ನಿಮಗೆಲ್ಲ ಗೊತ್ತಿದೆ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವ್ರ ಹೆಸರನ್ನು ಸೇರಿಸಿದ್ದು, ನಂತರ ಭಕ್ತರು ಹೈಕೋರ್ಟಿಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಜಿಲ್ಲಾಧಿಕಾರಿ ಹೆಸರನ್ನು ತೆಗೆದು ಪತ್ರಿಕೆ ಮರುಮುದ್ರಣ ಮಾಡಿದ್ದು..! ಈ ಮೂಲಕ ಪುತ್ತೂರು ದೇಶವ್ಯಾಪಿ ಸುದ್ದಿಯಾಗಿತ್ತು, ಸದ್ದು ಮಾಡಿತ್ತು..!
ಅಂತೆಯೇ ಜಯಕರ್ನಾಟಕ ಸಂಘಟನೆಯ ಮುತ್ತಪ್ಪ ರೈ ಅವರು ಈ ದೇವಾಲಯಕ್ಕೆ ರಥವನ್ನು ನೀಡಿದ್ದರು..! ಆಗ ಕೂಡ ದೇಶವ್ಯಾಪಿ ಮನೆಮಾತಾಗಿತ್ತು..!
ಸದಾ ಸುದ್ದಿಯಲ್ಲಿರುವ ಈ ದೇವಾಲಯದ ಇತಿಹಾಸ, ಈ ದೇವಾಲಯಕ್ಕು ಊರಿನ ಹೆಸರಿಗೂ ಇರೋ ನಂಟಿನ ಬಗ್ಗೆ ಇಲ್ಲಿ ತಿಳಿಸಿದ್ದೇವೆ!
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ ಹಾಗೂ ಎರಡನೇ ದೊಡ್ಡ ಪಟ್ಟಣ ಪುತ್ತೂರು. ಪುತ್ತೂರು ಎಂದೊಡನೆ ತಟ್ಟನೆ ನೆನಪಾಗುವುದು ಮಹಾಲಿಂಗೇಶ್ವರ ದೇವಸ್ಥಾನ. ಊರಿನ ಹೆಸರಿಗೂ ಇಲ್ಲಿ ವಿರಾಜಮಾನನಾಗಿ ಸಕಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಮಹತೋಭಾರ ಮಹಾಲಿಂಗೇಶ್ವರನಿಗೂ ಒಂದು ಐತಿಹಾಸಿಕ ನಂಟಿದೆ!
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ 11-12ನೇ ಶತಮಾನಕ್ಕೆ ಸೇರಿದ್ದು. ಈ ದೇವಸ್ಥಾನದ ಸುತ್ತಮುತ್ತ ಆನೆ ಬರೋ ಹಂಗಿಲ್ಲ . ಒಂದು ವೇಳೆ ಅಪ್ಪಿ-ತಪ್ಪಿ ಬಂದಲ್ಲಿ ಅವುಗಳಿಗೆ ಸಾವು ಖಚಿತವಂತೆ..! ಹಾಗೊಂದು ಪ್ರತೀತಿ ಇದೆ..! ಇದಕ್ಕೊಂದು ಐತಿಹಾಸಿಕ ಕತೆಯಿದೆ.!.ಒಂದ್ಸಲ ಗೋವಿಂದ ಭಟ್ಟರು ಅನ್ನೋ ಬ್ರಾಹ್ಮಣರು ಪೂಜೆ ಮಾಡಲೆಂದು ಒಂದು ಶಿವಲಿಂಗವನ್ನು, ಈಗ ದೇವಸ್ಥಾನ ಇರುವ ಜಾಗದಲ್ಲಿ ಮರೆತು ನೆಲದ ಮೇಲಿಟ್ಟರಂತೆ. ಭೂಸ್ಪರ್ಶವಾದ ಶಿವಲಿಂಗವು ಎಷ್ಟೇ ಎಳೆದರೂ ಮೇಲೇಳಲಿಲ್ಲ..! ಆಗ ಏನೂ ತೋಚದೆ ಶಿವಲಿಂಗವನ್ನು ಎಳೆಯಲು ಆನೆಯನ್ನು ಕರೆಸ್ತಾರಂತೆ..! ಶಿವಲಿಂಗಕ್ಕೆ ಹಗ್ಗ ಕಟ್ಟಿ ಎಳೆಯುತ್ತಿದ್ದಂತೆ ಶಿವಲಿಂಗವೇ ದೊಡ್ಡದಾಗ್ತಾ ಹೋಯ್ತಂತೆ..! ಆ ಮಹಾಲಿಂಗಲವೇ ಈಗ ಪೂಜಿಸಲ್ಪಡುವ ಮಹಾಲಿಂಗೇಶ್ವರ..! ಸಿಕ್ಕಾಪಟ್ಟೆ ಜೋರಾಗಿ, ರಭಸದಿಂದ ಶಿವಲಿಂಗವನ್ನು ಎಳೆಯುತ್ತಿದ್ದ ಆನೆ ಛಿದ್ರಛಿದ್ರವಾಗಿ ಎಲ್ಲಾಯ್ತಾ ಅಲ್ಲಿ, ದೂರ ದೂರವಾಗಿ ಎಸೆಯಲ್ಪಟ್ಟಿತು..! ಅದರ ಒಂದೊಂದು ಅಂಗ ಬಿದ್ದ ಒಂದೊಂದು ಸ್ಥಳಕ್ಕೆ ಒಂದೊಂದು ಹೆಸರು ಹುಟ್ಟಿಕೊಂಡಿದ್ದಂತೆ..! ಕೊಂಬು ಬಿದ್ದೆಡೆ ಕೊಂಬೆಟ್ಟು, ತಲೆ ಬಿದ್ದೆಡೆ ತಾಳೆಪಾಡಿ,, ಕೈ ಬಿದ್ದಡೆ ಕೇಪಳ, ಬಾಲ ಬಿದ್ದ ಕಡೆಯಲ್ಲಿ ಬೀದಿಮಜಲು ಎಂದು ಹೆಸರಾಯಿತಂತೆ..! ಈ ಪವಾಡವನ್ನು ಕಂಡ, ಅಂದಿನ ಪುತ್ತೂರನ್ನು ಆಳುತ್ತಿದ್ದ ಬಂಗರಾಜ ದೇವರಿಗೆ ಗುಡಿ ಕಟ್ಟಿಸಿದ್ನಂತೆ..!
ಮಹಾಲಿಂಗೇಶ್ವರ ಗುಡಿಯ ಎದುರು ಮೂರು ಕಾಲುಗಳ್ಳುಳ್ಳ ನಂದಿ ಇದೆ..!.ಈ ನಂದಿಗೂ ಒಂದು ಕಥೆ ಇದೆ. ರೈತರು ಹೊಲದಲ್ಲಿ ಬೆಳೆದಿದ್ದ ಪೈರನ್ನು ಒಂದು ಬಸವ ದಿನಾಲೂ ಬಂದು ಹಾಳು ಮಾಡ್ತಿತ್ತಂತೆ..! ಒಂದು ದಿನ ರೈತ ಕಾದು ಕುಳಿತು ಬಸವನ ಕಾಲಿಗೆ ಹೊಡೆದ ರಭಸಕ್ಕೆ ಕಾಲು ಮುರಿತಂತೆ..! ಮೂರು ಕಾಲುಗಳಲ್ಲಿ ಅಳುತ್ತಾ ಮಹಾಲಿಂಗೇಶ್ವರನ ಮುಂದೆ ಬಂದ ಬಸವನಿಗೆ, ಮುಂದೆ ನಿನಗೆ ಯಾರಿಂದಲೂ ತೊಂದರೆ ಆಗುವುದಿಲ್ಲ ಬದಲಾಗಿ ನನ್ನ ಜೊತೆಗೆ ನಿನ್ನನ್ನೂ ಪೂಜಿಸುವಂತಾಗಲಿ ಎಂದು ಕಲ್ಲಾಗಿ ಮಾಡ್ತಾನೆ ಮಾಹಾಲಿಂಗೇಶ್ವರ..! ಮಹಾಲಿಂಗೇಶ್ವರನ ಎದುರು ಇರುವ ನಂದಿಗೆ ಒಂದು ಕಾಲು ಮುರಿದುಹೋದುದನ್ನು ಈಗಲೂ ಕಾಣುತ್ತೇವೆ,..! ಮುರಿದ ಕಾಲು ಈಗಲೂ ಕಲ್ಲಾಗಿ ಹೊಲದ ಮಧ್ಯೆ ಇದೆ ಎಂದು ಅಂತ ಜನ ನಂಬಿದ್ದಾರೆ..!
ಆಮೇಲೆ ಶಾಸ್ತ್ರೋಕ್ತವಾಗಿ ಪೂಜಾವಿಧಿವಿಧಾನಗಳೊಂದಿಗೆ ಪರಿವಾರ ದೇವತೆಗಳಾದ ಪಾರ್ವತಿ, ಸುಬ್ರಮಣ್ಯ, ಗಣೇಶ ಹಾಗೂ ದೈವಗಳನ್ನು ಪ್ರತಿಷ್ಟಾಪಿಸಲಾಯ್ತು..!. ದೇವಾಲಯದ ಮುಂದೆ ನಾಗ, ಅಯ್ಯಪ್ಪ ಮತ್ತು ನವಗ್ರಹಗಳ ಗುಡಿಗಳನ್ನು ಕಟ್ಟಿ ಪೂಜಿಸಲಾಯಿತು.
ದೇವಾಲಯದ ಹಿಂದೆ ನಿತ್ಯ ಹರಿದ್ವರ್ಣದ ಕೆರೆಯೊಂದಿದೆ. ಕಾರ್ತೀಕ ಮಾಸದಲ್ಲಿ ದೇವಸ್ಥಾನ, ಕೆರೆಯ ಸುತ್ತಲೂ ದೀಪಗಳನ್ನು ಹಚ್ಚಿ ಲಕ್ಷದೀಪೋತ್ಸವ ನಡೆಸುತ್ತಾರೆ. ಈ ಕೆರೆಯಲ್ಲಿ ಹಿಂದೆ ಮುತ್ತು ಬೆಳೆಯುತ್ತಿತ್ತಂತೆ ನಂಬಿಕೆಯೂಂದು ಇದೆ..! ಈ ಮುತ್ತಿಗೊಂದು ಇನ್ನೊಂದು ಕತೆಯಿದೆ. ದೇವಾಲಯದ ಹಿಂದೆ ಕೆರೆ ನಿರ್ಮಾಣ ಮಾಡ್ತಾ ಇರ್ವಾಗ ಎಷ್ಟೇ ಆಳ ಅಗೆದರೂ ನೀರು ಬರ್ಲಿಲ್ವಂತೆ..! ಅದಕ್ಕೆ ವರುಣನ ಪೂಜೆಗೈದು ಬ್ರಾಹ್ಮಣರಿಗೆ ಕೆರೆಯಲ್ಲಿ ಅನ್ನಸಂತರ್ಪಣೆ ಮಾಡಿದ್ರಂತೆ..! ಆಗ ಬ್ರಾಹ್ಮಣರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರೂ ತುಂಬಲಾರಂಭಿಸಿದಾಗ ಅವರು ಊಟ ಬಿಟ್ಟು ಓಡಿದರಂತೆ. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳು ಮುತ್ತಾಗಿ ಪರಿವರ್ತನೆಗೊಂಡವಂತೆ. ಮುತ್ತು ಸಿಗೋ ಊರು ಮುತ್ತೂರು ಮುತ್ತೂರಾಯ್ತು..!. ಕಾಲಕಳೆದಂತೆ ಮುತ್ತೂರು ಪುತ್ತೂರಾಯ್ತು..!
ಹೀಗೆ ತನ್ನದೇ ಆದ ಇತಿಹಾಸವನ್ನು ಹೊಂದಿರುವ ದೇವಾಲಯ ಪುತ್ತೂರು ಮಹಾಲಿಂಗೇಶ್ವರ ಜಾತ್ರ ಮಹೋತ್ಸವ ಪ್ರತಿವರ್ಷ ಏಪ್ರಿಲ್ 10 ರಿಂದ 20 ರವರೆಗೆ ನಡೆಯುತ್ತೆ ರಥೋತ್ಸವ
ಪ್ರತಿ ವರ್ಷ ಏಪ್ರಿಲ್ 17 ರಂದು, ಪುನರ್ ಪ್ರತಿಷ್ಠಾಪನ ಉತ್ಸವ ಪ್ರತಿ ವರ್ಷ ಮೇಷ ಮಾಸ 30 ರಂದು ವಿಜ್ರುಂಭಣೆಯಿಂದ ನಡೆಯುತ್ತೆ.
ಜಾತ್ರೆ, ರಥೋತ್ಸವವಲ್ಲದೇ, ನಾಗರ ಪಂಚಮಿ (ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು) ,ಕದಿರು(ತೆನೆಉತ್ಸವ) ನಡೆಯುವುದು.ಗಣೇಶ ಚತುರ್ಥಿಯಂದು 108 ಕಾಯಿ ಗಣಹೋಮ ಜರಗಿ ನಂತರ ಮದ್ಯಾಹ್ನ ಮಹಾಪೂಜೆ ಜರಗುವುದು. ಅಶ್ವಯುಜ ಶುಕ್ಲ ಪಕ್ಷದ ಪಾಡ್ಯ ತಿಥಿಯಿಂದ ನವಮಿ ತಿಥಿಯವರೆಗೆ ದುರ್ಗಾದೇವಿಗೆ ವಿಶೇಷ ಪೂಜೆ (ನವರಾತ್ರಿ),
ದೀಪಾವಳಿಯ ಬಲೀಂದ್ರ ಹಾಕುವುದು: ಅಶ್ವಯುಜ ಅಮವಾಸ್ಯೆ ತಿಥಿಯಂದು ಮಿದಲ್ಗೊಂಡು ದಿನಂಪ್ರತಿ ಹೊತ್ತು ಪೂಜೆ ಬಲಿ ಉತ್ಸವವು ಪತ್ತನಾಜೆವರೆಗೆ (ಮೇ ಅಂತ್ಯದವರೆಗೆ) ಜರಗುವುದು.
ಪೂಕರೆ ಉತ್ಸವ: ಕಾರ್ತಿಕ ಮಾಸದ ಹಸ್ತನಕ್ಷತ್ರದ ದಿವಸ ನಡೆಯುವುದು.
ಲಕ್ಷದೀಪೋತ್ಸವ: ಕಾರ್ತಿಕ ಮಾಸದ ಅಮವಾಸ್ಯೆ ದಿನ ರಾತ್ರಿ ಉತ್ಸವ ನಡೆಯುತ್ತದೆ. ಮಕರ ಸಂಕ್ರಮಣದಂದು ಕುಂಭಾಬಿಷೇಕ, ಕನಕಾಭಿಷೇಕ, ಶಿವರಾತ್ರಿ ದಿನದಂದು ಉತ್ಸಹ ಹಾಗೂ ಕೆರೆಯಲ್ಲಿ ವಿಶೇಷವಾಗಿ ತೆಪ್ಪೋತ್ಸವ ವಿಜ್ರಂಭಣಯಿಮ್ದ ಜರಗುತ್ತದೆ. ಬೆಳಗ್ಗಿನ ತನಕ ಭಜನೆ ಹಾಗೂ ಜಾಗರಣೆ ಭಕ್ತಾಧಿಗಳು ನೆರೆವೇರಿಸುತ್ತಾರೆ.
ಶ್ರೀ ದೇವಾಸ್ಥಾನದಲ್ಲಿ ವಾಷಿಕ ಜಾತ್ರೆಯು ಪ್ರತೀ ವರ್ಷ ಎಪ್ರಿಲ್ 10 ರಿಂದ 20ರ ತನಕ ಜರಗುತ್ತದೆ. ವಿಶೇಷವಾಗಿ ಎ.16 ರಂದು ಬಲ್ನಾಡು ದಂಡುನಾಯಕ ಉಳ್ಳಾಲ್ತಿ ಶ್ರೀ ಕ್ಷೇತ್ರಕ್ಕೆ ಆಗಮಿಸುವುದು. ನಂತರ ಉತ್ಸವ ಸಣ್ಣ ರಥೋತ್ಸವ ಪಾಲಕು (ಪಲ್ಲಕ್ಕಿ) ಉತ್ಸವ ಕೆರೆಯಲ್ಲಿ ಜರಗುತ್ತದೆ. ಪ್ರತಿ ವರ್ಷ ಎಪ್ರಿಲ್ 18ರಂದು ಜಾತ್ರೆ ಅಂಗವಾಗಿ ಬೆಳಿಗ್ಗೆ ತುಲಾಭಾರ ಸೇವೆ, ಸಾಯಂಕಾಲ ವೀರಮಮಂಗಲ ದೇವರು ಅವಭ್ರತ ಸ್ನಾನಕ್ಕೆ ಸವಾರಿ ಜರಗುತ್ತದೆ. ಮೇ ತಿಂಗಳ ಅಂತ್ಯದಲ್ಲಿ ಪ್ರತೀ ವರ್ಷ ದೇವರ ಬಲಿ ಉತ್ಸವವು ನಡೆದು ದೇವರ ಉತ್ಸವ ಮೂರ್ತಿಯನ್ನು ಪಾಣಿಪೀಠದಲ್ಲಿಟ್ಟು ಮಂಗಳಾರತಿ ನಡೆದ ನಂತರ ಉತ್ಸವ ಮುಕ್ತಾಯಗೊಳ್ಳುತ್ತದೆ. ಈ ಬಾರಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ಸಾಧ್ಯ ಆದರೆ ಹೋಗಿ ಬನ್ನಿ, ಒಮ್ಮೆ ಹೋದರೆ ಉತ್ಸವ, ರಥೋತ್ಸವದ ಕಣ್ತುಂಬಿಕೊಂಡ ನೀವು ಮತ್ತೆ ಮತ್ತೆ ಪ್ರತಿವರ್ಷ ಹೋಗಿಯೇ ಹೋಗುತ್ತೀರಿ., ಹ್ಞಾಂ ಹೇಳೋದೆ ಮರೆತಿದ್ದೆ ನೋಡಿ.
ನೀವು ದೇವಾಲಯದ ನಡೆಯಲ್ಲಿ ನಿಂತು ಬೇಡಿಕೊಂಡರೆ, ನೀವು ಬೇಡಿದ್ದನ್ನ ಮಹಾಲಿಂಗೇಶ್ವರ ಕರುಣಿಸ್ತಾನೆ ಅನ್ನುವುದರಲ್ಲಿ ಅನುಮಾನವಿಲ್ಲ
- ರಘು ಭಟ್
POPULAR STORIES :
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
ನಾ ಮಾಡಿದ್ದು ಸಣ್ಣಪುಟ್ಟ ತಪ್ಪುಗಳನ್ನಷ್ಟೆ..!? ನನ್ನವಳ ಪತ್ರದಲ್ಲಿ ನಿಮ್ಮೆಲ್ಲರ ಛಾಯೆ..
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!
ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?
`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’