ಒಂದು ಧ್ವಜ ಇಳಿಸಿದ್ರೆ, ಸಾವಿರಾರು ಧ್ವಜ ಹಾರಿಸಬೇಕಾಗುತ್ತದೆ !

0
477

ಬೆಂಗಳೂರು: ಹನುಮಧ್ವಜವನ್ನು ಪೊಲೀಸರನ್ನು ಬಳಸಿ ಕೆಳಗೆ ಇಳಿಸಿದ್ದನ್ನು ಖಂಡಿಸುತ್ತೇನೆ. ಒಂದು ಧ್ವಜ ಇಳಿಸಿದ್ರೆ, ಸಾವಿರಾರು ಧ್ವಜ ಹಾರಿಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್‍ ಕುಮಾರ್ ಹೇಳಿದರು. ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದಕ್ಕೆ ಗೃಹ ಇಲಾಖೆ ನೇರ ಹೊಣೆ ಆಗಲಿದೆ ಅಂತಾ ಸರ್ಕಾರಕ್ಕೆ ಎಚ್ಚರಿಸುತ್ತೇವೆ. ಸ್ಥಳೀಯ ಅಧಿಕಾರಿಗಳು ದೊಡ್ಡ ವಿವಾದ ಮಾಡಲು ಹೊರಟಿದ್ದಾರೆ. ಇದು ಆಕ್ಷೇಪಾರ್ಹ ಎಂದು ತಿಳಿಸಿದರು.
ಗ್ರಾಮದ ಜನ ಒಗ್ಗಟ್ಟಾಗಿ ಹನುಮಧ್ವಜ ಹಾರಿಸಲು ಮುಂದಾಗಿದ್ದಾರೆ. ಅಲ್ಲದೆ, ಸ್ಥಳೀಯರ ಮೇಲೆ ಲಾಠಿ ಪ್ರಹಾರ ನಡೆದಿದೆ. ಯಾಕೆ ಇಳಿಸಲಾಗುತ್ತಿದೆ ಎಂದು ಕೇಸರಿ ವಿರೋಧಿ ಸರ್ಕಾರ ಸ್ಪಷ್ಟಪಡಿಸಬೇಕು. ಸ್ವತಃ ಸಿದ್ದರಾಮಯ್ಯ ನನಗೆ ಕೇಸರಿ ಕಂಡ್ರೆ ಆಗಲ್ಲ ಅಂದಿದ್ದರು ಎಂದು ವಿವರಿಸಿದರು.
ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ಸಹಜವಾಗಿ ಎಲ್ಲರ ಮನೆ ಮೇಲೆ ಕೇಸರಿ ಧ್ವಜ ಹಾರಿಸಿದ್ದಾರೆ. ಜೊತೆಗೆ ನಂದಾ ದೀಪ ಹಚ್ಚಿದ್ದಾರೆ. ಆ ಗ್ರಾಮದಲ್ಲಿ ಕೂಡ ಧ್ವಜ ಹಾರಿಸಿ, ರಾಮನ ಫೋಟೋ ಹಾಕಿ ಪೂಜೆ ಮಾಡಿದ್ದಾರೆ. ಇದನ್ನು ಸರ್ಕಾರ ಸಹಿಸುತ್ತಿಲ್ಲ, ಇನ್ಯಾವುದನ್ನು ಸಹಿಸ್ತೀರಾ ಎಂದು ಪ್ರಶ್ನಿಸಿದರು.