ಕೊಡಗು ಜಿಲ್ಲೆಯು ಪ್ರಕೃತಿ ಸೌಂದರ್ಯದ ನೆಲೆಬೀಡಾಗಿದ್ದು, ಪಕೃತಿ ಸೌಂದರ್ಯವನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಜಿಲ್ಲೆಗೆ ಆಗಮಿಸುತ್ತಿರುತ್ತಾರೆ.
ಆದರೆ ಕೊಡಗು ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯಿಂದ ಮಡಿಕೇರಿ ನಗರದ ಸುತ್ತಮುತ್ತ ಹಾಗೂ ಜಿಲ್ಲೆಯ ಹಲವೆಡೆ ಪ್ರವಾಹ ಮತ್ತು ಭೂಕುಸಿತದಿಂದ ಮಾನವ/ ಜಾನುವಾರು ಜೀವಹಾನಿ, ಮನೆಹಾನಿ, ರಸ್ತೆಹಾನಿ ಸೇರಿದಂತೆ ಹಲವು ನಷ್ಟಗಳು ಆಗಿರುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಸಂತ್ರಸ್ಥರಾದವರಿಗೆ ಪರಿಹಾರ ವಿತರಣೆ, ಮೂಲ ಸೌಲಭ್ಯ ಕಲ್ಪಿಸುವಿಕೆ / ಪುನರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುತ್ತದೆ.
ಮಡಿಕೇರಿ ತಾಲ್ಲೂಕಿನ ಅಬ್ಬಿ ಜಲಪಾತ, ಮಾಂದಲ್ಪಟ್ಟಿ ಮತ್ತು
ತಡಿಯಂಡಮೋಳ್ ಪ್ರವಾಸಿತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಪೂರ್ಣವಾಗಿ ದುರಸ್ಥಿಗೊಳ್ಳದೇ ಇರುವುದರಿಂದ ಸುರಕ್ಷತಾ ಹಿತದೃಷ್ಠಿಯಿಂದ ಪ್ರವಾಸಿಗರು ಈ ಸ್ಥಳಗಳಿಗೆ ತೆರಳದಂತೆ ಈ ಹಿಂದೆ ಕೋರಲಾಗಿತ್ತು.
ಪ್ರಸ್ತುತ ಮಡಿಕೇರಿ ತಾಲ್ಲೂಕಿನ ಅಬ್ಬಿ ಜಲಪಾತ ಸಂಪರ್ಕ ರಸ್ತೆಯ ತುರ್ತು ದುರಸ್ಥಿ ಕಾರ್ಯವನ್ನು
ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡು
ಪೂರ್ಣಗೊಳಿಸಲಾಗಿದ್ದು, ಲಘು ವಾಹನ ಸಂಚಾರಯೋಗ್ಯ ರಸ್ತೆಯನ್ನು ನಿರ್ಮಿಸಲಾಗಿರುತ್ತದೆ. ಆದುದರಿಂದ ಅಬ್ಬಿ ಜಲಪಾತ ವೀಕ್ಷಣೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಲಘು ವಾಹನಗಳ ಮೂಲಕ ತೆರಳಬಹುದಾಗಿರುತ್ತದೆ.
ಅಲ್ಲದೆ, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳ
ಪುನರ್ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ
ಪೂರ್ಣಗೊಳಿಸಬೇಕಾಗಿರುವುದರಿಂದ ಪ್ರವಾಸಿಗರು ಜಿಲ್ಲಾಡಳಿತ ನೀಡುವ
ಸೂಚನೆಗಳನ್ನು ಪಾಲಿಸುವ ಮೂಲಕ ಸಹಕರಿಸಲು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮನವಿ ಮಾಡಿದ್ದಾರೆ.