ಸಂಕಷ್ಟದಲ್ಲಿದ್ದ ಕುಟುಂಬದ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.
ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಮಗುವಿನ ಪೋಷಕರು ಮುಖ್ಯಮಂತ್ರಿ ಕಾರಿಗೆ ಅಡ್ಡಲಾಗಿ ಮಗುವಿನ ಚಿಕಿತ್ಸೆಗೆ ನೆರವಾಗಲು ಮನವಿ ಮಾಡಿದ್ದರು. ಕೂಡಲೇ ಸ್ಪಂದಿಸಿದ ಸಿಎಂ, ಬೆಂಗಳೂರಿಗೆ ಬರುವಂತೆ ಪೋಷಕರಿಗೆ ಸೂಚನೆ ನೀಡಿದ್ದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕುಮಾರ್ ಮತ್ತು ಲಕ್ಷ್ಮಿ ದಂಪತಿಗೆ ಮೂವರು ಹೆಣ್ಣುಮಕ್ಕಳು. ಮೂರನೇ ಮಗಳಿಗೆ ಕೈ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು. ಇದಕ್ಕಾಗಿ ಲಕ್ಷಾಂತರ ರೂ. ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದರಿಂದ ಕುಮಾರ್ ಮತ್ತು ಲಕ್ಷ್ಮಿ ಮುಖ್ಯಮಂತ್ರಿಯವರಿಗೆ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ಸಿಎಂ, ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಮೇ 18 ರಂದು ಆಪರೇಷನ್ ಆಗಿದ್ದು, ಮಗು ಚೇತರಿಸಿಕೊಳ್ಳತೊಡಗಿದೆ. ಇನ್ನೂ ಒಂದು ಆಪರೇಷನ್ ಆಗಬೇಕಿದೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೊಟ್ಟ ಮಾತಿನಂತೆ ಮಗುವಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಟ್ಟಿದ್ದಕ್ಕೆ ಕುಮಾರ್, ಲಕ್ಷ್ಮಿ ದಂಪತಿ ಕೃತಜ್ಞತೆ ಸಲ್ಲಿಸಿದ್ದಾರೆ.