224 ಮಂದಿ ಶಾಸಕರ ಶೀಲ ಪರೀಕ್ಷಿಸಲು ಸಿಎಂಗೆ ಪತ್ರಬರೆಯಲಿ!

admin
2 Min Read

224 ಮಂದಿಯ ಶೀಲ ಪರೀಕ್ಷೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರು ಸಚಿವ ಸುಧಾಕರ್ ವಿರುದ್ಧ ಹರಿಹಾಯ್ದಿದ್ದಾರೆ.

ತುಮಕೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸುಧಾಕರ್ ಅವರು ಶಾಸಕರ ಶೀಲ ಪರೀಕ್ಷೆ ಮಾಡಲಿ. 224 ಜನ ಶಾಸಕರನ್ನ ತನಿಖೆ ಮಾಡಬೇಕು ಎಂದು ಸಚಿವ ಸುಧಾಕರ್ ಸಿಎಂಗೆ ಪತ್ರ ಬರೆಯಲಿ. ಹೇಗಿದ್ರೂ ಅವರು ಆರೋಗ್ಯ ಮಂತ್ರಿ, ಹಾಗಾಗಿ ಶೀಲ ಪರೀಕ್ಷೆ ಮಾಡುವಂತೆ ಸಿಎಂಗೆ ಪತ್ರ ಬರೆಯಲಿ ಎಂದು ಗರಂ ಆಗಿದ್ದಾರೆ.

ಮನುಷ್ಯನ ದೇಹದ ಅಂಗಾಂಗಗಳ ಬಗ್ಗೆ ಆರೋಗ್ಯ ಸಚಿವರಿಗೆ ಅರಿವಿದೆ. ಅವು ಹೇಗೆ ಕೆಲಸ ಮಾಡುತ್ತವೆ ಅನ್ನೋದು ಅವರಿಗೆ ತಿಳಿದಿದೆ. ಹಾಗಾಗಿ ಅವರೇ ಮುಖ್ಯಮಂತ್ರಿಗೆ ಹೇಳಿ ಪರೀಕ್ಷೆ ಮಾಡಿಸಲಿ ಎಂದು ಸಚಿವರ ವಿರುದ್ಧ ಮಾಜಿ ಶಾಸಕರು ಕಿಡಿಕಾರಿದ್ದಾರೆ.

ಸುಧಾಕರ್ ಹೇಳಿದ್ದೇನು..?
ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುಧಾಕರ್ ವಿಪಕ್ಷ ನಾಯಕರಿಗೆ ಸವಾಲು ಎಸೆದರು. ಕಾನೂನಿನ ಪ್ರಕಾರ ನ್ಯಾಯಾಲಯದಿಂದ ರಕ್ಷಣೆ ಪಡೆದಿದ್ದೇವೆ. ಆರೋಪಗಳನ್ನ ಮಾಡುವ ನಾಯಕರು ಸಂವಿಧಾನಕ್ಕೆ ಗೌರವ ನೀಡಬೇಕು. ರಾಷ್ಟ್ರೀಯ ನಾಯಕರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮರ್ಯಾದೆ ಪುರುಷರು, ಶ್ರೀರಾಮಚಂದ್ರ ಅನ್ಕೊಂಡು ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ನೀವು ನಿಮ್ಮ ಜೀವನದಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ? ಮಾನ್ಯ ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ ಶಿವಕುಮಾರ್ ಮತ್ತು ನನ್ನನ್ನು ಸೇರಿದಂತೆ ಎಲ್ಲ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆ ಆಗಲಿ. ಯಾರಿಗೆ ಅನೈತಿಕ ಸಂಬಂಧ ಇದೆ, ವಿವಾಹವೇತರ ಸಂಬಂಧ ಇದೆ ಎಂಬುದು ಗೊತ್ತಾಗಲಿ. ಸಿಎಂ ಆಗಿದ್ದಾಗ ಯಾರು ಏನು ಮಾಡಿದ್ರು ಅನ್ನೋದು ಗೊತ್ತಾಗಲಿ. ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ.ಶಿವಕುಮಾರ್ ಏನು ಏಕಪತ್ನಿವ್ರತಸ್ಥರಾ? ನೈತಿಕತೆ ಬಗ್ಗೆ ಮಾತನಾಡೋರು ಮಾದರಿ ಆಗಿದ್ದರೆ ತನಿಖೆಗೆ ಎಲ್ಲರೂ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದ್ದರು. ಸುಧಾಕರ್ ಈ ಹೇಳಿಕೆ ಇಂದು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯೇ ಎಬ್ಬಿಸಿದ್ದು, ವಿರೋಧ ಪಕ್ಷ ಮಾತ್ರವಲ್ಲದೇ ತಮ್ಮದೇ ಪಕ್ಷದ ನಾಯಕರು ಕೂಡ ಸಚಿವರ ವಿರುದ್ಧ ಕಿಡಿಕಾರಿದರು.

Share This Article
Leave a Comment