ಮೈಸೂರು ಯುವ ದಸರಾದ ಉದ್ಘಾಟಕರಾಗಿ ನಟ ಪ್ರಭುದೇವಗೆ ಆಹ್ವಾನ
ಮೈಸೂರು: ಈ ಬಾರಿಯ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುವ ಯುವ ದಸರಾದ ಉದ್ಘಾಟಕರಾಗಿ ಖ್ಯಾತ ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರಿಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಿದೆ.
ಜಿಲ್ಲಾಡಳಿತದ ಅಧಿಕಾರಿಗಳು ಪ್ರಭುದೇವ ಅವರಿಗೆ ಪೇಟಾ ತೊಡಿಸಿ, ಶಾಲು ಹೊದಿಸಿ ಹಾಗೂ ಹೂವಿನ ಹಾರ ಹಾಕುವ ಮೂಲಕ ಗೌರವಪೂರ್ವಕವಾಗಿ ಆಹ್ವಾನಿಸಿದರು. ಈ ಬಾರಿಯ ಯುವ ದಸರಾದ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸುವ ನಿರೀಕ್ಷೆಯಿದೆ.
ಮೈಸೂರು ದಸರಾ ಉತ್ಸವದ ಪ್ರಮುಖ ಸಾಂಸ್ಕೃತಿಕ ವೇದಿಕೆಯಾದ ಯುವ ದಸರಾದಲ್ಲಿ ಪ್ರತಿವರ್ಷ ಸಿನಿತಾರೆಯರು, ಖ್ಯಾತ ಗಾಯಕರು ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಿ ಯುವಜನತೆಗೆ ಮನರಂಜನೆಯ ರಸದೌತಣ ನೀಡುತ್ತಾರೆ. ನೃತ್ಯ, ಸಂಗೀತ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಯುವ ದಸರಾ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಗುರುತಿಸಿಕೊಂಡಿದೆ.
ಈ ಬಾರಿ ಪ್ರಭುದೇವ ಅವರ ಉಪಸ್ಥಿತಿಯಿಂದ ಯುವ ದಸರಾ ಇನ್ನಷ್ಟು ಮೆರಗು ಪಡೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



