ಹಲಗಾದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ವಿವಾದ ವಿಕೋಪಕ್ಕೆ ಹೋಗಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಸೇರಿದಂತೆ ಹಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾವುದೇ ಕಾರಣದಿಂದ ರೈತರ ಜಮೀನು ವಶಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಗುಡುಗಿದ್ದಾರೆ.
ರೈತರ ಜಮೀನಿನಲ್ಲಿ ಮತ್ತು ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದಾರೆ. ಅಲ್ಲದೆ ಹತ್ತಿರದಲ್ಲೇ ಸುವರ್ಣ ವಿಧಾನಸೌಧವೂ ಇದೆ. ಹಾಗಾಗಿ ಈ ಸಂಬಂಧ ಸಮಿತಿ ರಚಿಸಿ ನಿರ್ಧಾರ ಮಾಡಲು ತೀರ್ಮಾನಿಸಲಾಗಿತ್ತು.
ಆದರ ನಿನ್ನೆ ಏಕಾಏಕಿ ಜಮೀನು ಸ್ವಾಧೀನಕ್ಕೆ ಹೋದಾಗ ರೈತರು ಪ್ರತಿಭಟಿಸಿದ್ದಾರೆ.ವಾಪಸ್ ಬಂದ ಅಧಿಕಾರಿಗಳು ಇಂದು ಪೊಲೀಸ್ ಬಲದೊಂದಿಗೆ ಸ್ಥಳಕ್ಕೆ ತೆರಳಿದ್ದು, ಈ ವೇಳೆ ಮೃಣಾಲ ಹೆಬ್ಬಾಳ್ಕರ್ ಮತ್ತು ರೈತರು ಪ್ರತಿಭಟಿಸಿದ್ದಾರೆ. ಪೊಲೀಸರು ಅವರನ್ನೆಲ್ಲ ವಶಕ್ಕೆ ಪಡೆದು ಎಪಿಎಂಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಏಕಾಏಕಿ ರೈತರ ಜಮೀನು ವಶಪಡಿಸಿಕೊಳ್ಳುವ ಪ್ರಯತ್ನವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರವಾಗಿ ಖಂಡಿಸಿದ್ದಾರೆ. ನಾನು ಊರಲ್ಲಿಲ್ಲದಾಗ ಅಧಿಕಾರಿಗಳು ಭೂ ಸ್ವಾಧೀನಕ್ಕೆ ಹೋಗಿದ್ದಾರೆ. ಯಾವುದೇ ಕಾರಣದಿಂದ ರೈತರ ಭೂಮಿ ವಶಪಡಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ. ಹಲಗಾದಲ್ಲಿ ತ್ಯಾಜ್ಯ ವಿಲೇವಾರ ಘಟಕ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ ಎಂದು ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.