ಪ್ರವಾಸಿ ಭಾರತೀಯ ದಿವಸ್ ಬಗ್ಗೆ ನಿಮಗೆಷ್ಟು ಗೊತ್ತು?

Date:

ಭಾರತದಲ್ಲಿ ಹುಟ್ಟಿ ಉದ್ಯೋಗ ಅರಸಿಕೊಂಡು ಕೋಟ್ಯಾಂತರ ಮಂದಿ ಸಾಗರ ದಾಟಿ ವಿವಿಧ ದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ತಾವು ಹುಟ್ಟೂರು ಬಿಟ್ಟು ತೆರಳಿದ್ದರೂ, ಭಾರತಕ್ಕೆ ಏನಾದರೂ ಸಂಕಷ್ಟ ಎದುರಾದಾಗ ಮೊದಲು ನೆರವಿಗೆ ಧಾವಿಸುವುದು ಅನಿವಾಸಿಗಳೇ. ತಮ್ಮ ಸಂಪಾದನೆಯ ಒಂದಿಷ್ಟು ಭಾಗವನ್ನು ಹುಟ್ಟೂರಿನ ಏಳಿಗೆಗಾಗಿಯೇ ಮೀಸಲಿಡುವ ಅನಿವಾಸಿ ಭಾರತೀಯರು ದೇಶದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಎನ್‌ಆರ್‌ಐಗಳಿಗಾಗಿಯೇ ಭಾರತ ಸರ್ಕಾರ ‘ಪ್ರವಾಸಿ ಭಾರತೀಯ ದಿವಸ್‌’ ಎಂದು ವರ್ಷದಲ್ಲಿ ಒಂದು ದಿನ ಮೀಸಲಿಟ್ಟಿದೆ.

ಹಾಗಾದರೆ ಏನಿದು ಪ್ರವಾಸಿ ಭಾರತೀಯ ದಿವಸ್‌? ಇದರ ಹಿನ್ನೆಲೆ ಏನು? ಈ ಆಚರಣೆ ಹಿಂದಿರುವ ಉದ್ದೇಶ ಏನು? ಅನಿವಾಸಿ ಭಾರತೀಯ ದಿನ ಆಚರಣೆ ಆರಂಭವಾಗಿದ್ದು ಯಾವಾಗಿನಿಂದ? ಈ ದಿನದಂದು ಎನ್‌ಆರ್‌ಐಗಳನ್ನು ಭಾರತ ಸರ್ಕಾರ ಹೇಗೆ ಗೌರವಿಸುತ್ತದೆ? ಇಂಥ ಹಲವು ಕುತೂಹಲ ವಿಷಯಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಭಾರತದ ಅಭಿವೃದ್ಧಿಯಲ್ಲಿ ಪ್ರವಾಸಿ ಭಾರತೀಯ ಸಮುದಾಯದ (ಎನ್‌.ಆರ್.ಐ) ಕೊಡುಗೆ ಅಪಾರ. ಪ್ರಪಂಚದ ವಿವಿಧ ಮೂಲೆಗಳಲ್ಲಿ ಇದ್ದುಕೊಂಡು ಭಾರತವನ್ನು ಪ್ರತಿನಿಧಿಸುವ ಅವರ ಕೊಡುಗೆಯನ್ನು ಗುರುತಿಸಲು ಹಾಗೂ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷದ ಜನವರಿ 9 ರಂದು ಪ್ರವಾಸಿ ಭಾರತೀಯ ದಿನವನ್ನು ಆಚರಿಸಲಾಗುತ್ತಿದೆ. ಈ ಆಚರಣೆ ವಿದೇಶಿ ಭಾರತೀಯ ಸಮುದಾಯಕ್ಕೆ ಭಾರತ ಸರ್ಕಾರ ಮತ್ತು ಭಾರತೀಯ ಸಮುದಾಯಗಳೊಂದಿಗೆ ಪರಸ್ಪರ ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ. ಅಲ್ಲದೇ ವಿದೇಶಗಳಲ್ಲಿರುವ ಇನ್ನಿತರ ಭಾರತೀಯರ ಪರಸ್ಪರ ಭೇಟಿಗೂ ವೇದಿಕೆ ಕಲ್ಪಿಸುತ್ತದೆ. ಇದನ್ನು ಎನ್‌ಆರ್‌ಐ ಭಾರತೀಯರ ದಿನ ಎಂದೂ ಕರೆಯಲಾಗುತ್ತದೆ.
2003ರಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಸ್ಮರಿಸಲೋಸುಗ ಈ ಆಚರಣೆಯನ್ನು ಪ್ರಾರಂಭಿಸಲಾಯ್ತು. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ವಾಣಿಜ್ಯ ಮಂಡಳಿ ಒಕ್ಕೂಟ, ಭಾರತೀಯ ಕೈಗಾರಿಕಾಚಒಕ್ಕೂಟ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದಿಂದ ಸಹಯೋಗದಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಪ್ರತೀ ವರ್ಷಕ್ಕೊಮ್ಮೆ ನಡೆಸಲಾಗುತ್ತಿದ್ದ ಈ ಆಚರಣೆ 2015ರ ಬಳಿಕ ಪ್ರತೀ ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತಿದೆ. ಈ ದಿನ ನಡೆಯುವ ಸಮಾವೇಶದಲ್ಲಿ ಅನಿವಾಸಿಗಳಿಗೆ ಭಾರತ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ
ದೇಶದ ಪ್ರತಿಯೊಂದು ಹಬ್ಬ, ಆಚರಣೆಗೆ ವಿವಿಧ ಹಿನ್ನೆಲೆ ಇರುವಂತೆ ಪ್ರವಾಸಿ ಭಾರತೀಯ ದಿನಕ್ಕೂ ತನ್ನದೇ ಆದ ಇತಿಹಾಸ ಇದೆ. ದಕ್ಷಿಣ ಆಫ್ರಿಕಾದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿ, ಕಪ್ಪು ಜನಾಂಗದವರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಹೋರಾಟ ಮಾಡಿ ಭಾರತಕ್ಕೆ ಮಹಾತ್ಮ ಗಾಂಧಿ ಮರಳಿದ ದಿನವನ್ನೇ ಪ್ರವಾಸಿ ಭಾರತೀಯ ದಿನವನ್ನಾಗಿ ಆಚರಿಸಲಾಗುತ್ತದೆ. 1915 ರ ಜನವರಿ 9 ರಂದು ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಹಿಂದಿರುಗಿದ್ದರು. ಅವರ ಆ ಐತಿಹಾಸಿಕ ಮರಳುವಿಕೆಯ ನೆನಪಿಗೋಸ್ಕರ ಪ್ರವಾಸಿ ಭಾರತೀಯ ದಿನವನ್ನು ಆಚರಿಸಲಾಗುತ್ತದೆ.
2003 ರಲ್ಲಿ ಆರಂಭವಾದ ಈ ದಿನಾಚರಣೆಯನ್ನು, ದೇಶದ ಯಾವುದಾದರೊಂದು ಪ್ರಮುಖ ನಗರದಲ್ಲಿ ಸಮಾವೇಶ ನಡೆಸುವ ಮೂಲಕ ಆಚರಿಸಲಾಗುತ್ತದೆ. 2003ರ ಸಮಾವೇಶ ದೆಹಲಿಯಲ್ಲಿ ನಡೆದಿದ್ದರೇ, 2019ರ ಸಮಾವೇಶ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ನಡೆದಿತ್ತು. 2017ರಲ್ಲಿ ಬೆಂಗೂರಿನಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಈ ಬಾರಿ ಕೋವಿಡ್‌ನಿಂದಾಗಿ ವರ್ಚ್ಯುವಲ್‌ ಸಮಾರಂಭ ನಡೆಯಲಿದೆ. ಈವರಗೆ ಒಟ್ಟು 15 ಸಮಾವೇಶಗಳು ನಡೆದಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ‘ಸ್ಥಳೀಯ ಅನಿವಾಸಿ ಭಾರತೀಯರ ದಿನ’ ಎನ್ನುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಮೆರಿಕ, ಸಿಂಗಾಪುರ, ಬ್ರಿಟನ್‌ ಸೇರಿದಂದತೆ ವಿವಿಧ ದೇಶಗಳಲ್ಲಿ
ಪ್ರವಾಸಿ ಭಾರತೀಯರನ್ನು ಗೌರವಿಸಲೆಂದೇ ಈ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕಾರ್ಯಕ್ರಮಕ್ಕೂ ಕೆಲ ದಿನಗಳ ಮುನ್ನ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲಿ ವಿಜೇತರಿಗೆ ಸಮಾವೇಶದಲ್ಲಿ ಪ್ರಶಸ್ತಿ ವಿತರಣೆ ನಡೆಯುತ್ತದೆ. ಈ ಬಾರಿ ‘ಭಾರತ್‌ ಕೋ ಜಾನಿಯೇ’ ಎಂಬ ಪರಿಕಲ್ಪನೆಯಡಿ ಕ್ವಿಜ್‌ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಲ್ಲದೇ ಈ ಸಮಾರಂಭದಲ್ಲಿ ವಿದೇಶದಲ್ಲಿ ಸಾಧನೆ ಮಾಡಿದ ಎನ್‌ಆರ್‌ಐಗಳಿಗೆ ಪ್ರತಿಷ್ಠಿತ “ಪ್ರವಾಸಿ ಭಾರತೀಯ ಸಮ್ಮಾನ್” ಎನ್ನುವ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ನೀಡಿ ಗೌರವಿಸುತ್ತಾರೆ. ಪ್ರತೀ ಸಮಾವೇಶದಲ್ಲೂ ಯಾವುದಾದರೊಂದು ದೇಶದ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಅಥವಾ ಉನ್ನತ ಅಧಿಕಾರಿಗಳು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ಈ ಬಾರಿಯ ಸಮಾವೇಶದಲ್ಲಿ, ದಕ್ಷಿಣ ಅಮೆರಿಕದ ಸುರಿನೇಮ್‌ ರಾಷ್ಟ್ರದ ಅಧ್ಯಕ್ಷ ಚಾನ್‌ ಸಂತೋಕಿಯವರು ಭಾಗವಹಿಸಲಿದ್ದಾರೆ.
ಪ್ರತೀ ವರ್ಷದ ಸಮಾವೇಶವನ್ನು ನಿರ್ದಿಷ್ಟ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗುತ್ತದೆ. ಈ ಬಾರಿಯ ಕಾರ್ಯಕ್ರಮವನ್ನು ಆತ್ಮನಿರ್ಭರ ಭಾರತದಲ್ಲಿ ವಲಸೆಗಾರರ ಪಾತ್ರ ಎಂಬ ಪರಿಕಲ್ಪನೆಯಡಿ ಆಯೋಜಿಸಲಾಗಿದೆ. ಈ ಸಮಾವೇಶವು ಎರಡು ಸಮಗ್ರ ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಕೋವಿಡ್ ಬಳಿಕದ ಸವಾಲುಗಳನ್ನು ಎದುರಿಸುವುದು – ಆರೋಗ್ಯ, ಆರ್ಥಿಕತೆ, ಸಾಮಾಜಿಕ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಸನ್ನಿವೇಶ ಮುಂತಾದ ವಿಷಯಗಳ ಬಗ್ಗೆ ಕೇಂದ್ರ ಸಚಿವರು ಮಾತನಾಡಲಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...