MESಗೆ ಮಹಾರಾಷ್ಟ್ರದ ಕಾನೂನು ನೆರವಿಗೆ ಖರ್ಗೆ ಆಕ್ಷೇಪ; ಗಡಿ ವಿಚಾರದಲ್ಲಿ ಪುಂಡಾಟಿಕೆ ಸಹಿಸುವುದಿಲ್ಲ
ಬೆಂಗಳೂರು: ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಸಂಘಟನೆಗೆ ಕಾನೂನು ನೆರವು ನೀಡಲು ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ಕರ್ನಾಟಕ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
“ಮಹಾರಾಷ್ಟ್ರ, ಗೋವಾ, ತಮಿಳುನಾಡು ಅಥವಾ ಆಂಧ್ರಪ್ರದೇಶ ಯಾರೇ ಆಗಿರಲಿ, ಗಡಿ ವಿವಾದಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಬಗೆಹರಿಸಬೇಕು. ಯಾವುದೋ ಸಂಘಟನೆಯವರು ಅಥವಾ ಮುಖ್ಯಮಂತ್ರಿಗಳು ಹೇಳಿದಂತೆ ಮನಬಂದಂತೆ ಗಡಿ ರೇಖೆ ಎಳೆಯಲು ಸಾಧ್ಯವಿಲ್ಲ” ಎಂದು ಖರ್ಗೆ ಹೇಳಿದರು.
ಮಹಾರಾಷ್ಟ್ರ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಅವರು, “ಇದನ್ನು ಎಚ್ಚರಿಕೆ ಎಂದು ಬೇಕಾದರೂ ತಿಳಿದುಕೊಳ್ಳಿ, ಮನವಿ ಎಂದು ಬೇಕಾದರೂ ತಿಳಿದುಕೊಳ್ಳಿ. ಕರ್ನಾಟಕದ ನೆಲದಲ್ಲಿ ಯಾರೂ ಪುಂಡಾಟಿಕೆ ನಡೆಸಲು ಅಥವಾ ಉದ್ವಿಗ್ನತೆ ಸೃಷ್ಟಿಸಲು ಅವಕಾಶ ನೀಡುವುದಿಲ್ಲ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸರ್ಕಾರ ಸಹಿಸುವುದಿಲ್ಲ” ಎಂದು ಕಠಿಣ ಸಂದೇಶ ರವಾನಿಸಿದರು.
ಗಡಿ ವಿವಾದದಂತಹ ಸೂಕ್ಷ್ಮ ವಿಷಯಗಳಲ್ಲಿ ಎಲ್ಲರೂ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿಯೇ ನಡೆದುಕೊಳ್ಳಬೇಕು ಎಂದು ಅವರು ಒತ್ತಿಹೇಳಿದರು.



