ಊಟ ನೀಡದ ವಿಚಾರಕ್ಕೆ ಪತ್ನಿಯ ಕೊಲೆ: ಶವ ಬೆಡ್ ಶೀಟ್ ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದ ಪತಿ ಬಂಧನ!
ಬೆಂಗಳೂರು: ಕುಂಬಳಗೋಡು ಸಮೀಪದ ಗೇರುಪಾಳ್ಯದಲ್ಲಿ ಪತ್ನಿಯನ್ನು ಹತ್ಯೆ ಮಾಡಿ, ಶವವನ್ನು ಬೆಡ್ಶೀಟ್ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಬಿಹಾರಕ್ಕೆ ಪರಾರಿಯಾಗಿದ್ದ ಆರೋಪಿ ಧೀರಜ್ ಕುಮಾರ್ (24) ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೌಟುಂಬಿಕ ಕಲಹವೇ ಕೊಲೆಗೆ ಕಾರಣವಾಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಜುಲೈ 27ರಂದು ಪತ್ನಿ ರೀಮಾ ಕುಮಾರಿಯನ್ನು ಕೊಲೆಗೈದ ಬಳಿಕ ಧೀರಜ್ ಬಿಹಾರಕ್ಕೆ ಪರಾರಿಯಾಗಿದ್ದ. ಕೆಲ ದಿನಗಳ ನಂತರ ರೀಮಾ ಸ್ನೇಹಿತೆ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದಾಳೆ. ಮನೆ ಒಳಗಿನಿಂದ ದುರ್ವಾಸನೆ ಬರುತ್ತಿದ್ದ ಕಾರಣ ಪರಿಶೀಲಿಸಿದಾಗ, ಬೆಡ್ಶೀಟ್ನಲ್ಲಿ ಸುತ್ತಿಟ್ಟಿದ್ದ ಕೊಳೆತ ಸ್ಥಿತಿಯ ರೀಮಾ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕುಂಬಳಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಪ್ರಾಥಮಿಕ ತನಿಖೆಯಲ್ಲಿ, ಕಳೆದ ಡಿಸೆಂಬರ್ನಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಧೀರಜ್ ಮತ್ತು ರೀಮಾ ಪರಸ್ಪರ ಪ್ರೀತಿಸಿ ಮನೆಯವರ ಅನುಮತಿಯಿಲ್ಲದೆ ವಿವಾಹವಾಗಿದ್ದು, ಗೇರುಪಾಳ್ಯದ ಖಾಸಗಿ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಆರಂಭದಲ್ಲಿ ಸುಖವಾಗಿ ಜೀವನ ಸಾಗಿಸುತ್ತಿದ್ದ ದಂಪತಿ ಬಳಿಕ ನಿರಂತರ ಕೌಟುಂಬಿಕ ಕಲಹಕ್ಕೆ ಒಳಗಾಗಿದ್ದರು.
ವಿಚಾರಣೆ ವೇಳೆ ಧೀರಜ್ ನೀಡಿದ ಹೇಳಿಕೆಯ ಪ್ರಕಾರ, ಬೆಂಗಳೂರಿಗೆ ಬಂದ ನಂತರ ರೀಮಾ ತನ್ನೊಂದಿಗೆ ದೂರವಾಗಿದ್ದು, ಹೆಚ್ಚಿನ ಸಮಯ ಮೊಬೈಲ್ನಲ್ಲಿ ರೀಲ್ಸ್ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಳು. ಅಲ್ಲದೆ, ಕುಟುಂಬದ ಜವಾಬ್ದಾರಿಗಳ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದ್ದಳು ಎಂದು ಆರೋಪಿಸಿದ್ದಾನೆ. ಈ ವಿಚಾರಗಳು ದಂಪತಿ ನಡುವೆ ಪದೇಪದೆ ಜಗಳಕ್ಕೆ ಕಾರಣವಾಗಿದ್ದವು ಎನ್ನಲಾಗಿದೆ.
ಕೊಲೆ ನಡೆದ ದಿನವೂ ಊಟದ ವಿಚಾರವಾಗಿ ಆರಂಭವಾದ ವಾಗ್ವಾದ ತೀವ್ರ ಸ್ವರೂಪ ಪಡೆದಿತ್ತು. ಜಗಳದ ವೇಳೆ ರೀಮಾ ಮೊದಲು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ಧೀರಜ್, ವೇಲ್ನಿಂದ ಆಕೆಯ ಕುತ್ತಿಗೆ ಹಿಸುಕಿ ಹತ್ಯೆ ಮಾಡಿ, ಬಳಿಕ ಮುಖಕ್ಕೆ ಪ್ಲಾಸ್ಟಿಕ್ ಸುತ್ತಿ ಶವವನ್ನು ಬೆಡ್ಶೀಟ್ನಲ್ಲಿ ಹೊದಿಸಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ಧೀರಜ್ನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಕುಂಬಳಗೋಡು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.



