‘ರಾಜಕುಮಾರ’, ‘Mr & Mrs. ರಾಮಾಚಾರಿ’, ‘ಯುವರತ್ನ’ ಸಿನಿಮಾದ ನಿರ್ದೇಶಕ ಸಂತೋಷ್ ಆನಂದ್ರಾಮ್ ಕೊನೆಗೂ ತಮ್ಮ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ಡಿಸೆಂಬರ್ನಲ್ಲಿ ನ್ಯೂಸ್ ಫಸ್ಟ್ ನೀಡಿದ್ದ ಎಕ್ಸ್ಕ್ಲೂಸಿವ್ ಮಾಹಿತಿ ಪ್ರಕಾರ, ಸಂತೋಷ್ ಆನಂದ್ರಾಮ್ ತಮ್ಮ ನೆಕ್ಸ್ಟ್ ಸಿನಿಮಾವನ್ನೂ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ಮಾಡಲು ಹೊರಟಿದ್ದಾರೆ. ಯೆಸ್.. ಮತ್ತೊಮ್ಮೆ ಆನಂದ್ರಾಮ್-ಪುನೀತ್ ಜೋಡಿ ಒಂದಾಗಲಿದೆ. ಅಂದ್ಹಾಗೇ, ಇವರಿಗೆ ಮತ್ತೆ ಜೊತೆಯಾಗ್ತಿರೋದು ಹೊಂಬಾಳೆ ಫಿಲ್ಮ್ಸ್ ವಿಜಯ್ ಕಿರಗಂದೂರ್.
ವಿಜಯ್ ಕಿರಗಂದೂರ್ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ, ಈಗಾಗಲೇ ಸಂತೋಷ್ ಆನಂದ್ರಾಮ್ ‘ರಾಜಕುಮಾರ’ ಹಾಗೂ ‘ಯುವರತ್ನ’ ಸಿನಿಮಾಗಳಿಗೆ ಹೂಡಿಕೆ ಮಾಡಿದ್ದಾರೆ. ಇದೀಗ ಮುಂದಿನ ಸಿನಿಮಾಗೂ ಬಂಡವಾಳ ಹೂಡಲಿದ್ದು, ಮೂರನೇ ಬಾರಿಗೆ ಈ ತ್ರಿವಳಿಗಳ ಸಂಗಮ ಆಗಲಿದೆ.
ಇನ್ನು ಈ ಬಗ್ಗೆ ಸ್ವತಃ ನಿರ್ದೇಶಕ ಸಂತೋಷ್ ಆನಂದ್ರಾಮ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ‘ಯುವರತ್ನ’ ರಿಲೀಸ್ಗೂ ಮುಂಚೆಯೇ ಈ ನಿರ್ದೇಶಕರು ಈ ಸುದ್ದಿ ನೀಡಿರೋದು ವಿಶೇಷ. ‘ಬಹಳ ಜನ ನನ್ನ ಮುಂದಿನ ಸಿನಿಮಾ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೊತೆನಾ ಅಂತ ಕೇಳ್ತಿದ್ರಿ.. ಹೌದು, ನಾನು ನನ್ನ ಮುಂದಿನ ಸಿನಿಮಾವನ್ನ ಮತ್ತೆ ನನ್ನ ಐಕಾನ್ ಪುನೀತ್ ರಾಜ್ಕುಮಾರ್ ಜೊತೆ ಮಾಡಲಿದ್ದೇನೆ. ಅವರ ಜೊತೆ ಮೂರನೇ ಬಾರಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ನನ್ನ ಮೇಲಿರಲಿ’ ಅಂತ ಬರೆದು ಅಭಿಮಾನಿಗಳಿಗೆ ಸೂಪರ್ ನ್ಯೂಸ್ ನೀಡಿದ್ದಾರೆ.