗೆ ಕುಡಿಸಿದ್ದರು. ಬಳಿಕ ಅವರು ಅಸ್ವಸ್ಥಗೊಂಡು ಬಿದ್ದಾಗ ಸಿಲಿಂಡರ್ನಿಂದ ತಲೆ ಹಾಗೂ ಎದೆ ಭಾಗಕ್ಕೆ ಹೊಡೆದು ಹತ್ಯೆ ನಡೆಸಿದ್ದಾರೆ.
ಮಾರ್ಚ್ 6ರಂದು ಸಂಜೆ ಅವಿನಾಶ್ ತಮ್ಮ ಕ್ಲಿನಿಕ್ಗೆ ತೆರಳಿದ್ದರು. ಈ ವೇಳೆ ಥೆರಪಿ ಮಾಡಿಸಿಕೊಳ್ಳುವ ನೆಪದಲ್ಲಿ ಕೈಲಾಶ್ ಕ್ಲಿನಿಕ್ಗೆ ತೆರಳಿ, ನಿದ್ರೆ ಮಾತ್ರೆ ಮಿಶ್ರಿತ ಪಾನೀಯ ನೀಡಿದ್ದಾನೆ. ಪಾನೀಯ ಸೇವಿಸಿದ ನಂತರ ಅವಿನಾಶ್ ಕುಸಿದು ಬಿದ್ದಿದ್ದು, ಅದನ್ನು ಪ್ರಯೋಜನಪಡಿಸಿಕೊಂಡು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ಕ್ಲಿನಿಕ್ಗೆ ಬಂದ ಪತ್ನಿ ಲಕ್ಷ್ಮೀ, ಪತಿಯ ಸಾವಿನ ಬಗ್ಗೆ ತಿಳಿದಿಲ್ಲದಂತೆ ನಾಟಕವಾಡಿ, ಶುಗರ್ ಹೆಚ್ಚಾಗಿ ಬಿದ್ದು ಸಾವನಪ್ಪಿದ್ದಾರೆ ಎಂದು ಹೇಳಿದ್ದಳು.
ಆದರೆ ಮೃತನ ತಾಯಿ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ತನಿಖೆಯಲ್ಲಿ ಪತ್ನಿಯ ಮೇಲೆಯೇ ಅನುಮಾನ ಬಂದು ವಿಚಾರಣೆ ನಡೆಸಿದಾಗ ಘಟನೆ ಬಹಿರಂಗವಾಗಿದೆ.
ಪೊಲೀಸರ ಮಾಹಿತಿಯಂತೆ, ಕಳೆದ ಎರಡು ವರ್ಷಗಳಿಂದ ಲಕ್ಷ್ಮೀ ಮತ್ತು ಕೈಲಾಶ್ ನಡುವೆ ಅನೈತಿಕ ಸಂಬಂಧ ಇತ್ತು. ಮೊಬೈಲ್ ರಿಚಾರ್ಜ್ ಮಾಡುವ ವೇಳೆ ಪರಿಚಯವಾದ ಅವರು ನಂತರ ಸಂಪರ್ಕ ಮುಂದುವರಿಸಿಕೊಂಡಿದ್ದರು. ಕೈಲಾಶ್ ಮತ್ತು ಅವಿನಾಶ್ ನಡುವೆ ಸಹ ಪರಿಚಯ ಬೆಳೆದಿದ್ದನ್ನು ಆರೋಪಿಗಳು ದುರುಪಯೋಗ ಮಾಡಿಕೊಂಡಿದ್ದಾರೆ.
ಈ ಸಂಬಂಧದ ಬಗ್ಗೆ ತಿಳಿದುಕೊಂಡ ಅವಿನಾಶ್, ಇಬ್ಬರಿಗೂ ಎಚ್ಚರಿಕೆ ನೀಡಿದ್ದನು. ಇದರಿಂದ ಕೋಪಗೊಂಡ ಲಕ್ಷ್ಮೀ, ಪತಿಯ ಹತ್ಯೆಗೆ ಸಂಚು ರೂಪಿಸಿದ್ದು, ಕಳೆದ ಒಂದು ತಿಂಗಳಿಂದ ಕೈಲಾಶ್ ಮೇಲೆ ಒತ್ತಡ ಹಾಕುತ್ತಿದ್ದಳು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಕುರಿತು ತಿಲಕವಾದಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



