ಉಡುಪಿ ಜಿಲ್ಲೆಯಲ್ಲಿ ಕೃಷಿ ಕ್ರಾಂತಿ ಮಾಡುತ್ತಿರುವ ಹಡೀಲು ಭೂಮಿ ಕೃಷಿ ಅಭಿಯಾನಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಳಿಕ, ಇದೀಗ ಸ್ಯಾಂಡಲ್ವುಡ್ ನಟ- ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಕೈ ಜೋಡಿಸಿದ್ದಾರೆ.
ಉಡುಪಿಯ ಪಡು ತೋನ್ಸೆಯಲ್ಲಿ ರಿಷಬ್ ಶೆಟ್ಟಿ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ. ಹಡೀಲು ಭೂಮಿಯಲ್ಲಿ ಬೆಳೆದ ಭತ್ತದ ಕಳೆಯನ್ನು ರಿಷಬ್ ಶೆಟ್ಟಿ ತೆಗೆದು, ಕೃಷಿ ಜೀವನವನ್ನು ನೆನೆಪಿಸಿಕೊಂಡಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರಘಪತಿ ಭಟ್ ನೇತೃತ್ವದಲ್ಲಿ ಸುಮಾರು 1500 ಎಕರೆ ಹಡೀಲು ಭೂಮಿಯಲ್ಲಿ ಭತ್ತದ ಬೇಸಾಯ ಮಾಡಲಾಗುತ್ತಿದೆ.
ಇದಾದ ಬಳಿಕ ನೇಜಾರ್ನಲ್ಲಿ ಕೇದರೋತ್ಥಾನ ಟ್ರಸ್ಟ್ ವತಿಯಿಂದ ನಡೆಸಲಾದ ಕಾರ್ಯಕ್ರಮದಲ್ಲೂ ನಟ ರಿಷಬ್ ಶೆಟ್ಟಿ ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಉಡುಪಿಯಲ್ಲಿ ಆಗುತ್ತಿರುವ ಭತ್ತದ ಕೃಷಿ ಕ್ರಾಂತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೇ ಮುಂದೆ ತಮ್ಮ ಸಿನಿಮಾ ಸೆಟ್ನಲ್ಲಿ ಕುಚ್ಚಲು ಅಕ್ಕಿ ಗಂಜಿ, ಉಪ್ಪಿನಕಾಯಿ, ಚಟ್ನಿ ನೀಡುವುದಾಗಿ ರಿಷಬ್ ಶೆಟ್ಟಿ ಹೇಳಿದರು. ಕುಚ್ಚಲಕ್ಕಿಯ ಗಂಜಿ ಮತ್ತು ಉಪ್ಪಿನಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹಕ್ಕೂ ತುಂಬಾ ಶಕ್ತಿ ನೀಡುತ್ತದೆ. ಕುಚ್ಚಲಕ್ಕಿಯ ಗಂಜಿ ಉಂಡರೆ ಮನಸ್ಸಿಗೂ ತೃಪ್ತಿ ಇರುತ್ತದೆ. ಹೀಗಾಗಿ ಮುಂದೆ ನಮ್ಮ ಸಿನಿಮಾ ಸೆಟ್ನಲ್ಲಿ ಕುಚ್ಚಲಕ್ಕಿಯ ಗಂಜಿಯನ್ನೇ ಊಟ ಮಾಡುತ್ತೇವೆ,” ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ